ಸ್ಪೀಕರ್, ಸಿಎಂ ಇಲ್ಲ; ಗವರ್ನರ್ ಒಬ್ರೇ ಇರೋದು!

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಹಿರಿಯ ರಾಜಕಾರಣಿ ಉದಾಸಿ ನೇತೃತ್ವದಲ್ಲಿ ಇಂದು ಬಿಜೆಪಿಯ ಅನೇಕ ಶಾಸಕ/ಸಚಿವರು ಕರ್ನಾಟಕ ಜನತಾ ಪಕ್ಷವನ್ನು ಅಪ್ಪಿಕೊಳ್ಳಲು ತರಾತುರಿಯಲ್ಲಿದ್ದಾರೆ ಎಂದು ಅತ್ಯಂತ ಗುಪ್ತ ಮಾಹಿತಿ ಪಡೆದ ಬಿಜೆಪಿ ನಾಯಕರು ಶಸ್ತ್ರತ್ಯಾಗ ಮಾಡಿ, ಪರಾರಿಯಾಗಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಆದರೂ, ಹೀಗೆ ಸಿಎಂ ಶೆಟ್ಟರ್ ಅವರ ಸರಕಾರವನ್ನು ಉದುರಿಸಲು ಯಡಿಯೂರಪ್ಪಗೂ ಕಷ್ಟಕಷ್ಟವಾಗಿದೆ ಎನ್ನಲಾಗಿದೆ. ಏಕೆಂದರೆ ಈ ತಕ್ಷಣಕ್ಕೆ ಸರಕಾರವನ್ನು ಬೀಳಿಸಬೇಕು ಅಂದರೆ ಕನಿಷ್ಠ 15 ಶಾಸಕ ಮಿತ್ರರು ರಾಜೀನಾಮೆ ನೀಡಲೇಬೇಕು. ನೆಹರೂ ಓಲೇಕಾರ ಅವರ ಪ್ರಕಾರ 4 ಸಚಿವರು, 20 ಶಾಸಕರು ಇಂದು ರಾಜೀನಾಮೆ ಸಲ್ಲಿಸಲಿದ್ದಾರೆ.
ಆದರೆ ಅಷ್ಟು ಮಂದಿ ಯಡಿಯೂರಪ್ಪ ಮನೆಯಲ್ಲಿ ಇಂದು ಬೆಳಗ್ಗೆ ಟಿಫಿನ್ ತಿನ್ನಲು ಬರುತ್ತಾರಾ ಎಂಬುದೇ ಸದ್ಯದ ಪ್ರಶ್ನೆ. 15 ಮಂದಿಯಾದರೂ ಯಡಿಯೂರಪ್ಪ ಅವರತ್ತ ಸುಳಿಯದಿದ್ದರೆ ಸರಕಾರ ಸೇಫ್. ಮತ್ತು ಪ್ರವಾಸಕ್ಕೆಂದು ಹೊರಟಿರುವ ಇಬ್ಬರೂ ಗಣ್ಯ ವ್ಯಕ್ತಿಗಳು ಸರಕಾರ ಸೇಫ್ ಆಗಿದೆ ಎಂಬ ಖಾತ್ರಿ ಸಿಕ್ಕಿದ ನಂತರವಷ್ಟೇ ವಾಪಸಾಗುವ ಲಕ್ಷಣಗಳಿವೆ.
ಈ ಹಿನ್ನೆಲೆಯಲ್ಲಿ ಇಂದು ವಿಧಾನಸೌಧ ಮತ್ತು ಗವರ್ನರ್ ನಿವಾಸದ ಜತೆಗೆ ಕೆಜೆಪಿ ಹೈಕಮಾಂಡ್ ಧವಳಗಿರಿಯತ್ತ ಕಣ್ಣಿಡಲಾಗಿದ್ದು, ಇಡೀ ದಿನದ ಪ್ರಹಸನಗಳನ್ನು ಕಾಲಕಾಲಕ್ಕೆ 'ಒನ್ಒಂಡಿಯಾ ಕನ್ನಡ' ಓದುಗರಿಗೆ ತಲುಪಿಸಲು ನಾವೂ ಸಿದ್ಧವಾಗಿದೆ.
ಇಂದಿನ ವಿದ್ಯಮಾನಗಳ ಕೇಂದ್ರ ಬಿಂದು, ಮಾಜಿ ಸಿಎಂ ಯಡಿಯೂರಪ್ಪ ಅವರು ಶಿವಾನಂದ ಸರ್ಕಲ್ಲಿನಲ್ಲಿರುವ ಸಿಎಂ ಉದಾಸಿ ನಿವಾಸಕ್ಕೆ ಇದೀಗತಾನೆ ಧಾವಿಸಿದ್ದಾರೆ. ಅಲ್ಲಿ ಕೆಜೆಪಿ ಸೇರಲಿರುವ ಶಾಸಕ/ಸಚಿವರಿಗಷ್ಟೇ ಇಂದು ಉಪಾಹಾರ ಏರ್ಪಡಿಸಲಾಗಿದೆ.
ರಾಜಿನಾಮೆ ನೀಡುವ ಸಂಭವನೀಯರು:
ಸಚಿವರು- ಶೋಭಾ ಕರಂದ್ಲಾಜೆ, ಸಿಎಂ ಉದಾಸಿ.
ಶಾಸಕರು- ನೆಹರು ಓಲೇಕಾರ್, ಬಿಪಿ ಹರೀಶ್, ಎಂ ಚಂದ್ರಪ್ಪ, ಎಸ್.ಐ ಚಿಕ್ಕನಗೌಡ್ರ, ಹರತಾಳು ಹಾಲಪ್ಪ, ಡಿಎಸ್ ಸುರೇಶ್, ಬಸವರಾಜ ಪಾಟೀಲ ಅಟ್ಟೂರು, ಸುರೇಶ್ಗೌಡ ಪಾಟೀಲ, ಜಿ ಶಿವಣ್ಣ, ತಿಪ್ಪೇಸ್ವಾಮಿ (ಚಳ್ಳಕೆರೆ), ವಿಠಲ ಕಟಕದೋಂಡ.
ವಿಧಾನಸಭೆಯ ಸದ್ಯದ ಸಂಖ್ಯಾಬಲ
ಬಿಜೆಪಿ- 117
ಕಾಂಗ್ರೆಸ್ - 71
ಜೆಡಿಎಸ್- 26
ಪಕ್ಷೇತರರು- 07
ಸ್ಪೀಕರ್ - 01
ಖಾಲಿ ಸ್ಥಾನ- 02
ಒಟ್ಟು- 224












Click it and Unblock the Notifications