ಕರ್ನಾಟಕದಲ್ಲಿ ಈ ಬಾರಿ ಬೇಸಿಗೆ ಭಯಂಕರ!

ಕರ್ನಾಟಕ ಇತ್ತೀಚಿನ ವರ್ಷಗಳಲ್ಲಿ ಕಂಡಿರದಂತಹ ಮಳೆಯ ಅಭಾವವನ್ನು ಎದುರಿಸಿದೆ. ಅನೇಕ ಜಿಲ್ಲೆಗಳು ಬರಕ್ಕೆ ತುತ್ತಾಗಿವೆ. ದನಕರುಗಳಿಗೆ, ಜನರಿಗೆ ಕುಡಿಯುವುದಕ್ಕಿರಲಿ ಬಳಸುವುದಕ್ಕೂ ನೀರಿಲ್ಲ. ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇನ್ನೂ ಜನವರಿ ಕಳೆದಿದ್ದ ಆಗಲೆ ನೀರಿನ ವರಿ ಆರಂಭವಾಗಿದೆ.
ಕೆಆರ್ಎಸ್, ಕಬಿನಿ ಜಲಾಶಯಗಳಲ್ಲಿ ನೀರಿನ ಶೇಖರಣೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ನಗರಗಳಿಗೆ ನೀರು ಒದಗಿಸುವ ಇತರೆ ಸಣ್ಣ ಜಲಾಶಯಗಳು ಒಣಗಿಹೋಗಿವೆ. ಬೋರ್ ವೆಲ್ಗಳ ವಿಪರೀತ ಹಾವಳಿಯಿಂದಾಗಿ ಅಂತರ್ಜಲ ಬತ್ತಿಹೋಗಿದೆ. ನೀರಿನ ಲಭ್ಯತೆ ಇರುವವರು ವಿವೇಚನೆ ಇಲ್ಲದೆ ದುಂದುವೆಚ್ಚ ಮಾಡುತ್ತಿದ್ದಾರೆ.
ಅನೇಕ ಹಳ್ಳಿಗಳಲ್ಲಿ ಮತ್ತು ನಗರಗಳಲ್ಲಿ ಜನರು ಟ್ಯಾಂಕರ್ ಮುಖಾಂತರ ಒದಗಿಸಲಾಗುವ ನೀರನ್ನು ಅವಲಂಬಿಸಿದ್ದಾರೆ. ಅದಾದರೂ ಇನ್ನೆಷ್ಟು ದಿನವೋ? ಅಧಿಕಾರ ಹಿಡಿದಿರುವ ನಮ್ಮ ರಾಜಕಾರಣಿಗಳು ಮಾತ್ರ ಬಜೆಟ್ ಮಂಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಂತರ ಬೇಸಿಗೆ ಮುಗಿಯುವ ಮುನ್ನವೇ ವಿಧಾನಸಭೆ ಚುನಾವಣೆಯೂ ಬರಲಿದೆ.
ಈಗಲೇ ರಾಜಕಾರಣಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ತಮ್ಮೆಲ್ಲ ಕೆಲಸಗಳನ್ನು ಬದಿಗಿಟ್ಟು ನೀರಿನ ಬಗ್ಗೆ ತಲೆಕೆಡಿಸಿಕೊಳ್ಳದಿದ್ದರೆ ಬೇಸಿಗೆ ನಿಜಕ್ಕೂ ಭಯಂಕರವಾಗಿರಲಿದೆ ಎಂದು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಪ್ರಾಧಿಕಾರದ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ 15 ಸಾವಿರ ಹಳ್ಳಿಗಳಿಗೆ ಬೇಸಿಗೆ ನೀರಿನ ಬಿಸಿ ಮುಟ್ಟಿಸಲಿದ್ದರೆ, ಏಳೂವರೆ ಸಾವಿರ ಹಳ್ಳಿಗಳಲ್ಲಿ ನೀರಿನ ವಿಪರೀತ ಕೊರತೆ ಎದುರಾಗಿದೆ. ಮಾರ್ಚ್ ಅಂತ್ಯದೊಳಗಡೆ ಒಂದಿಷ್ಟು ಮಳೆಯಾಗದಿದ್ದರೆ ಪರಿಸ್ಥಿತಿಯನ್ನು ಊಹಿಸುವುದೂ ಕಷ್ಟ ಎಂಬಂತಾಗಿದೆ.
ಬೆಂಗಳೂರು, ಮೈಸೂರು, ಮಂಗಳೂರು ನಗರಗಳಲ್ಲಿ ನೀರಿನ ಬಳಕೆಯ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸಲಾಗಿದೆ. ಬಳಸಿರುವ ನೀರನ್ನೇ ಮರುಬಳಸುವ ಬಗ್ಗೆ ಚಿಂತನೆ ನಡೆಸಬೇಕೆಂದು ಕಿವಿಮಾತು ಹೇಳಲಾಗಿದೆ. ಕೇಳಿದವರು ಬದುಕಿಕೊಳ್ಳುತ್ತಾರೆ. ಇನ್ನು ಯಾವತ್ತೂ ನೀರಿನ ಬವಣೆ ಎದುರಿಸುತ್ತಲೇ ಬಂದಿರುವ ಹುಬ್ಬಳ್ಳಿ-ಧಾರವಾಡದಲ್ಲಿ ನೀರು ಬಂದ ದಿನ ಹಬ್ಬ ಎಂಬಂತಾಗಿದೆ.
ನೀರು ನಿರ್ವಹಣಾ ತಜ್ಞರು ಹೇಳುವುದೇನೆಂದರೆ, ಜಲಾಶಯಗಳಲ್ಲಿ ಈಗಾಗಲೆ ನೀರು ತಳಮಟ್ಟ ತಲುಪಿದೆ. ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ ಬಗ್ಗೆ ಚಿಂತನೆ ನಡೆಸುವ ಕಾಲ ಮಿಂಚಿಹೋಗಿದೆ. ಈಗೇನಿದ್ದರೂ ಕ್ರಮ ತೆಗೆದುಕೊಳ್ಳಬೇಕು.
ಬೆಂಗಳೂರಿನಂತಹ ನಗರಗಳಲ್ಲಿ ಅಕ್ರಮವಾಗಿ ನೀರಿನ ಸಂಪರ್ಕ ಪಡೆದವರ ಮೇಲೆ ನೀರು ಸರಬರಾಜು ಮಂಡಳಿ ಮುಗಿಬಿದ್ದಿದೆ. ಅಕ್ರಮವಾಗಿ ನೀರು ಬಳಸುತ್ತಿರುವವರ ಸಂಪರ್ಕವನ್ನು ಕಟ್ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಗಡ್ಡಕ್ಕೆ ಬೆಂಕಿ ಬಿದ್ದಿದೆ ಈಗ ಬಾವಿ ತೋಡುತ್ತಿದ್ದಾರೆ!












Click it and Unblock the Notifications