ಚುನಾವಣೆ ಕಹಳೆ ಮೊಳಗಿಸಿದ ಸೋನಿಯಾ ಗಾಂಧಿ
ಜೈಪುರ, ಜ.18: ಕಾಂಗ್ರೆಸ್ ಪಕ್ಷವೊಂದೇ ಅಖಿಲ ಭಾರತ ಪಕ್ಷ, ದೇಶದ ಎಲ್ಲಾ ಜನತೆ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಚುನಾವಣೆ ಕಹಳೆ ಮೊಳಗಿಸಿದ್ದಾರೆ.
ಶುಕ್ರವಾರ(ಜ.18) ಆರಂಭಗೊಂಡ ಎರಡು ದಿನಗಳ ಚಿಂತನ ಶಿಬಿರ ಉದ್ಘಾಟಿಸಿ ಮಾತನಾಡಿದ ಸೋನಿಯಾ ಗಾಂಧಿ ಅವರು, ಮಹಿಳೆಯರು, ದೀನ ದಲಿತರ, ಮಹಿಳೆಯರ ರಕ್ಷಣೆ ನಮ್ಮ ಪ್ರಮುಖ ಆದ್ಯತೆ ಎಂದರು.

ಸಾಮಾಜಿಕ ನ್ಯಾಯ, ಗ್ರಾಮೀಣ ಭಾಗದ ಅಭಿವೃದ್ಧಿ ಯುಪಿಎ ಮಾತ್ರ ಮಾಡಲು ಸಾಧ್ಯ. ಮಹಿಳಾ ಸಬಲೀಕರಣ ಯೋಜನೆಗಳೆ ಇದಕ್ಕೆ ಸಾಕ್ಷಿ. ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಸುಧಾರಿಸಬೇಕಾದರೆ, ನಾಗರಿಕ ನಡವಳಿಕೆ ಮುಖ್ಯ. ಪರಸ್ಪರ ಗೌರವಾದರ ಇದ್ದರೆ ಮಾತ್ರ ಮಾತುಕತೆ ಸಾಧ್ಯ ಎಂದಿದ್ದಾರೆ.
ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್? : ಇದೇ ಚಿಂತನ ಶಿಬಿರದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಿದೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ಸಿನಿಂದ ರಾಹುಲ್ ಗಾಂಧಿ ನೇರ ಸ್ಪರ್ಧೆಗೆ ಇಳಿಯಲಿದ್ದಾರೆ ಎನ್ನಲಾಗಿದೆ. ಆದರೆ, ಇದುವರೆವಿಗೂ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಘೋಷಿಸಿಲ್ಲ.
ಕೇಂದ್ರ ಪರಿಸರ ಖಾತೆ ಸಚಿವೆ ಜಯಂತಿ ನಟರಾಜನ್ ಅವರು ರಾಹುಲ್ ಗಾಂಧಿ ಅವರು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಚುನಾವಣೆ ಕಾರ್ಯತಂತ್ರ: ಈ ವರ್ಷ ಕರ್ನಾಟಕ, ಬಿಹಾರ, ಮಧ್ಯಪ್ರದೇಶ, ಈಶಾನ್ಯ ರಾಜ್ಯ ಸೇರಿದಂತೆ 8 ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಇನ್ನು 16 ತಿಂಗಳಲ್ಲಿ ಲೋಕಸಭೆಯ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಎಐಸಿಸಿ ನಾಯಕತ್ವವನ್ನು ರಾಹುಲ್ ಗಾಂಧಿಗೆ ವಹಿಸಬೇಕು ಎಂಬ ಸಲಹೆಗಳು ಕೇಳಿ ಬಂದಿದೆ.
ಮೊದಲ ಬಾರಿಗೆ ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಪ್ರಮುಖರನ್ನು ಎಐಸಿಸಿ ತನ್ನ ಚಿಂತನಾ ಶಿಬರಕ್ಕೆ ಆಹ್ವಾನಿಸಿರುವುದು ವಿಶೇಷ. ಎಐಸಿಸಿ ಕಾರ್ಯಕಾರಿ ಸಮಿತಿ ನಾಯಕರು, ವಿಧಾನಸಭಾ ಚುನಾವಣೆ ನಡೆಯುವ ರಾಜ್ಯದ ಪ್ರತಿನಿಧಿಗಳು ಸೇರಿದಂತೆ 350ಕ್ಕೂ ಅಧಿಕ ಪ್ರಮುಖರು ಶಿಬಿರದಲ್ಲಿ ಚಿಂತನ ಮಂಥನ ನಡೆಸಲಿದ್ದಾರೆ.
ಈ ನಡುವೆ ಮುಂಬರುವ ಚುನಾವಣೆಗಳಲ್ಲಿ ಜೆಡಿಯು ಹಾಗೂ ಬಿಜೆಡಿ(ಬಿಹಾರದಲ್ಲಿ) ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಬೇರು ಸಮೇತ ಕಿತ್ತು ಹಾಕಲು ಕಾಂಗ್ರೆಸ್ ಪಣತೊಟ್ಟಿದೆ.












Click it and Unblock the Notifications