ವಿದ್ಯಾರ್ಥಿನಿಯರ ಮೈಮುಟ್ಟಿದ ಶಿಕ್ಷಕನಿಗೆ ಬಾಸುಂಡೆ

ಮೊದಲನೇ ಘಟನೆ ಹುಬ್ಬಳ್ಳಿಯ ವಿದ್ಯಾಪೀಠ ಶಾಲೆಯಲ್ಲಿ ಶನಿವಾರ ನಡೆದಿದ್ದರೆ, ಎರಡನೇ ಘಟನೆ ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿ ಬಳಿಯ ನಾಗೇನಹಟ್ಟಿ ಗ್ರಾಮದಲ್ಲಿ ನಡೆದಿದೆ. ನಾಗೇನಹಟ್ಟಿಯಲ್ಲಿ ಮೋಹನ್ ಪಾಟೀಲ ಎಂಬ ಶಿಕ್ಷಕನನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮರಾಠಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿರುವ ಮೋಹನ್ ಪಾಟೀಲ ಕೆಲ ತಿಂಗಳುಗಳಿಂದ ವಿದ್ಯಾರ್ಥಿನಿಯರೊಡನೆ ಅನುಚಿತವಾಗಿ ವರ್ತಿಸುತ್ತಿದ್ದ. ಆರನೇ ಮತ್ತು ಏಳನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರನ್ನು ಪಕ್ಕಕ್ಕೆ ಕುಳ್ಳಿರಿಸಿಕೊಂಡು ಅವರ ದೇಹದ ಮೇಲೆಲ್ಲ ಕೈಯಾಡಿಸುತ್ತಿದ್ದ ಎಂದು ಮರಾಠಿ ಮಾಧ್ಯಮ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಕೆಲ ಬಾರಿ ತಮ್ಮ ತೊಡೆಯ ಮೇಲೆ ಕೂಡಬೇಕೆಂದು ಅವರನ್ನು ಪೀಡಿಸುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಶಿಕ್ಷಕನ ಕಾಮುಕ ಹಿಂಸೆಯನ್ನು ತಾಳಲಾರದೆ ವಿದ್ಯಾರ್ಥಿನಿಯರಿಬ್ಬರು ತಮ್ಮ ಪಾಲಕರಿಗೆ ದೂರಿದ್ದಾರೆ. ಪಾಲಕರು ಗ್ರಾಮಸ್ಥರನ್ನು ಸೇರಿಸಿಕೊಂಡು ಶಾಲೆಗೆ ನುಗ್ಗಿ ಮೋಹನ್ ಪಾಟೀಲನನ್ನು ಜಾಡಿಸಿದ್ದಾರೆ. ಆತ ಶಾಲೆಗೆ ತರುವ ಕಾರನ್ನು ಕಲ್ಲಿನಿಂದ ಜಜ್ಜಿ ಜಖಂಗೊಳಿಸಿದ್ದಾರೆ.
ಈ ಪ್ರಕರಣದಲ್ಲಿ ಕೂಡ ಶಿಕ್ಷಕ, ಹುಬ್ಬಳ್ಳಿ ಶಿಕ್ಷಕಿಯಂತೆ, ತಾನೇನು ಮಾಡಿಲ್ಲ ಎಂದು ಸಮಜಾಯಿಶಿ ಕೊಟ್ಟಿದ್ದಾನೆ. ಮೋಹನ್ ಪಾಟೀಲನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ದೂರು ದಾಖಲಿಸಿಕೊಂಡಿದ್ದಾರೆ.
ಗೃಹಿಣಿಯ ಅತ್ಯಾಚಾರಕ್ಕೆ ಯತ್ನ : ಬೆಳಗಾವಿ ಜಿಲ್ಲೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಮತ್ತೊಂದು ಘಟನೆ ವರದಿಯಾಗಿದೆ. ಸಹೋದರರಿಬ್ಬರು ತನ್ನ ತೋಟಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ನವವಿವಾಹಿತೆಯೊಬ್ಬಳು ಕುಡಚಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಈ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೋಗೇರಿ ಎಂಬ ಗ್ರಾಮದಲ್ಲಿ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದ್ದು, ಸಹೋದರರಿಬ್ಬರು ತಲೆಮರೆಸಿಕೊಂಡಿದ್ದಾರೆ. ಹಾರೋಗೇರಿಯಿಂದ ಸ್ವಲ್ಪ ದೂರದಲ್ಲಿರುವ ತೋಟಕ್ಕೆ ತನ್ನನ್ನು ಎಳೆದುಕೊಂಡು ಹೋದ ಸದಾಶಿವ ಮತ್ತು ಶಿವಪುತ್ರಪ್ಪ ಎಂಬ ಸಹೋದರರಿಬ್ಬರು ಅತ್ಯಾಚಾರಕ್ಕೆ ಯತ್ನಿಸಿದರು ಎಂದು ಗೃಹಿಣಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.












Click it and Unblock the Notifications