ಓವೈಸಿ ಬಂಧನ ವಿರೋಧಿಸಿ ಹೈದರಾಬಾದ್ನಲ್ಲಿ ಹಿಂಸಾಚಾರ

ಹಿಂಸಾಚಾರಕ್ಕಿಳಿದವರನ್ನು ಚೆದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಅಶ್ರುವಾಯು ಸಿಡಿಸಿದ್ದಾರೆ. ಆದರೂ ಪರಿಸ್ಥಿತಿ ತಹಬದಿಗೆ ಬಂದಿಲ್ಲ. ನೂರಾರು ಮುಸ್ಲಿಂ ಯುವಕರು ಐತಿಹಾಸಿಕ ಮೆಕ್ಕಾ ಮಸೀದಿಯಿಂದ ಶುಕ್ರವಾರದ ನಮಾಜ್ ಮುಗಿಸಿ ಹೊರಬರುವಾಗ ಈ ಘಟನೆ ನಡೆದಿದೆ.
ಬಂಧಿತನಾಗಿರುವ ಅಕ್ಬರುದ್ದಿನ್ ಓವೈಸಿಯನ್ನು ಕೂಡಲೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಮೆಕ್ಕಾ ಮಸೀದಿಯಿಂದ ಚಾರ್ ಮಿನಾರ್ವರೆಗೆ ನೂರಾರು ಯುವಕರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆ ನಡೆಸುತ್ತಿದ್ದ ಸಮಯದಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಕೆಲವರು ಪೊಲೀಸ್ ಜೀಪನ್ನು ಕಲ್ಲಿನಿಂದ ಕುಟ್ಟಿ ಜಖಂಗೊಳಿಸಿದರು.
ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತೆ ಭಾಷಣ ಮಾಡಿದ್ದ ಚಂದ್ರಯಾನಗುಟ್ಟ ಶಾಸಕ ಅಕ್ಬರುದ್ದಿನ್ ಓವೈಸಿಯನ್ನು ಜ.8, ಮಂಗಳವಾರ ಬಂಧಿಸಲಾಗಿದ್ದು, ಅಬಿದಾಬಾದ್ ಜೈಲಿನಲ್ಲಿ ಇಡಲಾಗಿದೆ. ಓವೈಸಿ ಬಂಧಮುಕ್ತನಾಗುವಂತೆ ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ಕೂಡ ನಡೆಸಲಾಗುತ್ತಿದೆ. ಓವೈಸಿ ಮೇಲಿನ ಎಲ್ಲ ಆರೋಪಗಳು ಸುಳ್ಳು ಎಂದು ಎಂಐಎಂ ನಾಯಕರು ಹೇಳಿದ್ದಾರೆ.
ಪ್ರತಿಭಟನಾ ಮೆರವಣಿಗೆ ನಡೆಸುವ ಮುನ್ನ ಓವೈಸಿಯ ಫೋಟೋ ಹಿಡಿದುಕೊಂಡಿದ್ದ ಕೆಲವರು ಮಸೀದಿ ಒಳಗಿನಿಂದಲೇ ಪೊಲೀಸರು ಮತ್ತು ಮಾಧ್ಯಮದವರ ಮೇಲೆ ಕಲ್ಲು ತೂರಲು ಆರಂಭಿಸಿದರು ಎಂದು ಪೊಲೀಸರು ಹೇಳಿದ್ದಾರೆ. ಮೆರವಣಿಗೆ ನಡೆಸಲು ಸಿದ್ಧತೆ ನಡೆಸುತ್ತಿದ್ದ ಹಂತದಲ್ಲಿ ಅವರನ್ನು ಚೆದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು.
ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದಂತೆ ಅಲ್ಲಲ್ಲಿ ಚೆದುರಿದ ಓವೈಸಿ ಬೆಂಬಲಿಗರು ಸುತ್ತಮುತ್ತಲಿನ ಕಟ್ಟಡಗಳನ್ನು ಏರಿ ಪೊಲೀಸರ ಮೇಲೆ ಕಲ್ಲು ತೂರಲು ಆರಂಭಿಸಿದರು. ನಂತರ ಬೇರೆ ದಾರಿಯಿಲ್ಲದೆ ಪೊಲೀಸರು ಅಶ್ರುವಾಯು ಸಿಡಿಸಬೇಕಾಯಿತು. ಚಾರ್ ಮಿನಾರ್ ಸುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಆ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.












Click it and Unblock the Notifications