ಶೆಟ್ಟರ್ ಸರ್ಕಾರ ಬಿದ್ಹೋಗ್ತಿದ್ದಂಗೆ ಎಲ್ರೂ ಬಿಎಸ್ವೈ ಕಡೆಗೆ

ಆದರೆ ಯಡಿಯೂರಪ್ಪನವರ ಪರಮಮಿತ್ರ ಲೆಹರ್ ಸಿಂಗ್ ಸೇರಿದಂತೆ ಅನೇಕ ಮಹಾಮಹಿಮರು ಯಡಿಯೂರಪ್ಪ ಜತೆ ಗುರುತಿಸಿಕೊಳ್ಳಲು ಹಿಂದೇಟುಹಾಕುತ್ತಿದ್ದಾರೆ. ಕೆಲವರಂತೂ 'ನಮಗೂ ಯಡಿಯೂರಪ್ಪಾಗೂ ಆಗಿ ಬರೋಲ್ಲ. ಅದಕ್ಕೇ ನಾವು ನಮ್ಮ ಮನೆಯಲ್ಲೇ ಇರುತ್ತೇವೆ' ಎಂದು ಕೈಚೆಲ್ಲಿದ್ದಾರೆ.
ಹೀಗೆ ರಾಜಕೀಯ ಸಮೀಕ್ಷೆಗಳು ರಾಜಕಾರಣಿಗಳಂತೆ ಊಸರವಳ್ಳಿ ಬಣ್ಣ ಬಳಿದುಕೊಳ್ಳುತ್ತಿರುವಾಗ 'ನೋಡ್ತಿರಿ, ಈ ಶೆಟ್ಟರ್ ಸರ್ಕಾರ ಪತನಗೊಂಡ ಮರುಘಳಿಗೆಯೇ ಯಡಿಯೂರಪ್ಪ ಅವರು ಇರುವ ಕಡೆಗೆ 70 ಶಾಸಕರು ಓಡೋಡಿ ಬರ್ತಾರೆ' ಎಂದು ಶಾಸಕ ಬಿಪಿ ಹರೀಶ್ ಹೇಳಿದ್ದಾರೆ.
ಹೀಗೆ ಯಡಿಯೂರಪ್ಪ ಅವರಿಗೆ 70 ಶಾಸಕರು ಬೆಂಬಲ ಗ್ಯಾರಂಟಿ ಎನ್ನುತ್ತಿರುವ ಹರೀಶ್ ಇನ್ನೂ ಏನು ಹೇಳಿದ್ದಾರೆಂದರೆ:
'ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡ ಸದಾನಂದ ಗೌಡ, ಈ ಹುದ್ದೆ ಮೇಲೆ ಕಣ್ಣಿಟ್ಟಿರುವ ಕೆಎಸ್ ಈಶ್ವರಪ್ಪ ಹಾಗೂ ಅನಂತ ಕುಮಾರ್ ಅವರಿಗೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಬೇಕಿಲ್ಲ. ಆದ್ದರಿಂದ ಅವರು ಶೆಟ್ಟರ್ಗೆ ಕೆಜೆಪಿ ವಿರುದ್ಧ ಮಾತನಾಡಲು ಒತ್ತಾಯಿಸುತ್ತಿದ್ದಾರೆ. ಅಲ್ಲದೇ ಯಡಿಯೂರಪ್ಪ ಶಕ್ತಿ 14 ಶಾಸಕರಿಗಷ್ಟೇ ಸೀಮಿತ ಎಂದು ಕೆರಳಿಸಲು ನೋಡುತ್ತಿದ್ದಾರೆ'
'ನನ್ನಂತೆ ಬಹುತೇಕ ಶಾಸಕರಿಗೆ ತಾಕತ್ತಿಗಿಂತ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ. ಪ್ರಸಕ್ತ ಹಣಕಾಸು ವರ್ಷದ ಅಂತ್ಯ ಹಾಗೂ ಸರ್ಕಾರದ ಅವಧಿಯ ಕೊನೆ ಘಳಿಗೆಯಲ್ಲಿ ಬಾಕಿ ಉಳಿದಿರುವ ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವತ್ತ ಗಮನ ನೀಡುವ ಶಾಸಕರು ಬೇರಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಸರ್ಕಾರ ಯಾವುದೇ ಕ್ಷಣದಲ್ಲಿ ಪತನವಾದರೂ 65-70 ಶಾಸಕರು ಬಿಎಸ್ವೈ ಮನೆಯಲ್ಲಿರುವುದು ಶತಃಸಿದ್ಧ'.
'ಜನಾದೇಶದಂತೆ ಸರ್ಕಾರ ಅವಧಿ ಪೂರೈಸಲಿ ಎಂಬುದು ಬಿಎಸ್ವೈ ಅಭಿಲಾಷೆ. ದೈವಭಕ್ತರಾದ ಅವರು ಸಂಕ್ರಾಂತಿ ನಂತರದ ಉತ್ತಮ ಕಾಲದಲ್ಲಿ ಪಕ್ಷದ ಮಹತ್ವದ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆಯೇ ಹೊರತು ಸರ್ಕಾರಕ್ಕೆ ಯಾವುದೇ ಗಡುವು ವಿಧಿಸಿಲ್ಲ. ಬಗಲ್ ಮೆ ದುಷ್ಮನ್ ಎಂಬಂತೆ ಸದ್ಯಕ್ಕೆ ಶೆಟ್ಟರ್ಗೆ ಆಪ್ತರಾಗಿರುವವರೇ ಸರ್ಕಾರ ಬೀಳಿಸಿದರೂ ಅಚ್ಚರಿ ಇಲ್ಲ.
ಬೊಮ್ಮಾಯಿ ಸೇರಿದಂತೆ ಬಿಎಸ್ವೈ ಬೆಂಬಲಿಗರು ಕಾಂಗ್ರೆಸ್ನತ್ತ ಮುಖ ಮಾಡಿಲ್ಲ, ಇದೆಲ್ಲ ಕೆಜೆಪಿ ವಿರುದ್ಧ ನಡೆದಿರುವ ಕುತಂತ್ರ. ಇದಕ್ಕೆಲ್ಲ ಯಾರೂ ಮಣಿಯುವುದಿಲ್ಲ. ಸಿ.ಎಂ. ಉದಾಸಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಶೋಭಾ ಕರಂದ್ಲಾಜೆ, ರೇವು ನಾಯಕ್ ಬೆಳಮಗಿ, ರೇಣುಕಾಚಾರ್ಯ ಮೊದಲಾದವರಿಗೆ ಯಡಿಯೂರಪ್ಪ ಅವರನ್ನು ಬಿಟ್ಟಿರಲು ಆಗದು. ಅವರೊಂದಿಗೆ ಅಷ್ಟೊಂದು ಆತ್ಮೀಯ ಬಾಂಧವ್ಯ ಹೊಂದಿದ್ದಾರೆ.
ಸೃಷ್ಟಿತ ಸುದ್ದಿಗಳು ನಮಗೆ ಮುಖ್ಯವಲ್ಲ. ಫೆಬ್ರವರಿ ಅಂತ್ಯದವರೆಗೆ ಸರ್ಕಾರ ಮುಂದುವರೆದರೆ ರಾಜ್ಯದಲ್ಲಿ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಆದರೆ ಕೆಲವು ಸ್ವಾರ್ಥಿಗಳಿಗೆ ಇದು ಬೇಕಿಲ್ಲ. ಫೆಬ್ರವರಿ ನಂತರ ಅಥವಾ ಸರ್ಕಾರ ಪತನವಾದ ಮರುಕ್ಷಣದಿಂದ ನಾವು ಪಕ್ಷ ಸಂಘಟನೆಗೆ ಮತ್ತಷ್ಟು ಒತ್ತು ನೀಡಲಿದ್ದೇವೆ.












Click it and Unblock the Notifications