ಚುನಾವಣೆ ಪ್ರಚಾರಕ್ಕೆ ಜನಾ ರೆಡ್ಡಿ: ತಯಾರಿ ಭರ್ಜರಿ

ಆದರೂ ಇದ್ಯಾವುದೂ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಶ್ರೀರಾಮುಲು ಅವರನ್ನು ಧೃತಿಗೆಡಿಸಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿಯನ್ನು ಕಣಕ್ಕಿಳಿಸುವುದೂ ಸೇರಿದಂತೆ ರಾಮುಲು ಅನೇಕ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಿದ್ದಾರೆ.
ಅವುಗಳಲ್ಲಿ ಪ್ರಮುಖವಾಗಿರುವುದು ಜನಾರ್ದನ ರೆಡ್ಡಿಯನ್ನು ಹೇಗಾದರೂ ಮಾಡಿ ಚುನಾವಣೆ ಪ್ರಚಾರಕ್ಕೆ ಕರೆತರುವುದು. ಚುನಾವಣೆ ಕಾವೇರುತ್ತಿದ್ದಂತೆ ಕನಿಷ್ಠ ನಾಲ್ಕು ದಿನಗಳ ಮಟ್ಟಿಗಾದರೂ ಅವರನ್ನು ಜನತೆಗೆ ತೋರಿಸುವುದು ಅವರ ಇರಾದೆಯಾಗಿದೆ. ಅದಕ್ಕೆ ಭರ್ಜರಿ ತಯಾರಿಯನ್ನೂ ನಡೆಸಿದ್ದಾರೆ.
ಚುನಾವಣೆ ಅಧಿಸೂಚನೆ ಪ್ರಕಟವಾಗುತ್ತಿದ್ದಂತೆ ಕೋರ್ಟಿಗೆ ವಿಶೇಷ ಮನವಿ ಸಲ್ಲಿಸಿ, ನಾಲ್ಕು ದಿನಗಳ ಮಟ್ಟಿಗಾದರೂ ನಮ್ಮ ಧಣಿಯನ್ನು ಪೆರೋಲ್ ಮೇಲೆ ಕಳಿಸಿಕೊಡಿ ಎಂದು ಕೋರ್ಟಿಗೆ ಮೊರೆ ಹೋಗುವುದಾಗಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಸ್ ಬೆಟಗೇರಿ ತಿಳಿಸಿದ್ದಾರೆ. ಆದರೆ ತಂದೆಯ ತಿಥಿಗೇ ಕೋರ್ಟ್ ಅನುಮತಿ ನೀಡಿರಲಿಲ್ಲ ಎಂಬುದು ಗಮನಾರ್ಹ.
ರೆಡ್ಡಿಗೆ ಪೆರೋಲ್ ಸಿಗುತ್ತೋ, ಬಿಡುತ್ತೋ ಆದರೆ ಶ್ರೀರಾಮುಲು ಮಾತ್ರ ಚುನಾವಣೆಯಲ್ಲಿ ತಮ್ಮ ಧಣಿಯ ಸೇವೆಯನ್ನು ಬಳಸಿಕೊಳ್ಳಲು ಕಟಿಬದ್ಧರಾಗಿದ್ದಾರೆ. ನಾಲ್ಕಾರು ದಿನ ರೆಡ್ಡಿ ಹರಬಂದರೂ ಎಲ್ಲ ಕ್ಷೇತ್ರಗಳನ್ನೂ ಟೂರ್ ಮಾಡಲು ಆಗುವುದಿಲ್ಲ. ಅದಕ್ಕಾಗಿ ಸಮಯದ ಗರಿಷ್ಠ ಸದುಪಯೋಗ ಪಡಿಸಿಕೊಳ್ಳಲು ಸರ್ವಸಜ್ಜು ನಡೆಸಿದ್ದಾರೆ.
ಪಕ್ಷದ ವೋಟ್ ಬ್ಯಾಂಕ್ ತಲುಪಲು ಒಟ್ಟು 8 ಹೆಲಿಪ್ಯಾಡುಗಳಿಗಾಗಿ ಜಮೀನು ಖರೀದಿಸಲಾಗಿದ್ದು, ರೆಡ್ಡಿಯನ್ನು ಹೆಲಿಕಾಪ್ಟರುಗಳ ಮೂಲಕವೇ ಸುತ್ತಾಡಿಸಲು ಬಿಎಸ್ಆರ್ ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಬೆಳಗಾವಿ, ಬಿಜಾಪುರ, ಗುಲ್ಬರ್ಗ ಮತ್ತು ಚಿತ್ರದುರ್ಗದಲ್ಲಿ ಈಗಾಗಲೇ ಹೆಲಿಪ್ಯಾಡು ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಪ್ರತಿ ಹೆಲಿಪ್ಯಾಡಿಗೂ ಒಂದೊಂದು ಎಕರೆ ಜಮೀನು ಖರೀದಿಸಲಾಗಿದ್ದು, ತಲಾ 25 ಸಾವಿರ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಈ ವೆಚ್ಚವನ್ನು ಪಕ್ಷದ ಸದಸ್ಯರೇ ಭರಿಸಲಿದ್ದಾರೆ ಎಂದು ಬೆಟಗೇರಿ ಹೇಳಿದ್ದಾರೆ.
ರೆಡ್ಡಿಯಷ್ಟೇ ಅಲ್ಲ ಮುಂದೆ ಪ್ರಚಾರ ಕಾಲದುದ್ದಕ್ಕೆ ತಾರಾ ಪ್ರಚಾರಕರಿಗೂ ಈ ಸೇವೆ ಲಭ್ಯವಾಗಲಿದೆ. ಅದಕ್ಕಾಗಿ ದೆಹಲಿಯಿಂದ 6 ಸೀಟುಗಳ ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ಪಡೆಯುವುದಾಗಿ ಅವರು ವಿವರಿಸಿದ್ದಾರೆ.
ಈ ಮಧ್ಯೆ, ರೆಡ್ಡಿಯ ವೈಭವಯುತ 'ರುಕ್ಮಿಣಿ' chopper ಅನ್ನು ವಾಪಸ್ ನೀಡಬೇಕು ಎಂದು ರೆಡ್ಡಿ ವಕೀಲರು ಕೋರ್ಟಿಗೆ ಈಗಾಗಲೇ ಮನವಿ ಮಾಡಿಕೊಂಡಿದ್ದು, ನಹುಶಃ ಅದು ಚುನಾವಣೆ ವೇಳೆಗೆ ಮತ್ತೆ ರೆಡ್ಡಿ ವಶವಾಗುವ ಸಾಧ್ಯತೆಯಿದೆ.
ಜನಾ ರೆಡ್ಡಿ ಬಳ್ಳಾರಿಗೆ ಭೇಟಿ : ಈ ಮಧ್ಯೆ, ಮಾಜಿ ಸಚಿವ ದಿವಾಕರಬಾಬು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಗಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರಿದಂತೆ ನಾಲ್ವರು ಜ. 18ರಂದು ವಿಚಾರಣೆಗೆ ಖುದ್ದು ಹಾಜರಾಗಬೇಕೆಂದು ಬಳ್ಳಾರಿ ನಗರ ಜೆಎಂಎಫ್ಸಿ ನ್ಯಾಯಾಲಯ ಆದೇಶಿಸಿದೆ. ಪ್ರಸ್ತುತ, ಚಂಚಲಗೂಡ ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಅವರನ್ನು ಈ ಪ್ರಕರಣದ ಸಂಬಂಧ ಕಳೆದ ಬಾರಿ ಬಳ್ಳಾರಿಯಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗಿತ್ತು. ಆದರೆ ಈ ಬಾರಿ ಖುದ್ದು ಹಾಜರಿಗೆ ಕೋರ್ಟ್ ಸೂಚಿಸಿದೆ.












Click it and Unblock the Notifications