ವರದಕ್ಷಿಣೆ ಕೇಸ್ : ಮಾಜಿ ಡಿಐಜಿ ಮೇಲೆ ತನಿಖೆ ಶುರು

ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗುರುಪ್ರಸಾದ್ ವಿರುದ್ಧ ಅವರ ಸೊಸೆ ಸವಿತಾ ಶಶಿ ಅವರು, ಗುರುಪ್ರಸಾದ್, ಪತ್ನಿ ಸ್ವರ್ಣಾ ಗುರುಪ್ರಸಾದ್, ಪುತ್ರ ಸುಮುಖ್ ಮತ್ತು ಮಗಳು ಅಪೂರ್ವ ಶೇಷಾದ್ರಿಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸವಿತಾ ಅವರು ನೀಡಿರುವ ದೂರು ಸ್ವೀಕರಿಸಿ, ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾಖಲೆಗಳನ್ನು ಪರಿಶೀಲಿಸಿದ ನಂತರ ತನಿಖೆಗೆ ಮುಂದಾಗಿದ್ದೇವೆ. ಕುಟುಂಬ ಸದಸ್ಯರ ವಿಚಾರಣೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿ ನಾಗಲಿಂಗಯ್ಯ ತಿಳಿಸಿದ್ದಾರೆ.
ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಸುಮುಖ್ ಮತ್ತು ಸವಿತಾರ ಮದುವೆ 2010ರಲ್ಲಿ ಸಾಂಪ್ರದಾಯಿಕವಾಗಿ ನೆರವೇರಿತ್ತು. ವೃತ್ತಿಯಲ್ಲಿ ಇಬ್ಬರೂ ಸಾಫ್ಟ್ವೇರ್ ಇಂಜಿನಿಯರ್ಗಳಾಗಿದ್ದು 2011ರಲ್ಲಿ ಕೆಲಸಕ್ಕಾಗಿ ಬೆಲ್ಜಿಯಂಗೆ ಹೋಗಿದ್ದರು. ಆದರೆ ಕೆಲವೇ ತಿಂಗಳುಗಳಲ್ಲಿ ದಂಪತಿ ನಡುವೆ ವಿರಸ ಮೂಡಿ ಸವಿತಾ ಭಾರತಕ್ಕೆ ವಾಪಸ್ಸಾಗಿದ್ದರು.
ಇದಾದ ಬಳಿಕ 2012ರ ಸೆ.26ರಂದು ಸುಮುಖ್ ತಮ್ಮ ಪತ್ನಿಯಿಂದ ವಿಚ್ಛೇದನ ಕೋರಿ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದ್ದರು. 3 ಬಾರಿ ವಿಚಾರಣೆ ಕೂಡ ನಡೆದಿದೆ. ಇದೀಗ ಜೆ.ಪಿ.ನಗರದ ನಿವೇಶನದಲ್ಲಿ ಮನೆ ನಿರ್ಮಿಸಲು ತವರು ಮನೆಯಿಂದ 20 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸವಿತಾ ಶೇಷಾದ್ರಿ ಅವರು ಆರೋಪಿಸಿದ್ದಾರೆ.












Click it and Unblock the Notifications