ಅಂತೂ ಬಿಜೆಪಿ ಬಿಕ್ಕಟ್ಟು ಪರಿಹಾರವಾಯ್ತು : ಗೌಡ್ರು
ಹುಬ್ಬಳ್ಳಿ, ಜ.6: ಅಂತೂ ಇಂತೂ ಬಿಜೆಪಿ ಕೊನೆಗೂ ಉತ್ತರ ಕರ್ನಾಟಕದ ನಾಯಕರಿಗೆ ಮಣೆ ಹಾಕುವ ಮೂಲಕ ಆಂತರಿಕ ಬಿಕ್ಕಟ್ಟಿಗೆ ಪರಿಹಾರ ಹುಡುಕುವತ್ತ ಹೆಜ್ಜೆ ಹಾಕಿದೆ. ಅವರಿಗಿಂತ ನನಗೇ ಹೆಚ್ಚಿನ ಸಮಾಧಾನ ನೀಡಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ನಗೆಯಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶೆಟ್ಟರ್ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸಲು ಬಿಜೆಪಿಯ ನಾಯಕರು ಒಮ್ಮತದಿಂದ ಒಪ್ಪಿರುವುದು ಸಂತೋಷದ ವಿಷಯ ಎಂದರು.

ಚುನಾವಣೆ ಸಾರಥ್ಯವನ್ನು ಶೆಟ್ಟರ್ ಆಗಲಿ, ಅನಂತ್ ಕುಮಾರ್ ಅಗಲಿ ಅಥವಾ ಸದಾನಂದ ಗೌಡರೇ ವಹಿಸಿಕೊಳ್ಳಲಿ ಗೆಲುವು ನಮಗೆ ಮಾತ್ರ. ಜನರ ಒಲವು ನಮ್ಮ ಕಡೆ ಇದೆ ಎಂದು ದೇವೇಗೌಡ ಹೇಳಿದ್ದಾರೆ.
ಈ ಬಾರಿ ನೈಜ ಮಾರ್ಗದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಈ ಹಿಂದೆ ಕುಮಾರಸ್ವಾಮಿ ಅವರು ವಾಮ ಮಾರ್ಗದಿಂದ ಅಧಿಕಾರ ಪಡೆದಿದ್ದರು. ಆ ರೀತಿ ಪಡೆದ ಅಧಿಕಾರ ಶಾಶ್ವತವಲ್ಲ.
ಕುಮಾರಸ್ವಾಮಿ ಮತ್ತೊಮ್ಮೆ ಜನರ ನಿಜವಾದ ಆಯ್ಕೆಯಾಗಿ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾಗಬೇಕಿದೆ. ಆಗ ಮಾತರ ನನಗೆ ಸಂತೋಷ ತರುತ್ತದೆ ಎಂದು ದೇವೇಗೌಡರು ಭಾವುಕರಾಗಿ ಹೇಳಿದರು.
ನಗರದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಧಾರವಾಡ ಜಿಲ್ಲಾ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ದೇವೇಗೌಡ, ನಿಮ್ಮೆಲ್ಲರ ಆಶೀರ್ವಾದದಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಭರವಸೆಯಿದೆ ಎಂದರು.
ನನಗೆ ಪುತ್ರ ವ್ಯಾಮೋಹವಿಲ್ಲ. ಪಕ್ಷ ಮುಖ್ಯವಾಗಿದೆ. ಜನತೆಯ ಆಶೀರ್ವಾದ ಪಡೆದು ಯಾರಾದರೂ ಮುಖ್ಯಮಂತ್ರಿಯಾಗಲಿ. ಆದರೆ, ನನ್ನ ಉಸಿರು ನಿಲ್ಲುವುದರೊಳಗಾಗಿ ಪಕ್ಷವನ್ನು ಇನ್ನಷ್ಟು ಬಲ ಪಡಿಸಬೇಕೆಂಬುದೇ ನನ್ನ ಆಸೆಯಾಗಿದೆ ಎಂದರು.
ನಾನು ದೊಡ್ಡ ವಿದ್ಯಾವಂತನಲ್ಲ. ಆರ್ಥಿಕ ತಜ್ಞನೂ ಅಲ್ಲ. ನಾನೊಬ್ಬ ಸಾಮಾನ್ಯ ರೈತನ ಮಗ. ಹೀಗಾಗಿ, ರೈತರ ಸಮಸ್ಯೆಗಳು ನನಗೆ ಅರ್ಥವಾಗುತ್ತವೆ. ಅದೇ ಮನಮೋಹನ ಸಿಂಗ್ ಹಾಗೂ ಇನ್ನಿತರರಿಗೆ ಅದು ಸಾಧ್ಯವಾಗಿಲ್ಲ. ನಾನು ಏನೆಂಬುದು ಮುಖ್ಯವಲ್ಲ, ನಾನು ಜನರ ಸಂಕಷ್ಟ ಗಳಿಗೆ ಹೇಗೆ ಸ್ಪಂದಿಸುತ್ತೇನೆ ಎಂಬುದು ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಜಾತಿ ಆಧಾರದ ಮೇಲೆ ಯಾವುದೇ ಪಕ್ಷ ಕಟ್ಟಲು ಸಾಧ್ಯವಿಲ್ಲ. ಅಂಥ ಯಾವ ಪ್ರಯತ್ನವೂ ಫಲಿಸುವುದಿಲ್ಲ. ಈ ದೇಶದ ರೈತನ ಮನಸ್ಸನ್ನು ಯಾರು ನೋಯಿಸುತ್ತಾರೋ ಅವರಿಗೆ ಉಳಿಗಾಲವಿಲ್ಲ ಎಂದರು.
ಅತ್ಯಾಚಾರ ಪ್ರಕರಣದ ಬಗ್ಗೆ: ಸಮಾಜದಲ್ಲಿ ನೈತಿಕ ಮೌಲ್ಯ ಕುಸಿಯುತ್ತಿದೆ. ಸಿನಿಮಾ ಮತ್ತು ಮಾಧ್ಯಮಗಳಲ್ಲಿ ಹೆಚ್ಚು ಅಶ್ಲೀಲ ಚಿತ್ರಗಳು ಪ್ರಸಾರವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಆರೆಸ್ಸೆಸ್ ಈ ಹಿಂದಿನ ಮೌಲ್ಯ ಕಳೆದುಕೊಂಡಿದೆ. ಈಗ ದೌರ್ಜನ್ಯದ ಬಗ್ಗೆ ಮಾತನಾಡಲು ಅವರಿಗೆ ಅಧಿಕಾರವಿಲ್ಲ ಎಂದು ದೇವೇಗೌಡ ಹೇಳಿದರು.












Click it and Unblock the Notifications