ಗೋಹತ್ಯೆ ನಿಷೇಧ ಮಸೂದೆ ಕುರಿತ ಅರ್ಜಿ ವಜಾ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲದ ಉಭಯ ಸದನಗಳಲ್ಲಿ ಸರ್ಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ಅಂಗೀಕಾರ ಮಾಡಲಾಗಿತ್ತು. ನಂತರ ರಾಜ್ಯಪಾಲರ ಅಂಕಿತಕ್ಕಾಗಿ ಮಸೂದೆಯನ್ನು ಕಳಿಸಲಾಗಿದೆ.
ಆದರೆ, ರಾಜ್ಯಪಾಲರು ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ. ಈ ಹಿಂದೆ ಕೂಡಾ ಅಂಕಿತ ಹಾಕದೆ ಸತಾಯಿಸಿದ್ದರು. ಅವರಿಗೆ ಅಂಕಿತ ಹಾಕುವಂತೆ ನಿರ್ದೇಶನ ನೀಡಬೇಕು ಎಂದು ವೀರಶೆಟ್ಟಿ ಎಂಬುವರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀಧರ್ರಾವ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ನ್ಯಾಯಪೀಠ, ಸಾಂವಿಧಾನಿಕ ಹುದ್ದೆಗಳಲ್ಲಿರುವರನ್ನು ಪ್ರತಿವಾದಿಯನ್ನಾಗಿ ಮಾಡಲು ಸಾಧ್ಯವಿಲ್ಲ.
ಈ ಹಿಂದೆ ಅರ್ಜಿಯನ್ನು ಪುನರ್ ಪರಿಶೀಲಿಸಿ ಎಂದು ಕೋರ್ಟ್ ಸೂಚಿಸಿದ್ದರೂ, ಹಾಗೇ ಬಂದಿದ್ದೀರಿ ಎಂದ ಪೀಠ ಅರ್ಜಿ ವಜಾಗೊಳಿಸಿದೆ.
ಬೆಳಗಾವಿಯಲ್ಲಿ ಇತ್ತೀಚಿಗೆ ಪ್ರತಿಪಕ್ಷಗಳ ಗದ್ದಲದ ನಡುವೆ ಮಸೂದೆ ಅಂಗೀಕಾರಗೊಂಡಿತ್ತು. ನಂತರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ನ ಹಲವು ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ವಿಧೇಯಕವನ್ನು ಅಂಗೀಕರಿಸದಂತೆ ಮನವಿ ಮಾಡಿದ್ದರು.
ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಈ ವಿಧೇಯಕ ಮಂಡನೆಯಾಗಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಈ ವಿಧೇಯಕ ಜಾರಿಗೆ ತರುತ್ತಿದೆ ಎಂಬ ಒಂದೇ ಕಾರಣಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಕಾನೂನು ಸಚಿವ ಸುರೇಶ್ಕುಮಾರ್ ಹೇಳಿದ್ದರು
ಗೋವುಗಳ ರಕ್ಷಣೆಗೆ ಮುಂದಾದ ಸರ್ಕಾರದ ಕ್ರಮ ವಿರೋಧಿಸುವ ಕಾಂಗ್ರೆಸ್- ಜೆಡಿಎಸ್ ಸದಸ್ಯರು ಗೋವುಗಳ ವಿರೋಧಿಗಳು. ಇದು ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ. ಯಾರು ಎಷ್ಟೇ ವಿರೋಧ ಮಾಡಿದರೂ, ಬಿಜೆಪಿ ಸರ್ಕಾರ ಈ ಮಸೂದೆಯನ್ನು ಯಾರಿಗೆ ತರಲಿದೆ ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದರು
ಇವರ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಗೋಹತ್ಯೆ ನಿಷೇಧ ಅಂಗೀಕಾರ ಮಾಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ವಿಧೇಯಕದಲ್ಲಿ ಬದಲಾವಣೆ: ಕರ್ನಾಟಕ ಗೋ ಹತ್ಯೆ ನಿಷೇಧ ಹಾಗೂ ನಿಯಂತ್ರಣ ಕಾಯ್ದೆ 2010ರ ಅನುಗುಣದಂತೆ ಹಸು, ಎತ್ತೆ, ಕೋಣ ಸೇರಿದಂತೆ ರಾಸುಗಳ ಹತ್ಯೆ ಮಾಡುವುದನ್ನು ನಿಷೇಧಿಸಲಾಗಿತ್ತು. ಆರೋಪಿಗಳಿಗೆ ಜಾಮೀನು ರಹಿತ ಸಜೆ ನೀಡಲಾಗುತ್ತದೆ.
ರಾಜ್ಯ ಸರ್ಕಾರ ಇದರಲ್ಲಿ ಸಣ್ಣ ತಿದ್ದುಪಡಿ ತಂದಿದ್ದು ಕಾಯ್ದೆಯಲ್ಲಿನ ಸೆಕ್ಷನ್ (2) ರಲ್ಲಿನ ಗೋವು ಉಲ್ಲೇಖ ಆದ ಮೇಲೆ ಸೆಕ್ಷನ್ (2) ಬಿ ಯಲ್ಲಿ ಬುಲ್ ಮತ್ತು ಬುಲಕ್ ಎಂದು ಸೇರಿಸಲು ಈ ಹಿಂದಿನ ಸದಾನಂದ ಗೌಡ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು.
ವಿಧಾನಮಂಡಲದ ಎರಡೂ ಸದನಗಳಲ್ಲಿ ವಿಧೇಯಕಕ್ಕೆ ಒಪ್ಪಿಗೆ ಪಡೆದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ವಿಧೇಯಕ್ಕೆ ಅಂಕಿತ ಹಾಕುವ ಬದಲಿಗೆ ವಿಧೇಯಕವನ್ನು ರಾಷ್ಟ್ರಪತಿ ಗಳಿಗೆ ರವಾನಿಸಿದ್ದರು.
ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ, ಕರ್ನಾಟಕ ಪ್ರಾಣಿ ವಧೆ ನಿರ್ಮೂಲನ ಮತ್ತು ಜಾನುವಾರು ಸಂರಕ್ಷಣೆ ವಿಧೇಯಕದ ವ್ಯಾಪ್ತಿ ಯಿಂದ ಎಮ್ಮೆಗಳು, ಎಮ್ಮೆಗಳ ಕರುಗಳು ಮತ್ತು ಇತರೆ ಜಾನುವಾರುಗಳನ್ನು ಕೈಬಿಟ್ಟು ವಿಧೇಯಕಕ್ಕೆ ಸಣ್ಣ ತಿದ್ದುಪಡಿ ತರುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ತಿದ್ದುಪಡಿ ಮಾಡಿ ಸರ್ಕಾರ ಮತ್ತೊಮ್ಮೆ ವಿಧೇಯಕ ಮಂಡನೆಗೆ ಮುಂದಾಗಿತ್ತು.












Click it and Unblock the Notifications