500 ಕಿ.ಮೀ ಪಾದಯಾತ್ರೆಗೆ ಕಾಂಗ್ರೆಸ್ ಸಜ್ಜು
ಬೆಂಗಳೂರು, ಜ.5: ಕೆಜೆಪಿ vs ಬಿಜೆಪಿ ಶೀತಲ ಸಮರ ಮುಂದುವರೆದಿರುವಾಗಲೇ ಕಾಂಗ್ರೆಸ್ ಪಕ್ಷ ಬಿರುಸಿನಿಂದ ತನ್ನ ಕಾರ್ಯತಂತ್ರ ರೂಪಿಸುತ್ತಿದೆ. ಕೆಪಿಸಿಸಿ ಹಿರಿಯ ನಾಯಕರು ದೆಹಲಿಗೆ ಒಂದು ರೌಂಡ್ ಹೋಗಿ ಬಂದಿದ್ದು, ಚುನಾವಣಾ ಪೂರ್ವ ಪಾದಯಾತ್ರೆ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ ನಾಯಕತ್ವ ವಿವಾದ ಇನ್ನೂ ಬೂದಿಮುಚ್ಚಿದ ಕೆಂಡದಂತೆ ಇದ್ದರೂ ರಾಜ್ಯದಲ್ಲಿ ಎಲ್ಲರಿಗಿಂತ ಮೊದಲು ಜನರನ್ನು ಮುಟ್ಟಬೇಕು, ಚುನಾವಣೆ ವೇಳೆಗೆ ಅವರ ಮನಸನ್ನು ತಟ್ಟಬೇಕು ಎಂದು ಕಾಂಗ್ರೆಸ್ ಗೆ ಸೂಚನೆ ಸಿಕ್ಕಿದೆ. ಹೀಗಾಗಿ ರಾಜ್ಯದಲ್ಲಿ ನಾಲ್ಕು ಭಾಗಗಳಲ್ಲಿ ಸುಮಾರು 500 ಕಿ.ಮೀ ದೂರದ ಪಾದಯಾತ್ರೆ ಹಮ್ಮಿಕೊಂಡಿದೆ.

* ಹೊಸಪೇಟೆಯಿಂದ ಕೂಡಲಸಂಗಮದವರೆಗೂ ಮೊದಲ ಹಂತ
* ಬಸವ ಕಲ್ಯಾಣದಿಂದ ಜೇವರ್ಗಿವರೆಗೆ ಎರಡನೇ ಹಂತ
* ಉಲ್ಲಾಳದಿಂದ ಉಡುಪಿಯವರೆಗೆ ಮೂರನೇ ಹಂತ
* ಮೈಸೂರಿನಿಂದ ಬೆಂಗಳೂರುವರೆಗೆ ಅಂತಿಮ ಹಂತದ ಪಾದಯಾತ್ರೆ ನಡೆಯಲಿದೆ.
* ಮೊದಲ ಹಂತದಲ್ಲಿ ಬಳ್ಳಾರಿ, ಬಿಜಾಪುರ, ಬಾಗಲಕೋಟೆ, ಬಾಗೇವಾಡಿ, ಕೊಪ್ಪಳ ಹೀಗೆ ಒಟ್ಟು 4 ಜಿಲ್ಲೆಗಳ 140 ಕಿ.ಮೀ ದೂರ ಕ್ರಮಿಸಲಾಗುವುದು.
* ಜ.6 ರಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಅದರೆ, ಕೃಷ್ಣ ಅವರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ವಿವಿಧ ಹಂತಗಳಲ್ಲಿ ವಿವಿಧ ಹೆಸರು ಹಾಗೂ ಉದ್ದೇಶಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮುಂದೆ ಹೆಜ್ಜೆ ಇಡುತ್ತಿದೆ.
* ಮೊದಲ ಹಂತಕ್ಕೆ 'ಕೃಷ್ಣೆಯ ಕಡೆಗೆ' ಎಂದು ಹೆಸರಿಡಲಾಗಿದ್ದು, ಕೃಷ್ಣಾ ನದಿ ನೀರು ಹಂಚಿಕೆ ಅನ್ಯಾಯದ ಬಗ್ಗೆ ಕಾಂಗ್ರೆಸ್ ದನಿ ಎತ್ತಲಿದೆ.
* ಎರಡನೇ ಹಂತಕ್ಕೆ 'ಸಾಮಾನತೆಯ ಕಡೆಗೆ' ಎಂದು ಹೆಸರಿಡಲಾಗಿದ್ದು, ಫೆಬ್ರವರಿ ಮೊದಲ ವಾರ ಜೇವರ್ಗಿಯಲ್ಲಿ ಸಂಪನ್ನವಾಗಲಿದೆ. ಹಿಂದುಳಿದ ಪ್ರದೇಶಗಳು, ಪ್ರಾದೇಶಿಕ ಅಸಮತೋಲನದ ಬಗ್ಗೆ ಕಾಂಗ್ರೆಸ್ ಗಮನ ಹರಿಸಿದೆ.
* ಮೂರನೇ ಹಂತ ಸಾಮರಸ್ಯದ ನಡಿಗೆ: ಕನ್ನಡ ಜಿಲ್ಲೆಗಳು ಹಾಗೂ ಕರಾವಳಿ ಭಾಗದಲ್ಲಿ ಕೋಮು ಸೌಹಾರ್ದತೆ ಕಾಯ್ದುಕೊಳ್ಳಲು ಕಾಂಗ್ರೆಸ್ ಈ ನಡಿಗೆ ಹಮ್ಮಿಕೊಂಡಿದೆ.
* ನಾಲ್ಕನೇ ಹಂತ ಜನಾಡಳಿತದ ಕಡೆಗೆ: ಬಿಜೆಪಿಯ ಅಸ್ಥಿರ ಸರ್ಕಾರ, ಭ್ರಷ್ಟಾಚಾರದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಕಾಂಗ್ರೆಸ್ ನಿರ್ಧರಿಸಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಎಂದಿನಂತೆ ಪಾದಯಾತ್ರೆಯ ಸ್ಟಾರ್ ಆಗಲಿದ್ದಾರೆ. ಎಸ್ ಆರ್ ಪಾಟೀಲ್, ಕೇಂದ್ರ ಸಚಿವರಾದ ಖರ್ಗೆ, ಮುನಿಯಪ್ಪ ಭಾಗವಹಿಸುವ ನಿರೀಕ್ಷೆಯಿದೆ. ಉತ್ತರಾಯಣ ಪುಣ್ಯ ಕಾಲದವರೆಗೂ ಶುಭ ಕಾರ್ಯಕ್ಕೆ ಕೈ ಹಾಕದಿರಲು ನಿರ್ಧರಿಸಿರುವ ಎಸ್ ಎಂ ಕೃಷ್ಣ ಅವರು ಪಾಲ್ಗೊಳ್ಳುವ ಬಗ್ಗೆ ಅನುಮಾನವಿದ್ದು, ಕೊನೆ ಹಂತದ ಪಾದಯಾತ್ರೆಗೆ ಒಪ್ಪಿಸುವ ಜವಾಬ್ದಾರಿಯನ್ನು ಆಪ್ತ ಡಿಕೆ ಶಿವಕುಮಾರ್ ಅವರಿಗೆ ಬಿಡಲಾಗಿದೆ.
ಒಟ್ಟಾರೆ, ಜೆಡಿಎಸ್ ಪಕ್ಷ ಅಲ್ಪಸಂಖ್ಯಾತರು, ಹಿಂದುಳಿದವರ ಓಲೈಕೆಗಾಗಿ ಕರಾವಳಿ ಸೇರಿದಂತೆ ಹಲವು ಭಾಗದಲ್ಲಿ ರಾಶಿಗಟ್ಟಲೆ ಸಮಾವೇಶಗಳನ್ನು ನಡೆಸುತ್ತಿದೆ. ಬಿಜೆಪಿ ಬೈಠಕ್ ಮೇಲೆ ಬೈಠಕ್ ಮಾಡುತ್ತಿದೆ. ಕೆಜೆಪಿ ಬಾಯಿ ಮಾತಲ್ಲೇ ಎಲ್ಲರ ತಲೆಗೆ ಹುಳ ಬಿಡುತ್ತಿದೆ. ಕಾಂಗ್ರೆಸ್ ಪಾದಯಾತ್ರೆ ಮೂಲಕ ಹೊಸ ಮೈಲೇಜ್ ಗಿಟ್ಟಿಸುವ ನಿರೀಕ್ಷೆಯಲ್ಲಿದೆ.












Click it and Unblock the Notifications