ಪುಂಡ 'ಲಕ್ಷ್ಮೀಶ' ಕೊನೆಗೂ ಒಂದು ಬಲಿ ತಗೊಂಡ್ಬಿಟ್ಟ

ಹೌದು ನಿನ್ನೆ ರಾತ್ರಿ ಮದ ಗಜ 'ಲಕ್ಷ್ಮೀಶ'ನನ್ನು ಪಳಗಿಸುವ, ಹದ್ದುಬಸ್ತಿಗೆ ತರುವ ಪ್ರಯತ್ನದಲ್ಲಿದ್ದಾಗ ರೊಚ್ಚಿಗೆದ್ದು ಚಂದ್ರನ್ ಎಂಬ 45 ವರ್ಷದ ಮಾವುತನ ಮೇಲೆ ತಿರುಗಿಬಿದ್ದು, ಆತನನ್ನು ಸ್ಥಳದಲ್ಲೇ ಹೊಸಕಿಹಾಕಿದೆ. ಚಂದ್ರನ್ ಮೂಲತಃ ಕೇರಳದವರು.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಡೀಲು ಬಳಿ ಪುಂಡ 'ಲಕ್ಷ್ಮೀಶ' ಈ ಅನಾಹುತ ಮಾಡಿಟ್ಟಿದ್ದಾನೆ. ಇದರಿಂದ ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.
ಮೊನ್ನೆ ಸೋವಾರವಷ್ಟೇ ಸುಳ್ಯಗೆ ಕರೆದುಕೊಂಡು ಹೋಗುವಾಗ ಉಪ್ಪಿನಂಗಡಿಯ ಕರುಣಾಕರ್ ಎಂಬುವವರಿಗೆ ಸೇರಿದ ಈ ಆನೆ ಪುತ್ತೂರಿನಲ್ಲಿ ಆಟವಾಡಿಸಿತ್ತು. ಸಿಬ್ಬಂದಿ ಆಗಲೇ ಎಚ್ಚೆತ್ತುಕೊಳ್ಳಬೇಕಿತ್ತು.
'ಸಾಕಷ್ಟು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗಿತ್ತು. ರಾತ್ರಿ ವೇಳೆ ಗೌಜುಗದ್ದಲ ಇರುವುದಿಲ್ಲ ಎಂದು 'ಲಕ್ಷ್ಮೀಶ'ನನ್ನು ಪಳಗಿಸಲು ಮುಂದಾದೆವು. ಆದರೆ ಅಚಾನಕ್ಕಾಗಿ ಅದು ತಿರುಗಿಬಿತ್ತು. ರಾತ್ರಿ 12 ಗಂಟೆ ವೇಳೆಯಲ್ಲಿ ಅರಿವಳಿಕೆ ಮದ್ದು ನೀಡುವಾಗ ಈ ದುರ್ಘಟನೆ ಸಂಭವಿಸಿದೆ' ಎಂದು RFO ಶ್ರೀಧರ್ ತಿಳಿಸಿದ್ದಾರೆ.
ಉಡುಪಿ ರಥಬೀದಿಯಲ್ಲೂ ಈ ಹಿಂದೆ 'ಲಕ್ಷ್ಮೀಶ' ಹೀಗೇ ಜನರನ್ನು ಗೋಳುಹೊಯ್ದುಕೊಂಡಿದ್ದ. ಉಡುಪಿ ಶಿರೂರು ಮಠದಲ್ಲಿದ್ದ ಸಂದರ್ಭ 9 ವರ್ಷಗಳ ಹಿಂದೆ ಲಕ್ಷ್ಮೀಶ ಮದವೇರಿ ವರ್ತಿಸಿದ್ದ. ಇದಾದ ಬಳಿಕ ಆನೆಯನ್ನು ಮಠದಿಂದ ಮುಕ್ತಿಗೊಳಿಸಿ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಶಿಬಿರಕ್ಕೆ ಕಳುಹಿಸಲಾಗಿತ್ತು. ಕಳೆದ ವರ್ಷ ಸುಳ್ಯ ತಾಲೂಕಿನ ಕಳಂಜ ಬಾಳಿಲಕ್ಕೆ ಮರ ಎಳೆಯಲು ಬಂದಾಗ ಹಸಿವಿನಿಂದ ಸಿಟ್ಟಾಗಿ ಮಾವುತನ್ನು ಬೆನ್ನಟ್ಟಿ ದಿನವಿಡೀ ಆತಂಕ ಸೃಷ್ಟಿಸಿದ್ದ.
ಅರಿವುಗೇಡಿ ಪಶು ವೈದ್ಯ: ಕುತೂಹಲಕಾರಿ ಸಂಗತಿಯೆಂದರೆ ಪುತ್ತೂರಿನ ಸರಕಾರಿ ಪಶು ಆಸ್ಪತ್ರೆ ವೈದ್ಯ ಮಹಾಶಯ ಮೊನ್ನೆ ಲಕ್ಷ್ಮೀಶನಿಗೆ ಅರಿವಳಿಕೆ ಮದ್ದು ನೀಡಲು ಬಂದು ತಾನೇ ಅರಿವುತಪ್ಪಿ ರಸ್ತೆ ಬದಿ ಬಿದ್ದಿದ್ದ. ಏಕೆಂದರೆ ಆತ ತುಸು ಹೆಚ್ಚೇ ಆಲ್ಕೋಹಾಲ್ ತೆಗೆದುಕೊಂಡಿದ್ದ! ಕೊನೆಗೆ ಪುತ್ತೂರು ಪೊಲೀಸ್ ಇನ್ಸ್ ಪೆಕ್ಟರ್ ಎಂ ಸುದರ್ಶನ್ ಅವರು ಅರಿವುಗೇಡಿ ವೈದ್ಯನನ್ನು ಮನೆಗೆ ಬಿಟ್ಟುಬಂದಿದ್ದರು.












Click it and Unblock the Notifications