ಶಿಕ್ಷಕನ ಬಟ್ಟೆಬಿಚ್ಚಿ ಬಾರಿಸಿದ ವಿದ್ಯಾರ್ಥಿನಿ ಪೋಷಕರು

ಮಾನಪ್ಪ ಎಂಬ ಶಿಕ್ಷಕನೇ ವಿದ್ಯಾರ್ಥಿನಿಯ ಪೋಷಕರಿಂದ ಮತ್ತು ಸಾರ್ವಜನಿಕರಿಂದ ಥಳಿತಕ್ಕೊಳಗಾಗಿರುವ ವ್ಯಕ್ತಿ. ಬುಧವಾರ ಮಧ್ಯಾಹ್ನ ಚಿಕ್ಕಮಗಳೂರು ಹೊರವಲಯದಲ್ಲಿರುವ ಉಪ್ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿದ ಪೋಷಕರು ಶಿಕ್ಷಕನ ಬಟ್ಟೆಬಿಚ್ಚಿ ಮನಬಂದಂತೆ ಬಾರಿಸಿದ್ದಾರೆ. ಮಾನಪ್ಪ ವಿದ್ಯಾರ್ಥಿನಿಯನ್ನು ತನ್ನ ಚೇಂಬರಿಗೆ ಕರೆಯಿಸಿಕೊಂಡು ಮೈಮೇಲೆಲ್ಲ ಕೈಯಾಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಕಳೆದ 1 ವರ್ಷದಿಂದ ಮುಖ್ಯೋಪಾಧ್ಯಾಯನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಾನಪ್ಪ, ಕೆಲ ದಿನಗಳಿಂದ 7ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಇದರಿಂದ ಮನನೊಂದಿದ್ದ ವಿದ್ಯಾರ್ಥಿನಿ ಮಧ್ಯಾಹ್ನ ಸ್ಥಳೀಯ ಕೌನ್ಸಿಲರ್ ಮನೆಯ ಮುಂದೆ ಅಳುತ್ತ ಕುಳಿತಿದ್ದಳು.
ಸಾರ್ವಜನಿಕರು ಈ ವಿಷಯವನ್ನು ಶಾಲೆಯ ಶಿಕ್ಷಕರಿಗೆ ತಿಳಿಸಿದ್ದಾರೆ. ಶಾಲೆಯ ಶಿಕ್ಷಕರೇ ಮಾನಪ್ಪನನ್ನು ವಿಚಾರಿಸಿದಾಗ, ಉಳಿದ ಶಿಕ್ಷಕರ ವಿರುದ್ಧವೇ ಹರಿಹಾಯ್ದಿದ್ದಾನೆ. ಮಾನಪ್ಪ ಸರಿದಾರಿಗೆ ಬರದಿದ್ದಾಗ ಶಿಕ್ಷಕರೇ ವಿದ್ಯಾರ್ಥಿನಿಯ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೆ ಶಾಲೆಗೆ ನುಗ್ಗಿದ ವಿದ್ಯಾರ್ಥಿನಿಯ ಪೋಷಕರು ಸಾರ್ವಜನಿಕರೊಂದಿಗೆ ಶಿಕ್ಷಕನನ್ನು ಶಿಕ್ಷಿಸಿದ್ದಾರೆ.
ಮಾನಪ್ಪನನ್ನು ಬಾರಿಸುತ್ತಿರುವುದು ತಿಳಿದು ಪೊಲೀಸರು ಶಾಲೆಗೆ ಧಾವಿಸಿದರೂ ಕೇಳದೆ ತೀವ್ರ ಆಕ್ರೋಶಗೊಂಡಿದ್ದ ಸಾರ್ವಜನಿಕರು ಮಾನಪ್ಪನ ಬಟ್ಟೆ ಬಿಚ್ಚಿ ಮಾನ ಹರಾಜು ಹಾರಿದ್ದಾರೆ. ಕೈಗೆ ಸಿಕ್ಕ ಬಟ್ಟೆಯನ್ನು ಮೈಗೆ ಸುತ್ತಿಕೊಂಡು ಮಾನಪ್ಪ ಮಾನ ಮುಚ್ಚಿಕೊಳ್ಳಲು ಯತ್ನಿಸಿದ್ದಾನೆ.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಅವರು ಕೂಡಲೆ ಶಾಲೆಗೆ ಧಾವಿಸಿ ಈ ಘಟನೆಯ ಹಿನ್ನೆಲೆ ತಿಳಿದುಕೊಂಡಿದ್ದಾರೆ. ಮಾನಪ್ಪನ ವಿರುದ್ಧ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪೊಲೀಸರು ಮಾನಪ್ಪನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ಆರಂಭಿಸಿದ್ದಾರೆ.
ದೇಶದಾದ್ಯಂತ ಕಾಮುಕರ ಹಿಡಿತಕ್ಕೆ ಸಿಲುಕಿ ಅಮಾಯಕ ಮಹಿಳೆಯರ ಮೇಲೆ ಲೈಂಗಿಕವಾಗಿ ಹಿಂಸಾಚಾರ ನಡೆಸುತ್ತಿರುವ ಸಂದರ್ಭದಲ್ಲಿ, ಮಕ್ಕಳಿಗೆ ಶಿಕ್ಷಣ ನೀಡಬೇಕಾದ ಶಿಕ್ಷಕನೇ ವಿದ್ಯಾರ್ಥಿನಿಯನ್ನು ದುರ್ಬಳಿಸಿಕೊಂಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications