ಆಸ್ತಿ ಮಾಡಿದ್ದು ಒಪ್ಪಿಕೊಂಡ ಈಶು, ರಿಸೈನ್ ಮಾಡ್ತಾರಾ?

ನನ್ನನ್ನು ಹುಡುಕಿ ಹುಡುಕಿ ತಪ್ಪಿತಸ್ಥನಾಗಿ ಮಾಡುವುದು ಯಾವ ನ್ಯಾಯ. ಮಂಗಲಿ ಕೈಗಾರಿಕಾ ಪ್ರದೇಶದಲ್ಲಿ ಒಂದೂವರೆ ಎಕರೆ ಭೂಮಿ ಖರೀದಿ ಮಾಡಿದೆ ಎಂಬ ಆರೋಪ ಇದೆ. ಅಲ್ಲಿ ನಾನು ಒಂದಿಂಚು ಭೂಮಿ ಖರೀದಿ ಮಾಡಿಲ್ಲ ಎಂದರು.
ಈ ನಡುವೆ ಈಶ್ವರಪ್ಪ ಅವರು ಆರೋಪಗಳು, ನಿಂದನೆಗಳಿಂದ ಬೇಸರಗೊಂಡು ಹತಾಶರಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹಬ್ಬಿದೆ. ರಾಜೀನಾಮೆ ನೀಡುವ ಮೂಲಕ ಜನರ ಮನಸ್ಸಿನಲ್ಲಿ ತಮ್ಮ ಬಗ್ಗೆ ಒಳ್ಳೆ ಭಾವನೆ ಮೂಡುವಂತೆ ಮಾಡುವುದು ಮುಂದಿನ ನಡೆ ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹಾಗೂ ಸಂಘಪರಿವಾರದ ಮುಖಂಡರ ಜತೆ ಸುದೀರ್ಘ ಚರ್ಚೆ ನಡೆಸಿದ ಸಂದರ್ಭದಲ್ಲಿ ಈಶ್ವರಪ್ಪ ಪದತ್ಯಾಗ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪಕ್ಷ ಹಾಗೂ ಸರಕಾರದ ಗೌರವ ಕಾಪಾಡಲು ನಾನು ರಾಜೀನಾಮೆ ನೀಡುವುದು ಸೂಕ್ತ ಎಂದು ಈಶ್ವರಪ್ಪ ನಿರ್ಧರಿಸಿದ್ದಾರಂತೆ.
ಆಸ್ತಿ ಬಗ್ಗೆ: ಬಳ್ಳಾರಿ ಜಿಲ್ಲೆಯಲ್ಲಿ ಉಕ್ಕಿನ ಕೈಗಾರಿಕೆ ಸ್ಥಾಪಿಸಲು ಅಳಿಯ ಮತ್ತು ಪುತ್ರನ ಹೆಸರಲ್ಲಿ ಜಮೀನು ಖರೀದಿಸಿದ್ದರ ಬಗ್ಗೆ ಆರೋಪ ಕೇಳಿ ಬರುತ್ತಿದೆ. ಅದರ ಬಗ್ಗೆ ನಾನೇಕೆ ವಿವರ ನೀಡಬೇಕು. ಆಸ್ತಿ ಮಾಡಿರಬಹುದು,ಆದಾಯ ತೆರಿಗೆ ಕಾನೂನಿನ ಅನ್ವಯ ಎಲ್ಲವನ್ನು ಕಾನೂನು ಬದ್ಧವಾಗಿಯೇ ಆಸ್ತಿ ಖರೀದಿ ಮಾಡಿರುತ್ತೇನೆ. ದಯವಿಟ್ಟು ಕೇಳ ಬೇಡಿ ಎಂದು ಈಶ್ವರಪ್ಪ ಸುಮ್ಮನಾದರು.
ತಮ್ಮ ಪುತ್ರ ರಾಜಸ್ಥಾನದಲ್ಲಿ 32 ಲಕ್ಷ ರೂಪಾಯಿಗಳ ಆಸ್ತಿ ಖರೀದಿ ಮಾಡಿರುವುದನ್ನು ಒಪ್ಪಿಕೊಂಡ ಈಶ್ವರಪ್ಪ ಆ ವಿಷಯಕ್ಕೂ ನನಗೂ ಸಂಬಂಧವಿಲ್ಲ ಎಂದರು. ನನ್ನ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ನಾನು ಈ ಸಂಸ್ಥೆಯನ್ನು ಗೌರವಿಸುತ್ತೇನೆ. ದಾಳಿಯನ್ನು ಸ್ವಾಗತಿಸುತ್ತೇನೆ. ಮುಂದೊಂದು ದಿನ ನ್ಯಾಯಾಲಯ ನಾನು ತಪ್ಪಿತಸ್ಥ ಅಲ್ಲ ಎಂದು ಹೇಳಲಿದೆ ಎಂಬ ನಂಬಿಕೆ ನನಗಿದೆ ಎಂದು ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹೇಳಿದರು.
ಈ ಮಧ್ಯೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಈಶ್ವರಪ್ಪ ಅವರ ಜತೆ ಮಾತನಾಡಿದ್ದು, ರಾಜೀನಾಮೆ ವಿಚಾರದಲ್ಲಿ ಅವಸರದ ನಿರ್ಧಾರ ಬೇಡ. ಪಕ್ಷದ ಕೋರ್ಸಮಿತಿ ಶೀಘ್ರದಲ್ಲೇ ಸಭೆ ಸೇರಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಅಲ್ಲಿಯ ತನಕ ಕಾಯುವಂತೆ ಸಲಹೆ ನೀಡಿದ್ದಾರೆ ಎಂದು ಇದೇ ಮೂಲಗಳು ಹೇಳಿವೆ. ಈ ಮಧ್ಯೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ತಮ್ಮ ವಿರುದ್ಧದ ಆರೋಪಗಳನ್ನು ಎದುರಿಸುತ್ತೇನೆಯೇ ಹೊರತು ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications