ಭಾರತ-ಪಾಕ್ ಕ್ರಿಕೆಟ್ : ಡಿ.17 ಬಂದ್ಗೆ ಮುತಾಲಿಕ್ ಕರೆ

ಬೆಳಗಾವಿಯಲ್ಲಿ ಶನಿವಾರ, ಡಿ.15ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ದೇಶದ ಹಿತ ಕಾಯುವುದಕ್ಕಾಗಿ ಶ್ರೀರಾಮ ಸೇನೆ ಪಣ ತೊಟ್ಟಿದ್ದು, ಯಾವುದೇ ಕಾರಣಕ್ಕೆ ಬೆಂಗಳೂರು ಪಂದ್ಯವನ್ನು ನಡೆಯಲು ಅವಕಾಶ ಮಾಡಿಕೊಡುವುದಿಲ್ಲ. ನಮ್ಮ ಮನವಿ ತಿರಸ್ಕರಿಸಿ ಪಂದ್ಯಕ್ಕೆ ಅವಕಾಶ ಮಾಡಿಕೊಟ್ಟರೆ ಉಗ್ರ ಹೋರಾಟ ಮಾಡುವುದಾಗಿ ಎಂದು ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.
ಡಿ. 17 ಬೆಂಗಳೂರು ಬಂದ್? : ಭಾರತ ಪಾಕ್ ಪಂದ್ಯ ನಡೆಸುತ್ತಿರುವುದನ್ನು ವಿರೋಧಿಸಿ ಡಿ.17 ಸೋಮವಾರದಂದು ಬೆಂಗಳೂರು ಬಂದ್ಗೆ ಕರೆ ನೀಡುವುದಾಗಿ ಅವರು ಹೇಳಿದ್ದು, ಕರ್ನಾಟಕದಾದ್ಯಂತ 118 ಕಡೆಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಲು ಶ್ರೀರಾಮ ಸೇನೆ ನಿರ್ಧರಿಸಿದೆ ಎಂದು ವಿವರಿಸಿದರು.
ಐದು ವರ್ಷಗಳ ನಂತರ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತ ಪ್ರವಾಸ ಮಾಡುತ್ತಿದ್ದು ಎರಡು ಟಿ20 ಪಂದ್ಯ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಕಳೆದ ಸರಣಿ 2007-08ರಲ್ಲಿ ನಡೆದಿತ್ತು. ಉಭಯ ದೇಶಗಳ ಬಾಂಧವ್ಯ ವೃದ್ಧಿಸುವ ಉದ್ದೇಶದಿಂದ ಈ ಪಂದ್ಯಗಳನ್ನು ನಡೆಸಲು ಎರಡೂ ರಾಷ್ಟ್ರಗಳು ಸಮ್ಮತಿಸಿವೆ. ಆದರೆ, ಶ್ರೀರಾಮ ಸೇನೆಗೆ ಈ ಬಾಂಧವ್ಯ ಸಮ್ಮತಿಯಿಲ್ಲ.
ಕೆಲ ತಿಂಗಳ ಹಿಂದೆ ಪಾಕಿಸ್ತಾನದ ನಟಿ ವೀಣಾ ಮಲಿಕ್ ಕನ್ನಡ ಚಿತ್ರ 'ಡರ್ಟಿ ಪಿಕ್ಚರ್ - ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರದಲ್ಲಿ ನಟಿಸುತ್ತಿರುವುದನ್ನು ಪ್ರಮೋದ್ ಮುತಾಲಿಕ್ ವಿರೋಧಿಸಿದ್ದರು. ಎಷ್ಟೇ ಪ್ರತಿಭಟನೆ ನಡೆಸಿದರೂ ಚಿತ್ರೀಕರಣ ತಡೆಯಲು ಅವರಿಂದ ಸಾಧ್ಯವಾಗಿರಲಿಲ್ಲ. ಈಗ ಕ್ರಿಕೆಟ್ ಪಂದ್ಯವನ್ನು ಪ್ರಮೋದ್ ಮುತಾಲಿಕ್ ಪ್ರತಿಭಟಿಸುತ್ತಿದ್ದು, ಶ್ರೀರಾಮ ಸೇನೆಯನ್ನು ತಡೆಯಲು ಎಲ್ಲ ಸಿದ್ಧತೆ ಮಾಡಿಕೊಂಡಿರುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.












Click it and Unblock the Notifications