ಆಮ್ಲಜನಕ ಕೊರತೆಯಿಂದ ಜೆಸಿಂತಾ ಸಾವು

ಜೆಸಿಂತಾ ಸಲ್ಡಾನಾ ಕೈ ಹಾಗೂ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳು ಕಂಡು ಬಂದಿದೆ. 3 ಸೂಸೈಡ್ ನೋಟ್ ಸಿಕ್ಕಿದೆ. ಆಕೆ ಶವವಾಗಿ ಸಿಕ್ಕಿದ್ದು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಿಕ್ಕಿದ್ದು ಪ್ರಕರಣದ ನಿಗೂಢತೆ ಇನ್ನಷ್ಟು ಹೆಚ್ಚಿಸಿದೆ.
46 ವರ್ಷದ ಕರ್ನಾಟಕದ ಶಿರ್ವ ಮೂಲದ ಜೆಸಿಂತಾ ಅವರ ಸಾವಿನ ನಂತರ ಸಿಕ್ಕಿರುವ ಮೂರು ಆತ್ಮಹತ್ಯಾ ಪತ್ರಗಳ ವಿವರಗಳು ಹೊರ ಬಿದ್ದರೆ ಸಾವಿನ ನೈಜ ಕಾರಣ ತಿಳಿಯುವ ಸಾಧ್ಯತೆಯಿದೆ. ಜೆಸಿಂತಾ ಸಾವಿನ ಬಗ್ಗೆ ಪೊಲೀಸರು ನೀಡಿರುವ ಮಾಹಿತಿ ಸಾರಾಂಶ ಇಲ್ಲಿದೆ
ಮೂರು ದಿನಗಳ ಹಿಂದೆ ಜೆಸಿಂತಾ ಸ್ಟಾಫ್ ಕ್ವಾಟರ್ಸ್ ನಲ್ಲಿನ ರೂಮ್ ನಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿರುವುದನ್ನು ಆಕೆ ಸಹದ್ಯೋಗಿಯೊಬ್ಬರು ನೋಡಿದ್ದರು, ಜೆಸಿಂತಾ ಕೈ ಹಾಗೂ ಕುತ್ತಿಗೆ ಮೇಲೆ ಗಾಯದ ಗುರುತುಗಳನ್ನು ಆಕೆ ಆಗಲೇ ಗಮನಿಸಿದ್ದಾರೆ. ನಂತರ ಲಂಡನ್ ಆಂಬುಲೆನ್ಸ್ ಸರ್ವೀಸ್ ಗೆ ಕರೆ ಮಾಡಿದ್ದಾರೆ. ಮುಂದಿನ ಕ್ರಮವನ್ನು ಪೊಲೀಸರು ಕೈಗೊಂಡಿದ್ದಾರೆ.
ಆ ಕ್ಷಣಕ್ಕೆ ಜೆಸಿಂತಾ ಸಾವಿನಲ್ಲಿ ಹೆಚ್ಚಿನ ಶಂಕೆ ವ್ಯಕ್ತವಾಗಿರಲಿಲ್ಲ. ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೇ ನಂಬಲಾಗಿತ್ತು ಎಂದು ಡಿಟೆಕ್ಟಿವ್ ಚೀಫ್ ಇನ್ಸ್ ಪೆಕ್ಟರ್ ಜೇಮ್ಸ್ ಹರ್ಮನ್ ಹೇಳಿದ್ದಾರೆ.
ಮಾಹಿತಿ ನೀಡಿದ್ದು ಜೆಸಿಂತಾ ಅಲ್ಲ: ಡಿ.5 ರಂದು ಬೆಳಗ್ಗೆ 5.30 ರ ಸುಮಾರಿಗೆ ಆಸ್ಟ್ರೇಲಿಯಾದ ಎಫ್ ಎಂ ರೇಡಿಯೋ ಡಿಜೆಗಳು ಕಿಂಗ್ ಎಡ್ವರ್ಡ್ VII ಆಸ್ಪತ್ರೆಗೆ ಕರೆ ಮಾಡಿದ್ದಾರೆ. ಕರೆಯನ್ನು ಜೆಸಿಂತಾ ಸ್ವೀಕರಿಸಿದ್ದಾಳೆ. ವಾರ್ಡ್ ಬಿಟ್ಟು ರಿಷೆಪ್ಷನಿಸ್ಟ್ ಜಾಗಕ್ಕೆ ಬಂದಿದ್ದ ಜೆಸಿಂತಾ ಸಾವು ಈ ಸುಳ್ಳು ಕರೆಯಲ್ಲಿ ಅಡಗಿತ್ತು. ಡಿಸ್ಕ್ ಜಾಕಿಗಳಾದ ಮೆಲ್ ಗ್ರೇಕ್ ಹಾಗೂ ಮೈಕಲ್ ಕ್ರಿಶ್ಚಿಯನ್ ಅವರು ಮಾಡಿದ ತುಂಟಾಟಕ್ಕೆ ಜೆಸಿಂತಾ ಬಲಿಯಾದಳು.
ಆದರೆ, ಕೇಂಬ್ರಿಡ್ಜ್ ಯುವರಾಣಿ ಬಸುರಿ ಕೇಟ್ ಮಿಡ್ಲ್ ಟನ್ ಆರೋಗ್ಯದ ಮಾಹಿತಿ ನೀಡಿದ್ದು ಜೆಸಿಂತಾ ಅಲ್ಲ. ಕ್ವೀನ್ ಎಲಿಜಬೆತ್ ಹಾಗೂ ಪ್ರಿನ್ಸ್ ಚಾರ್ಲ್ಸ್ ಕರೆ ಮಾಡುತ್ತಿದ್ದೇವೆ, ಕೇಟ್ ಗೆ ಕನೆಕ್ಟ್ ಮಾಡು ಎಂದು ಆ ಕಡೆಯಿಂದ ಕರೆ ಬಂದಿದೆ.
ತನಗೆ ಬಂದ ಕರೆಯನ್ನು ಜೆಸಿಂತಾ ಆ ಸಮಯಕ್ಕೆ ಡ್ಯೂಟಿಯಲ್ಲಿದ್ದ ಮತ್ತೊಬ್ಬ ನರ್ಸ್ ಗೆ ವರ್ಗಾಯಿಸಿದ್ದಾಳೆ. ಆಕೆ ಕೇಟ್ ಆರೋಗ್ಯದ ವಿವರಗಳನ್ನು ನೀಡಿದ್ದಾಳೆ. ಆದರೆ, ನಂತರ ಜೆಸಿಂತಾ ಸಾವನ್ನಪ್ಪಿದ್ದಾಳೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸೂಸೈಡ್ ನೋಟ್ ಸಸ್ಪೆನ್ಸ್: ಮೂರು ಸೂಸೈಡ್ ನೋಟ್ ಗಳನ್ನು ಇನ್ನೂ ಡಿ ಕೋಡ್ ಮಾಡಬೇಕಿದೆ. ಜೆಸಿಂತಾ ಸತ್ತಿದ್ದು ನೇಣು ಹಾಕಿಕೊಂಡೆ ಅಥವಾ ಆಕೆಯನ್ನು ಕೊಲೆಗೈದು ನೇಣು ಹಾಕಲಾಯಿತೆ? ಅಥವಾ ಉಸಿರುಗಟ್ಟಿ ಆಕೆ ಸತ್ತ ಮೇಲೆ ನೇಣು ಹಾಕಲಾಗಿದೆಯೆ? ಆಕೆ ಸಾವಿಗೆ ಕಾರಣ ಏನು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗದ ಕಾರಣ, ಇನ್ನೂ ಪ್ರಕರಣದ ತನಿಖೆ ಜಾರಿಯಲ್ಲಿರುವುದರಿಂದ ವೆಸ್ಟ್ ಮಿನಿಸ್ಟರ್ ಕೊರೊನರ್ಸ್ ಕೋರ್ಟಿನಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.
ಈ ನಡುವೆ ಜೆಸಿಂತಾ ಮೃತದೇಹವನ್ನು ಆಕೆ ಪತಿ ಬೆನೆಡಿಕ್ಟ್ ಬರ್ಬೋಜಾ ಅವರು ಮಂಗಳೂರಿಗೆ ಕರೆ ತರಲಿದ್ದು, ಶುಕ್ರವಾರ ಕ್ಯಾಥೋಲಿಕ್ ಸಂಪ್ರದಾಯದಂತೆ ಶಿರ್ವದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಹೇಳಿದೆ.
ಈ ಮಧ್ಯೆ ಈ ನಡುವೆ ಜೆಸಿಂತಾ ಕುಟುಂಬಕ್ಕೆ ಪರಿಹಾರ ಧನದ ರೂಪದಲ್ಲಿ $500,000 ನೀಡಲು ಆಸ್ಟ್ರೇಲಿಯಾದ ರೇಡಿಯೋ ಮುಂದೆ ಬಂದಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 154ರ ಪ್ರಕಾರ ಭಾರತದಲ್ಲಿ ಮತ್ತೊಮ್ಮೆ ಶವಪರೀಕ್ಷೆ ಮಾಡಿಸಲೂ ಜೆಸಿಂತಾ ಕುಟುಂಬ ಚಿಂತಿಸುತ್ತಿದೆ. ಸಾವಿನ ಕಾರಣದ ಬಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸಮಗ್ರ ತನಿಖೆ ನಡೆಸಬೇಕು ಎಂದು ಪ್ರಧಾನ ಧರ್ಮಗುರು ಡೆನಿಸ್ ಮೊರಾಸ್ ಪ್ರಭು ಆಗ್ರಹಿಸಿದ್ದಾರೆ.
ಯುವರಾಣಿ ಕೇಟ್ ಮಿಡ್ಲ್ ಟನ್ ಅವರಿಗೆ ಹುಟ್ಟುವ ಮಗುವಿಗೆ ಜೆಸಿಂತಾ ಬಾರ್ಬೋಜಾ ಅವರ ಹೆಸರನ್ನಿಡುವಂತೆ ರಾಜ ಮನೆತನಕ್ಕೆ ಒತ್ತಾಯಿಸಲಾಗುತ್ತಿದೆ. ಮಂಗಳೂರಿನಲ್ಲಿ ಮೊಂಬತ್ತಿ ಹಿಡಿದುಕೊಂಡು ಜೆಸಿಂತಾಳಿಗಾಗಿ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆ ನಡೆಸಲಾಗಿದೆ.












Click it and Unblock the Notifications