ಹೊಡೀಬೇಡಮ್ಮ 5 ರು. ಕದ್ದು ಚಾಕಲೇಟು ತಿಂದಿದ್ದು ನಾನೇ
ದೂರವಾಗಿದ್ದ ಗಂಡ ಶ್ರೀಧರ್ ಜೊತೆಗಿನ ಮನಸ್ತಾಪದಿಂದಲೋ, ಮಗ ಹಣ ಕದ್ದಿದ್ದಾನೆಂಬ ಕೋಪದಿಂದಲೋ, ವಿಪರೀತ ಆಕ್ರೋಶಗೊಂಡ ತಾಯಿ ಲಕ್ಷ್ಮಿ 7 ವರ್ಷದ ಮಗ ಯಶಸ್ನನ್ನು ಹಿಡಿದು ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ತಪ್ಪಾಯಿತಮ್ಮ, ಇನ್ನೊಂದೂ ಈ ರೀತಿ ತಪ್ಪು ಮಾಡಲ್ಲ ಎಂದು ಮಗು ಗೋಗರೆಯುತ್ತಿದ್ದರೂ ಕೇಳದೆ ಎಲ್ಲೆಡೆಯಲ್ಲಿ ಬಾರಿಸಿದ್ದಾಳೆ. ಅಪ್ಪ ಅಮ್ಮನ ಜಗಳದಲಿ ಕೂಸು ಬಡವಾಗಿದೆ.
ಯಶಸ್ ಎರಡೂ ಕಣ್ಣಿನ ಕೆಳ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದು ನೋಡಿದರೆ ಆ ಮಹಾತಾಯಿ ಥಳಿಸಿದ ರೀತಿ ಎಂಥದಿರಬಹುದೆಂದು ಕಲ್ಪಿಸಬಹುದು. ಆತನ ಕೈಗಳ ಮೇಲೆ ಕೂಡ ಗಾಯಗಳಾಗಿವೆ. ಅವನನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ವಿಪರೀತ ಊದಿಕೊಂಡಿರುವ ಕಣ್ಣುಗಳ ಸರಿಹೋಗಬೇಕೆಂದರೆ ಕನಿಷ್ಠ 6 ವಾರ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಗಂಡ ಹೆಂಡತಿ ಜಗಳ : ಶ್ರೀಧರ್ ಮತ್ತು ಲಕ್ಷ್ಮಿ 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳು. ಗಂಡ ಹೆಂಡತಿ ನಡುವೆ ಆಗಾಗ ಜಗಳಗಳಾಗುತ್ತಲೇ ಇದ್ದವು. ಸಾಮರಸ್ಯವೆಂಬುದೇ ಇರಲಿಲ್ಲ. ಜಗಳದಿಂದ ಬೇಸತ್ತ ಲಕ್ಷ್ಮಿ ತನ್ನ ತವರುಮನೆಗೆ ಹೋಗಿದ್ದಳು. ಹೆಂಡತಿಗೆ ಬುದ್ಧಿ ಬರಲೆಂದು ಶ್ರೀಧರ್ ತನ್ನ ಮಕ್ಕಳನ್ನು 9 ತಿಂಗಳ ಹಿಂದೆ ಹೆಂಡತಿಯ ತವರುಮನೆಗೆ ಹೋಗಿಬಿಟ್ಟಿದ್ದ.
ಲಕ್ಷ್ಮಿ ಕೆಲಸಕ್ಕೆ ಹೋದಾಗ ಆಕೆ ಇಟ್ಟಿದ್ದ 5 ರು. ತೆಗೆದುಕೊಂಡ ಯಶಸ್ ಚಾಕಲೇಟು ತಿಂದಿದ್ದಾನೆ. 5 ರು. ಕಾಣದಾದಾಗ ಎಲ್ಲಿ ಎಂದು ಕೇಳಿದ್ದಾಳೆ. ಮಗು ತಾನೇ ಆ ಹಣವನ್ನು ತೆಗೆದುಕೊಂಡು ಚಾಕಲೇಟು ತಿಂದಿದ್ದಾಗಿ ಒಪ್ಪಿಕೊಂಡರೂ, ಮಗುವಿಗೆ ತಿದ್ದಿಹೇಳುವ ಬದಲು ತಾಯಿ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಆಕೆಯ ರೌದ್ರಾವತಾರವನ್ನು ನೋಡಿದ ಅಕ್ಕಪಕ್ಕದವರು ಮಗುವನ್ನು ಬಿಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಯಶಸ್ ತನ್ನ ತಾಯಿಯ ಬಳಿಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾನೆ.
ಮಗು ಹಣ ಕದ್ದಿರಬಹುದು, ಚಾಕಲೇಟು ಆಸೆಪಟ್ಟು ತಿಂದಿರಬಹುದು. ಆದರೆ, ತನ್ನ ಮಗನಿಗೆ ತಿಳಿ ಹೇಳಿ ಸರಿದಾರಿಗೆ ತರುವ ಬದಲು, ಯಾರದೋ ಮೇಲಿನ ಸಿಟ್ಟಿಗೆ ಮಗನನ್ನು ಈ ರೀತಿ ಹೊಡೆದಿರುವುದು ಎಷ್ಟು ಸರಿ ಎಂದು ಯಶಸ್ ಅತ್ತೆ ರಾಜೇಶ್ವರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಧರ್ ತನ್ನ ಹೆಂಡತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.