ಈಶ್ವರಪ್ಪ ಅಕ್ರಮ ಆಸ್ತಿ ಲೆಕ್ಕ ಬಿಚ್ಚಿಟ್ಟ ನಾಗಲಕ್ಷ್ಮಿ

ಅರ್ಜಿ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಭ್ಯವಾಗಿರುವ ದಾಖಲೆಗಳ ಪ್ರಕಾರ ಸುಮಾರು 30 ಕೋಟಿಗೂ ಅಧಿಕ ಅಕ್ರಮ ಸಂಪಾದನೆಯನ್ನು ಮಾಡಿದ್ದಾರೆ. ಇದರಲ್ಲಿ ಕೇವಲ 4 ಕೋಟಿ ರೂ. ನೈಜ ಹಣವಾಗಿದ್ದು ಉಳಿದ 26 ಕೋಟಿ ರೂ. ಅಕ್ರಮ ಸಂಪಾದನೆಯಾಗಿದೆ ಎಂದರು.
2004ರ ಚುನಾವಣಾ ಸಂದರ್ಭ ದಲ್ಲಿ ಕೇವಲ 50,000 ರು. ನಗದು, 4 ಲಕ್ಷ ರು. ವಿಮೆ, 15,000 ರು. ವೌಲ್ಯದ ಚಿನ್ನ, 90,000 ರು ಮೌಲ್ಯದ ಬೆಳ್ಳಿ ಹಾಗೂ ತನ್ನ ಮಗನ ಹೆಸರಲ್ಲಿ 6 ಲಕ್ಷ ರು.ನ ಹೂಡಿಕೆಯನ್ನು ಹೊಂದಿದ್ದರು. ಅಲ್ಲದೆ 2008ರಲ್ಲಿ ಶಿವಮೊಗ್ಗದ ಬಿಎಚ್ ರಸ್ತೆಯಲ್ಲಿ 21 ಸಾವಿರ ಚದರ ಅಡಿಯ ಕಟ್ಟಡವನ್ನು ಹೊಂದಿದ್ದರು.
ಪ್ರಸ್ತುತ ಈಶ್ವರಪ್ಪನವರು ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿ 17 ಕೈಗಾರಿಕಾ ನಿವೇಶನ, 14 ವಾಣಿಜ್ಯ ನಿವೇಶನಗಳ ಸಹಿತ ಸುಮಾರು 29 ನಿವೇಶನಗಳನ್ನು ಹೊಂದಿದ್ದಾರೆ. ಇವುಗಳಲ್ಲಿ 9 ಆಸ್ತಿಗಳನ್ನು ಕೇವಲ ಒಂದೇ ದಿನದಲ್ಲಿ (2010 ಜನವರಿ 18ರಂದು) ನೋಂದಣಿ ಮಾಡಿದ್ದಾರೆ ಎಂದು ನಾಗಲಕ್ಷ್ಮಿ ಬಾಯಿ ವಿವರಿಸಿದರು.
ಇದಲ್ಲದೆ ಹಲವಾರು ಆಸ್ತಿಗಳನ್ನು ಈಶ್ವರಪ್ಪ ಮತ್ತು ಅವರ ಕುಟುಂಬದವರು ಅಕ್ರಮವಾಗಿ ಖರೀದಿಸಿದ್ದು, ಈ ಬಗ್ಗೆ ಸೂಕ್ತ ದಾಖಲೆಗಳು ದೊರೆತಿಲ್ಲ ಎಂದು ಅವರು ತಿಳಿಸಿದರು. 2004ರಲ್ಲಿ ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದ ಮಾಹಿತಿಗಳ ಪ್ರಕಾರ ಕೇವಲ ಶಾಸಕ ವೇತನವಷ್ಟೇ ಆದಾಯವಿರುವ ಈಶ್ವರಪ್ಪನವರು ಇಷ್ಟೆಲ್ಲ ಆಸ್ತಿಗಳನ್ನು ಸಂಪಾದಿಸಿರುವುದರ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕೆಂದು ಅವರು ತಿಳಿಸಿದರು.
ಇನ್ನೊಬ್ಬ ಭಸ್ಮಾಸುರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಕ್ಷ ಬಿಟ್ಟ ಸಂದರ್ಭ ದಲ್ಲಿ 'ಭಸ್ಮಾಸುರವೊಂದು ಪಕ್ಷದಿಂದ ಹೋದಂತಾಗಿದೆ' ಎಂದು ಸದಾನಂದ ಗೌಡರು ಹೇಳಿದ್ದು, ಅದೇ ರೀತಿ ಅಕ್ರಮ ಆಸ್ತಿ ಸಂಪಾದಿಸಿರುವ ಈಶ್ವರಪ್ಪ ಕೂಡಾ ಮತ್ತೊಂದು ಭಸ್ಮಾಸುರ ಎಂದು ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಹೇಳಿದ್ದಾರೆ.












Click it and Unblock the Notifications