ಲಂಚ: ಬಂಧಿತ ಅವೈ ಮೇಕಪ್ ಸೆಟ್ ಕೇಳಿದ ಕಥೆ
ಬೆಂಗಳೂರು, ಡಿ.12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯೆಯೊಬ್ಬರು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸುಧಾಮನಗರ ವಾರ್ಡ್ ಪಾಲಿಕೆ ಸದಸ್ಯೆ, ಕಾಂಗ್ರೆಸ್ ಪಕ್ಷದ ಅಂಗಮುತ್ತು ಅವೈ ಬಂಧಿತರು. ಕಲಾಸಿಪಾಳ್ಯದಲ್ಲಿನ ತನ್ನ ಗೃಹ ಕಚೇರಿಯಲ್ಲಿ ಇಂದು ಬೆಳಗ್ಗೆ ಕಲಾಸಿಪಾಳ್ಯದಲ್ಲಿರುವ ಆರ್ಲರ್ಟ್ ವಿಕ್ಟರ್ ರಸ್ತೆಯಲ್ಲಿ ಚಿಕ್ಕ ಹೋಟೆಲ್ಟ್ಟುಇಟ್ಟಿರುವ ಚನ್ನೇಗೌಡ ಎಂಬುವವರಿಂದ 20 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಚನ್ನೇಗೌಡ ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೀಬಳಿಯ ಉಜ್ಜನಿ ಗ್ರಾಮದವ.
ಕಲಾಸಿಪಾಳ್ಯದಲ್ಲಿ ಸಣ್ಣ ಸಸ್ಯಾಹಾರಿ ಹೊಟೇಲೊಂದನ್ನು ನಡೆಸುತ್ತಿರುವ ಚನ್ನೇಗೌಡರಿಂದ ಹೊಟೇಲ್ಗೆ ಅಗತ್ಯವಿರುವ ಪರವಾನಿಗೆ ಇತ್ಯಾದಿ ದಾಖಲಾತಿಗಳಿಲ್ಲ ಎಂಬ ನೆಪವೊಡ್ಡಿ ಅವೈ, ಪ್ರತಿ ತಿಂಗಳು 500 ರೂ. ಮಾಮೂಲಿ ಪಡೆಯುತ್ತಿದ್ದರು. ಆದರೆ, ಕಳೆದ ತಿಂಗಳು ಚನ್ನೇಗೌಡ ಮಾಮೂಲಿ ನೀಡಲಿಲ್ಲ. ಇದರಿಂದ ಕುಪಿತರಾದ ಅವೈ 35 ಸಾವಿರ ರೂ. ಇಡಿಗಂಟನ್ನು ಮಡಗು ಎಂದು ಒತ್ತಾಯಿಸಿದ್ದಾರೆ.

ಮಾತುಕತೆಯ ಬಳಿಕ ಅವೈ 20 ಸಾವಿರ ರೂ. ಲಂಚದ ಹಣಕ್ಕೆ ಒಪ್ಪಿಕೊಂಡಿದ್ದರು. ಆದರೆ, ಚನ್ನೇಗೌಡರಿಗೆ ಲಂಚದ ಹಣ ನೀಡಲು ಇಷ್ಟವಿಲ್ಲದಿದ್ದುದರಿಂದ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅವೈ ವಿರುದ್ಧ ದೂರು ದಾಖಲಿಸಿದ್ದರು. ಲೋಕಾಯುಕ್ತ ಪೊಲೀಸರು ಯಶಸ್ವಿಯಾಗಿ ಬಲೆ ಬೀಸಿ ಆರೋಪಿ ಅವೈಯನ್ನು ಬಂಧಿಸಿದರು. ಆರೋಪಿಯನ್ನು ದಸ್ತಗಿರಿ ಮಾಡಿರುವ ಲೋಕಾಯುಕ್ತ ಪೊಲೀಸರು ಲಂಚದ ಹಣವನ್ನು ವಶಪಡಿಸಿಕೊಂಡು, ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.
ಮೇಡಂ ಅವೈ ಬೆಳಗ್ಗೆಯಿಂದ ಮೇಕಪ್ ಮಾಡಿಕೊಂಡಿರಲಿಲ್ಲ:
ಅವೈ ಲಂಚ ವೃತ್ತಾಂತದ ವೇಳೆ ಕುತೂಹಲ ಘಟನೆಯೊಂದು ನಡೆದಿದೆ. ಲೋಕಾಯುಕ್ತ ಪೊಲೀಸರು ಸೆರೆಹಿಡಿಯುತ್ತಿದ್ದಂತೆ ಅವರ ಮೇಲೇ ಜಬರದಸ್ತು ಮಾಡಿದ ಅವ್ವ ಅವ್ವಾಯಿ 'ಬೆಳಗ್ಗೆಯಿಂದ ಮೇಕಪ್ ಮಾಡಿಕೊಂಡಿಲ್ಲ. ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮುನ್ನ ನನ್ನ ಮನೆಯಿಂದ ಮೇಕಪ್ ಸೆಟ್ ತರಿಸಿಕೊಡಿ' ಎಂದು ಆದೇಶಿಸಿದ್ದಾರೆ. (ಮೇಕಪ್ ಮೆತ್ತಿಸಿಕೊಂಡ ಮೇಡಂ ಅವೈ ಮೇಲಿನ ಚಿತ್ರದಲ್ಲಿದ್ದಾರೆ, ಒಮ್ಮೆ ನೋಡಿ).
ಗಮನಾರ್ಹವೆಂದರೆ, ಅವೈ ತಂದೆ ಅಂಗಮುತ್ತು ಸಹ ಈ ಹಿಂದೆ ಪಾಲಿಕೆಯ ಸದಸ್ಯರಾಗಿದ್ದರು. ಅಂದಹಾಗೆ ಅವೈ ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತ ಬಲೆಗೆ ಬಿದ್ದ ಮೊದಲ BBMP ಸದಸ್ಯೆ. ಆತಂಕದ ವಿಷಯವೆಂದರೆ ಇವರ ಜಬರದಸ್ತು ಇಷ್ಟಕ್ಕೇ ಮುಗಿದಿಲ್ಲ. ಡಿವೈಎಸ್ಪಿ ಡಾ. ಎಂ ಅಶ್ವಿನಿ ಅವರು ಅವೈಳನ್ನು ಬಂಧಿಸುತ್ತಿದ್ದಂತೆ ಜೈಲಿನಿಂದ ಹೊರಬಂದ ಬಳಿಕ ನಿನ್ನನನ್ನು ವಿಚಾರಿಸಿಕೊಳ್ಳುತ್ತೇನೆ' ಎಂದು ಚನ್ನೇಗೌಡರಿಗೆ ಲೋಕಾಯುಕ್ತ ಪೊಲೀಸರ ಎದುರೇ ಧಮ್ಕಿ ಹಾಕಿದ್ದಾಳೆ ಮಹಾ ಅವ್ವಾಯಿ.
ಗೋವಿಂದರಾಜು ಪ್ರಕರಣ ಮಾಸುವ ಮುನ್ನವೇ: ಬಿಬಿಎಂಪಿ ಸದಸ್ಯರೊಬ್ಬರು ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಎರಡನೆಯ ಪ್ರಕರಣ ಇದು. ಎರಡೂ ಪ್ರಕರಣಗಳಲ್ಲಿ, ಲೋಕಾಯುಕ್ತ ಬಲೆಗೆ ಬಿದ್ದವರು ಕಾಂಗ್ರೆಸ್ ಸದಸ್ಯರು.
ಬಿಬಿಎಂಪಿಯ ಗಣೇಶ ಮಂದಿರ ವಾರ್ಡ್ ಸದಸ್ಯ, ಕಾಂಗ್ರೆಸ್ಸಿನ ಎಲ್ ಗೋವಿಂದರಾಜು ಅವರು ಉದಯ ಕುಮಾರ್ ಎಂಬುವವರಿಂದ 2010ರಲ್ಲಿ 2 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಧೀಂದ್ರರಾವ್ ಅವರು ಗೋವಿಂದರಾಜುಗೆ ನಾಲ್ಕು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ, ಇತ್ತೀಚೆಗೆ ಆದೇಶ ನೀಡಿದ್ದರು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಗೋವಿಂದರಾಜುಗೆ, ಅಲ್ಲಿ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.











Click it and Unblock the Notifications