'ಈಡಿಯಟ್' ಕಾಟ್ಜುಗೆ ನ್ಯಾಯಾಲಯದ ನೋಟಿಸ್

ಪರೋಕ್ಷವಾಗಿ ಸ್ವತಃ ತಮ್ಮನ್ನೂ ಸೇರಿದಂತೆ ಉಳಿದ ಶೇ. 10ರಷ್ಟು ಮಂದಿ 'ಈಡಿಯಟ್ಸ್' ಅಲ್ಲವೆಂದು ಸರ್ಟಿಫಿಕೇಟ್ ಕೊಟ್ಟುಕೊಂಡಿದ್ದಾದರೂ ಏಕೆ ಎಂದು ಯಾರೂ ಪ್ರಶ್ನಿಸುವ ಗೊಡವೆಗೆ ಹೋಗಿಲ್ಲವಾದರೂ ಲಖ್ನೋದ ಇಬ್ಬರು ವಿದ್ಯಾರ್ಥಿಗಳು ಹಿರಿಯರಾಗಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ಅಷ್ಟೆಲ್ಲ ಅನುಭವ ಹೊಂದಿರುವ ನಿಮ್ಮಿಂದ ಇಂತಹ ಹೇಳಿಕೆ ಬಂದಿದ್ದು ತರವಲ್ಲ ಎಂದು ಬೇಸರಿಸಿಕೊಂಡು ಅವರ ವಿರುದ್ಧ ಕೋರ್ಟ್ ಮೊರೆಹೋಗಿದ್ದಾರೆ.
ನ್ಯಾ. ಕಾಟ್ಜು ತಮ್ಮ ಹೇಳಿಕೆ ಮೂಲಕ ಭಾರತೀಯರಿಗೆ ಅವಮಾನ ಮಾಡಿದ್ದಾರೆ. ಇದರಿಂದ ಭಾರತೀಯರ ಘನತೆ ಕುಗ್ಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾನೂನು ವಿದ್ಯಾರ್ಥಿನಿ ತನ್ಯಾ ಮತ್ತು ಆಕೆಯ ಸೋದರ ಆದಿತ್ಯ ಠಾಕೂರ್ ಕೋರ್ಟ್ ಮೂಲಕ ನೋಟಿಸ್ ಜಾರಿಗೊಳಿಸಿದ್ದಾರೆ.
'ಭಾರತದಲ್ಲಿ ಶೇ. 90ರಷ್ಟು ಮಂದಿಯ ತಲೆಯಲ್ಲಿ ಮೆದುಳೇ ಇಲ್ಲ. ಈ ಜನರನ್ನು ವಂಚಿಸಲು ಭಾರೀ ಸುಲಭ. ಧರ್ಮದ ಹೆಸರಿನಲ್ಲಿ ಕಿಡಿಗೇಡಿಗಳು ಇವರನ್ನು ಸುಲಭದಲ್ಲಿ ಹಾದಿ ತಪ್ಪಿಸುತ್ತಿದ್ದಾರೆ' ಎಂದು ನವದೆಹಲಿಯಲ್ಲಿ ವಿಚಾರಸಂಕಿರಣವೊಂದರಲ್ಲಿ ನ್ಯಾ. ಕಾಟ್ಜು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ನ್ಯಾ.ಕಾಟ್ಜುರ ಕಟು-ನಿಷ್ಠುರ ಸತ್ಯ: 'ದೆಹಲಿಯಲ್ಲಿ ಕೇವಲ 2,000 ರೂ. ಗಳನ್ನು ನೀಡುವ ಮೂಲಕ ಕೋಮು ಗಲಭೆಗೆ ಪ್ರಚೋದನೆ ನೀಡಬಹುದಾಗಿದೆ. ಯಾರಾದರೂ ಯಾವುದಾದರೂ ಪ್ರಾರ್ಥನಾ ಮಂದಿರಕ್ಕೆ ಅಗೌರವ ತೋರುವ ಕಿಡಿಗೇಡಿತನ ತೋರಿದಲ್ಲಿ ಜನರು ತಮ್ಮೊಳಗೇ ಘರ್ಷಣೆಗೆ ಮುಂದಾಗುತ್ತಾರೆ. ಈ ಷಡ್ಯಂತ್ರದ ಹಿಂದೆ ಕಾಣದ ಶಕ್ತಿಗಳ ಕೈವಾಡವಿದೆ ಎಂಬುದನ್ನೂ ಅರಿಯದೆ ಜನರು ಪರಸ್ಪರ ಕಚ್ಚಾಟ, ಬಡಿದಾಟಗಳಲ್ಲಿ ತೊಡಗುತ್ತಾರೆ' ಎಂದು ಕಾಟ್ಜು ಹೇಳಿದ್ದರು.
'1857ರ ಮೊದಲು ದೇಶದಲ್ಲಿ ಯಾವುದೇ ಕೋಮುವಾದವಿರಲಿಲ್ಲ. ಆದರೆ ಇದೀಗ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ದೇಶದ ಶೇ. 80ರಷ್ಟು ಹಿಂದೂಗಳು ಹಾಗೂ ಶೇ. 80ರಷ್ಟು ಮುಸ್ಲಿಮರು ಕೋಮುವಾದಿಗಳಾಗಿ ಮಾರ್ಪಟ್ಟಿದ್ದಾರೆ. ಇದು ಇಂದಿನ ಕಟು ಹಾಗೂ ನಿಷ್ಠುರ ಸತ್ಯವಾಗಿದೆ. ನಾವು ಮುನ್ನಡೆಯುವ ಬದಲಾಗಿ 150 ವರ್ಷಗಳಷ್ಟು ಹಿಂದೆ ಸರಿದಿರುವುದು ತೀರಾ ದುರದೃಷ್ಟಕರವಾಗಿದ್ದು, 1857ರ ಬಳಿಕ ನಾವು ಬ್ರಿಟಿಷರ ವಿರುದ್ಧ ಬಂಡಾಯ ಎದ್ದ ಬಳಿಕ ಆಂಗ್ಲರು ನಮ್ಮಲ್ಲಿ ಕೋಮುವಾದದ ವಿಷ ಬೀಜವನ್ನು ಬಿತ್ತಿದ್ದಾರೆ'.
'ಈ ಮೂಲಕ ಅವರು ನಮ್ಮನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಹುನ್ನಾರ ನಡೆಸಿದ್ದರು. ಹಿಂದೂ -ಮುಸ್ಲಿಮರ ನಡುವೆ ಜಗಳ ತಂದಿಟ್ಟು ಆಂಗ್ಲರು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾದರು' ಎಂದವರು ವಿಷಾದಿಸಿದ್ದರು.
ಹಿಂದೂಗಳಿಗೆ ಹಿಂದಿ ಹಾಗೂ ಮುಸ್ಲಿಮರಿಗೆ ಉರ್ದು ಭಾಷೆ ಎಂಬ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಬರಲಾಗಿದೆ. ನಮ್ಮ ಪೂರ್ವಿಕರು ಉರ್ದುವನ್ನು ಕಲಿತಿದ್ದರು. ಆದರೆ ದೇಶದ ಮೂರ್ಖ ಜನರು ಸಿದ್ಧಾಂತಕ್ಕೆ ಕಟ್ಟುಬಿದ್ದು, ಜ್ಞಾನವಂಚಿತರಾಗಿದ್ದಾರೆ ಎಂದು ನ್ಯಾ. ಮಾರ್ಕಂಡೇಯ ಕಾಟ್ಜು ಅಭಿಪ್ರಾಯಪಟ್ಟಿದ್ದರು.












Click it and Unblock the Notifications