ಬಿಎಸ್ವೈ ಆಪ್ತರಾದ ಬಸವರಾಜ್, ಪುಟ್ಟಸ್ವಾಮಿ ಅಮಾನತು

ಹಾಗೆಯೆ, ಕೆಜೆಪಿ ಕಚೇರಿ ಉದ್ಘಾಟನೆ ಮತ್ತು ಪ್ರಚಾರ ಸಭೆಯಲ್ಲಿ ಭಾಗವಹಿಸಿದ ವಿಧಾನಪರಿಷತ್ ಸದಸ್ಯ, ಯಡಿಯೂರಪ್ಪನವರ ಬಲಗೈ ಬಂಟ, ಸಹಕಾರ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವರನ್ನು ಕೂಡ ಸಂಪುಟದಿಂದ ವಜಾ ಮಾಡಲಾಗಿದೆ. ತಮ್ಮ ಅತ್ಯಾಪ್ತರ ವಿರುದ್ಧ ಯಾವುದೇ ಕ್ರಮ ಜರುಗಿಸಿದರೆ ಸುಮ್ಮನಿರುವುದಿಲ್ಲ, 24 ಗಂಟೆಯಲ್ಲಿ ಸರಕಾರ ಉರುಳಿಸುತ್ತೇನೆ ಎಂದು ಯಡಿಯೂರಪ್ಪ ಗುಡುಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಭಾರತೀಯ ಜನತಾ ಪಕ್ಷದ ಕೋರ್ ಕಮಿಟಿಯಲ್ಲಿ ಹಿರಿಯ ನಾಯಕರೊಂದಿಗೆ ಶನಿವಾರ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು, ಅಶಿಸ್ತಿನಿಂದ ವರ್ತಿಸಿದವರ ವಿರುದ್ಧ, ಕೆಜೆಪಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವವರ ವಿರುದ್ಧ ಕೂಡ ಇದೇ ರೀತಿ ಶಿಸ್ತಿನ ಕ್ರಮ ಜರುಗಿಸುವುದಾಗಿ ಹೇಳಿದರು.
ಬಸವರಾಜ್ ಅಮಾನತು ಮಾಡಿದ ವಿಷಯವನ್ನು ಈಶ್ವರಪ್ಪ ಹೇಳಿದರೆ, ಪುಟ್ಟಸ್ವಾಮಿಯನ್ನು ಸಂಪುಟದಿಂದ ವಜಾ ಮಾಡಿದ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿದರು. ಆದರೆ, ಯಡಿಯೂರಪ್ಪನವರನ್ನು ಬಹಿರಂಗವಾಗಿ ಬೆಂಬಲಿಸಿರುವ ಬಿ.ಪಿ. ಹರೀಶ್, ನೆಹರೂ ಓಲೆಕಾರ್, ಹರತಾಳು ಹಾಲಪ್ಪ, ಎಂಡಿ ಲಕ್ಷ್ಮಿನಾರಾಯಣ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದುಕೊಂಡಿಲ್ಲದಿರುವುದು ಅಚ್ಚರಿ ಮೂಡಿಸುವ ಸಂಗತಿ.
ಹಿಂದೆ ಕೂಡ ರಾಜ್ಯ ಮತ್ತು ರಾಷ್ಟ್ರ ನಾಯಕರ ವಿರುದ್ಧ ಟೀಕೆ ಮಾಡಿದ್ದ ಧನಂಜಯ್ ಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅದೇ ರೀತಿ ಇವರನ್ನು ಕೂಡ ಪಕ್ಷದಿಂದ ಅಮಾನತು ಮಾಡಲಾಗಿದೆ. ಬಿಜೆಪಿ ಕೋರ್ ಕಮಿಟಿ ಜೊತೆ ಚರ್ಚೆ ನಡೆಸಿದ ಬಳಿಕ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರಿಂದ ಅನುಮತಿ ಪಡೆದ ಬಳಿತ ಈ ಶಿಸ್ತಿನ ಕ್ರಮ ಜರುಗಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಈಶ್ವರಪ್ಪ ನುಡಿದರು.
ಈ ಚರ್ಚೆಯಲ್ಲಿ ಕರ್ನಾಟಕದ ನಾಯಕರುಗಳಾದ ಉಪ ಮುಖ್ಯಮಂತ್ರಿ ಆರ್ ಅಶೋಕ್, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ಪ್ರಹ್ಲಾದ್ ಜೋಶಿ, ನಳೀನ್ ಕುಮಾರ್ ಕಟೀಲ್, ಕರ್ನಾಟಕದ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್, ರಾಮಲಾಲ್ ಮುಂತಾದವರು ಭಾಗವಹಿಸಿದ್ದರು. ಕೇವಲ ಇಬ್ಬರ ವಿರುದ್ಧ ಕ್ರಮ ಜಗುರಿಸುವ ಮುಖಾಂತರ ಉಳಿದವರಿಗೆ ಬಿಸಿ ಮುಟ್ಟಿಸಿದೆ. ಆದರೆ, ಈ ಕ್ರಮ ಯಡಿಯೂರಪ್ಪ ಬೆಂಬಲಿಗರು ಅವರ ಹಿಂದೆ ಹೋಗುವುದನ್ನು ತಡೆಯುವುದೆ?












Click it and Unblock the Notifications