ಬಿಎಸ್ವೈ ಹಾವೇರಿ ಕೆಜೆಪಿ ಸಮಾವೇಶದ ಹೈಲೈಟ್ಸ್

ಎಲ್ಲ ಸಿದ್ಧತೆಗಳನ್ನು ಸಾಕ್ಷಾತ್ ನೋಡಲು ಸ್ವತಃ ಯಡಿಯೂರಪ್ಪನವರು ಹಾವೇರಿಗೆ ಶನಿವಾರ ಮಧ್ಯಾಹ್ನ 1 ಗಂಟೆಗೆ ಬಂದಿದ್ದರು. ಬಿ.ಎಚ್. ಕಾಲೇಜು ಮೈದಾನದಲ್ಲಿ ಹಾಕಲಾಗಿರುವ ಬೃಹತ್ ಪೆಂಡಾಲು, ಬಂದವರಿಗಾಗಿ ಉಟದ ನೀರಿನ ವ್ಯವಸ್ಥೆ, ಆಸನದ ವ್ಯವಸ್ಥೆಯನ್ನು ಖುದ್ದಾಗಿ ವೀಕ್ಷಿಸಿದರು. ಅವರ ಹಿಂದೆ ಮಾಜಿ ನಟ, ಹಾಲಿ ರಾಜಕಾರಣಿ ಮದನ್ ಪಟೇಲ್ ಅವರು ಸುತ್ತಾಡುತ್ತಿದ್ದರು.
ಈ ಸಂದರ್ಭದಲ್ಲಿ, ತಾವು ಯಾವ ಬಿಜೆಪಿ ಶಾಸಕರಿಗೂ ಸಮಾವೇಶಕ್ಕೆ ಬಾ ಎಂದು ಹೇಳಿಲ್ಲ, ಪ್ರೀತಿಯಿಂದ ಬರುವವರು ಬರಲಿ, ಬಿಜೆಪಿ ಸರಕಾರ ಪೂರ್ಣಾವಧಿ ಪೂರೈಸಬೇಕೆಂಬುದು ತಮ್ಮ ಅಭಿಲಾಶೆ, ಆದರೆ ಬರುವವರ ವಿರುದ್ಧ ಕ್ರಮ ಶಿಸ್ತಿನ ಕ್ರಮ ಜರುಗಿಸಿದರೆ ಅದಕ್ಕೆ ಅವರೇ ಜವಾಬ್ದಾರರು, ಅದು ರಾಜ್ಯ ನಾಯಕರಿಷ್ಟ ಎಂದು ಯಡಿಯೂರಪ್ಪ ಹಿಂದೆ ಹೇಳಿದ ಮಾತನ್ನು ಪುನರುಚ್ಚರಿಸಿದರು. ಈ ವರದಿ ಬರೆಯುತ್ತಿರುವಾಗಲೇ ಇಬ್ಬರು ಆಪ್ತರನ್ನು ಪಕ್ಷದಿಂದ ಅಮಾನತು ಮಾಡಿರುವ ಸುದ್ದಿ ಬಂದಿದೆ.
ಆದರೆ, 33 ಡಿಗ್ರಿ ಗರಿಷ್ಠ ತಾಪಮಾನದಿಂದ ನಿಗಿನಿಗಿ ಅನ್ನುತ್ತಿರುವ ಹಾವೇರಿಯಲ್ಲಿ ಹರಿದುಬರುತ್ತಿರುವ ಉತ್ಸಾಹಿ ಜನ, ನಡೆಯುತ್ತಿರುವ ಸಿದ್ಧತೆ ನೋಡಿದರೆ ಯಾರಿಗಾದರೂ ಅಚ್ಚರಿಯಾಗದೆ ಇರದು. ಊರು ಈಗಾಗಲೆ ಧೂಳಿನಿಂದ ಮುಳುಗಿಹೋಗಿದೆ. ಜೊತೆಗೆ ವಿಧಾನಪರಿಷತ್ ಸದಸ್ಯ ಶಿವರಾಜ್ ಸಜ್ಜನ್ ಅವರ ಮನೆಯಲ್ಲಿ ಭಾನುವಾರ ಬೆಳಿಗ್ಗೆ ಬ್ರೆಕ್ಫಾಸ್ಟ್ ಸಭೆ ನಡೆಯುವುದು ಖಚಿತವಾಗಿದೆ. ಇದರಲ್ಲಿ 30ರಿಂದ 35 ಶಾಸಕರು, ಸಂಸದರು ಭಾಗಿಯಾಗುವ ನಿರೀಕ್ಷೆಯಿದೆ.
ಸಿದ್ಧತೆಯ ಹೈಲೈಟುಗಳು ಕೆಳಗಿನಂತಿವೆ
* ಕೆಜೆಪಿ ಉದ್ಘಾಟನಾ ಸಮಾರಂಭದಲ್ಲಿ ಹಾವೇರಿ ಹತ್ತಿರದ ಹಳ್ಳಿಗಳಿಂದ, ಕರ್ನಾಟಕದ ಎಲ್ಲೆಡೆಗಳಿಂದ 5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ.
* 500 ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗಾಗಿ ಅಹರ್ನಿಶಿ ದುಡಿಯುತ್ತಿದ್ದಾರೆ. ಊಟ, ವಸತಿಯ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.
* ಪೆಂಡಾಲಿಗಾಗಿ, ಆಸನ ಮತ್ತು ಊಟದ ವ್ಯವಸ್ಥೆಗಾಗಿ ಅಂದಾಜು 5 ಕೋಟಿ ರು. ವೆಚ್ಚ ಮಾಡಲಾಗಿದೆ.
* ಪೇಪರುಗಳಿಗೆ, ಟಿವಿಗಳಿಗೆ ನೀಡಿರುವ ಜಾಹೀರಾತು, ವಾಹನಗಳಿಗೆ, ಜನರಿಗೆ ಉಳಿಯಲು ಮಾಡಿರುವ ವ್ಯವಸ್ಥೆಗೆ ಮಾಡಿರುವ ಖರ್ಚು ಬೇರೆ.
* ಒಟ್ಟು 16 ಸಾವಿರದ 8 ನೂರು ವಾಹನಗಳು ಲಕ್ಷಾಂತರ ಜನರನ್ನು ರಾಜ್ಯದ ಎಲ್ಲೆಡೆಯಿಂದ ಸಮಾವೇಶಕ್ಕೆ ಕರೆದುತರಲಿವೆ.
* ಹಾವೇರಿಯಲ್ಲಿರುವ ಪ್ರವಾಸಿ ಮಂದಿರ, ಖಾಸಗಿ ಶಾಲೆ, ಕಾಲೇಜುಗಳು ಈಗಾಗಲೆ ಭರ್ತಿಯಾಗಿವೆ.
* ಸುಮಾರು 11 ಗಂಟೆಗೆ ಆರಂಭವಾಗಲಿರುವ ಉದ್ಘಾಟನಾ ಸಮಾರಂಭವನ್ನು ಹೆಲಿಕಾಪ್ಟರ್ ಮುಖಾಂತರ ಚಿತ್ರೀಕರಿಸಲಾಗುತ್ತಿದೆ.
* ಸುತ್ತಲಿನ ಶಿಗ್ಗಾಂವಿ, ರಾಣಿಬೆನ್ನೂರು, ರಟ್ಟಿಹಳ್ಳಿ, ಬ್ಯಾಡಗಿ, ಹಿರೇಕೇರೂರು, ಹಾನಗಲ್, ಹೊಸರಿತ್ತಿ ಊರುಗಳಿಂದ ಜನಸಾಗರ ಹರಿದುಬರುತ್ತಿದೆ.












Click it and Unblock the Notifications