ದೇವೇಗೌಡರ ಕಾರ್ಖಾನೆ ಮುಚ್ಚಿ ಹೋಗಿದೆ

ಜಿಲ್ಲೆಯಲ್ಲಿ ಜೆಡಿಎಸ್ vs ಕೆಜೆಪಿ ಸಮರ ಶುರುವಾಗಿದೆ. ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ಅವರು ಭಾರಿ ಸಂಖ್ಯೆಯಲ್ಲಿ ಬೆಂಬಲಿಗರನ್ನು ಕೆಜೆಪಿಯತ್ತ ಕರೆದೊಯ್ಯುತ್ತಿರುವುದು ಜೆಡಿಎಸ್ ಗೆ ಸಹಿಸದ ವಿಷಯವಾಗಿದೆ.
ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ ತಮಗೆ ಠೇವಣಿ ಸಿಗದೆ ಅನುಭವಿಸಿದ ಸೋಲು ನನ್ನದಲ್ಲ. ಅದು ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ರೇವಣ್ಣ ಅವರ ಸೋಲು ಎಂದು ಜೆಡಿಎಸ್ ತೊರೆದು ಕೆಜೆಪಿಗೆ ಸೇರ್ಪಡೆಗೊಂಡಿರುವ ಸಕಲೇಶಪುರ ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಕಾಡಿನಲ್ಲಿದ್ದ ನನ್ನನ್ನು ನಾಡಿಗೆ ತಂದು ಸ್ಪರ್ಧೆಗಿಳಿಸಿದವರೇ ರೇವಣ್ಣ. ಬಸವನಗುಡಿ ಕ್ಷೇತ್ರದ ಪರಿಚಯವೇ ಇಲ್ಲದ ನನ್ನನ್ನು ಕಣಕ್ಕಿಳಿಸಲಾಯಿತು. ಆದ್ದರಿಂದ ಸೋಲಿನ ಅವಮಾನವಾಗಿದ್ದರೆ ಅದು ರೇವಣ್ಣ ಅವರಿಗೆ ಆಗಬೇಕೆ ಹೊರತು ನನಗಲ್ಲ ಎಂದು ತಮ್ಮ ಮೇಲಿನ ಆರೋಪಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದರು.
ತಮ್ಮ ವಿರುದ್ಧ ರೇವಣ್ಣ ಇಲ್ಲಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನಿಂದ ಜೆಡಿಎಸ್ ಗೆ ನಷ್ಟವಾಗಿಲ್ಲ ಎಂದು ಟೀಕಿಸಿದ ವಿಶ್ವನಾಥ್. ಹಾಸನ ಜಿಲ್ಲೆಗೆ ಸಿಬಿಐ, ಸಿಓಡಿ, ಲೋಕಾಯುಕ್ತ ಎಲ್ಲವೂ ರೇವಣ್ಣ ಬಳಿಯೇ ಇದೆ ಎಂದು ಕಟಕಿ ಆಡಿದ ಅವರು ಇರುವೆಯಲ್ಲಿ ಚರ್ಬಿ ತೆಗೆಯುವ ಕೆಲಸ ಮಾಡದೇ ಅನಗತ್ಯ ಟೀಕೆ ಬಿಟ್ಟು ಸತ್ಯ ಹೇಳಿ ಎಂದು ವಿಶ್ವನಾಥ್ ಹೇಳಿದರು.
ನನ್ನ ಆಸ್ತಿ ಮತ್ತು ನಿಮ್ಮ ಆಸ್ತಿಯನ್ನು ಲೆಕ್ಕ ಹಾಕಿದರೆ ಸತ್ಯ ಜನರಿಗೆ ಗೊತ್ತಾಗಲಿದೆ ಎಂದು ಸವಾಲು ಹಾಕಿದರು. ಸಕಲೇಶಪುರದ ಮಾಜಿ ಶಾಸಕ ಬಿ.ಆರ್.ಗುರುದೇವ್ ಕೆಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಅವರು ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ಗಾಗಿ ಪ್ರತಿಸ್ಪರ್ಧಿ ಆಗಲಿದ್ದಾರೆ ಎಂಬ ಸುದ್ದಿಯ ಬಗ್ಗೆ ಸ್ಪಷ್ಟವಾಗಿ ಏನ್ನನ್ನೂ ವಿಶ್ವನಾಥ್ ಹೇಳಲಿಲ್ಲ.
ಕೆಜೆಪಿ ಟಿಕೆಟ್ ಕೇಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪಕ್ಷದ ನಾಯಕರಾಗಿರುವ ಯಡಿಯೂರಪ್ಪ ಯಾರಿಗೆ ಸ್ಪರ್ಧಿಸಲು ಅವಕಾಶ ಕೊಡುತ್ತಾರೋ ಅವರೇ ಕಣದಲ್ಲಿರುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಜಿಲ್ಲೆಯ 7 ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಕೆಜೆಪಿಯಿಂದ ಸ್ಪರ್ಧೆ ಬಯಸಿರುವ ಆಕಾಂಕ್ಷಿಗಳ ಪಟ್ಟಿ ಏರುತ್ತಲೇ ಇದೇ ಎಂದು ಹೇಳಿದ ವಿಶ್ವನಾಥ್, ಬರುವ 9 ರಂದು ಹಾವೇರಿಯಲ್ಲಿ ನಡೆಯಲಿರುವ ಕೆಜೆಪಿ ಸಮಾವೇಶಕ್ಕೆ ಹಾಸನ ಜಿಲ್ಲೆಯಿಂದ 5 ಸಾವಿರ ಕಾರ್ಯಕರ್ತರು
ಹೊರಡಲಿದ್ದಾರೆ ಎಂದು ಹೇಳಿದರು.












Click it and Unblock the Notifications