ಬೆಂಗಳೂರು: ಪಿಯು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಸೈಂಟ್ ಜೋಸೆಫ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಶರಣ್ಯ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಗುರುವಾರ ಬೆಳಗ್ಗೆ ಪರೀಕ್ಷೆ ಬರೆಯಲು ತಡವಾಗಿ ಬಂದ ಶರಣ್ಯಳನ್ನು ಉಪನ್ಯಾಸಕರು ಬೈದ ಕಾರಣ ಆಕೆ ಮನನೊಂದು ಈ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ.
ಸೈಂಟ್ ಜೋಸೆಫ್ ಕಾಲೇಜಿನ 4ನೇ ಮಹಡಿ ಏರಿ ಅಲ್ಲಿಂದ ಕೆಳಗೆ ಹಾರಿದ್ದಾಳೆ. 18 ವರ್ಷ ವಯಸ್ಸಿನ ಶರಣ್ಯಳನ್ನು ಕೂಡಲೇ ಸಮೀಪದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ತುರ್ತು ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಏನು ಹೇಳಲಾಗುವುದಿಲ್ಲ ಎಂದು ಆಸ್ಪತ್ರೆ ವೈದ್ಯರು ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.[ಆತ್ಮಹತ್ಯೆ ತಡೆಗೆ ಈ ಸಹಾಯವಾಣಿ ಬಳಸಿ]
ನಿಗೂಢವಾದ ಪ್ರಕರಣ: ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಪೊಲೀಸರು ಶರಣ್ಯ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದಾರೆ.
* ಕಾಲೇಜಿಗೆ ತಡವಾಗಿ ಬಂದ ಶರಣ್ಯಳನ್ನು ಉಪನ್ಯಾಸಕರು ನಿಂದಿಸಿದ್ದು, ಆಕೆಗೆ ನೋವುಂಟು ಮಾಡಿದೆ. ಈ ಹಿಂದೆ ಕೂಡಾ ಉಪನ್ಯಾಸಕರು ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮ ಕೈಗೊಂಡ ಉದಾಹರಣೆಗಳಿದೆ. ಇದರಿಂದ ಮನ ನೊಂದ ಶರಣ್ಯ ಆತ್ಮಹತ್ಯೆ ಯತ್ನಿಸಿದ್ದಾಳೆ ಎಂದು ಕೆಲವರು ಹೇಳಿಕೆ ನೀಡಿದ್ದಾರೆ..
* ಕೆಲ ಸಹಪಾಠಿಗಳ ಪ್ರಕಾರ, ಶರಣ್ಯ,ಕಾಲೇಜಿಗೆ ತಡವಾಗಿ ಬಂದರೂ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿತ್ತು. ಆದರೆ, ಶರಣ್ಯ, ಪರೀಕ್ಷೆಯಲ್ಲಿ ಕಾಪಿ ಹೊಡೆಯುವಾಗ ಸಿಕ್ಕಿಬಿದ್ದಳು. ಎಲ್ಲರ ಮುಂದೆ ಅಪಮಾನವಾಗಿದ್ದು ಸಹಿಸದೆ ಆತ್ಮಹತ್ಯೆಗೆ ಯತ್ನಿಸಿರಬಹುದು ಎನ್ನಲಾಗಿದೆ.
* ಪೋಷಕರ ಪ್ರಕಾರ, ಎರಡು ದಿನಗಳಿಂದ ನಿದ್ದೆ ಮಾಡದೆ ಪರೀಕ್ಷೆಗಾಗಿ ಓದಿದ್ದಾಳೆ. ಕಾಲು ಜಾರಿ ಮೇಲಿಂದ ಬಿದ್ದಿರುವ ಸಾಧ್ಯತೆಯಿದೆ. ಆತ್ಮಹತ್ಯೆ ಮಾಡಿಕೊಳ್ಳುವಂಥ ಹುಡುಗಿ ಅಲ್ಲ ಎಂದಿದ್ದಾರೆ.
ಶರಣ್ಯ ದೇಹಸ್ಥಿತಿ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ತನಿಖೆ ಮುಂದುವರೆದಿದೆ ಎಂದು ಕಬ್ಬನ್ ಪಾರ್ಕ್ ಠಾಣಾಧಿಕಾರಿಗಳು ಹೇಳಿದ್ದಾರೆ.












Click it and Unblock the Notifications