ಶತಮಾನದ ಹಿಂದೂ ದೇಗುಲ ಧ್ವಂಸ, ಉದ್ವಿಗ್ನ
ಕರಾಚಿ, ಡಿ.2: ಶತಮಾನಕ್ಕೂ ಹಳೆಯದಾದ ಹಿಂದೂ ದೇಗುಲವನ್ನು ಸ್ಥಳೀಯ ಬಿಲ್ಡರ್ ವೊಬ್ಬ ಆತುರವಾಗಿ ಕೆಡವಿದ್ದಾರೆ. ಇದರಿಂದ ಅಲ್ಪಸಂಖ್ಯಾತ ಹಿಂದೂ ಸಮುದಾಯ ಭಾನುವಾರ(ಡಿ.2) ಸಿಡಿದೆದ್ದಿದೆ.
ಭಾರತ ಹಾಗೂ ಪಾಕಿಸ್ತಾನ ಇಬ್ಭಾಗ ಕಾಲದಿಂದಲೂ ವಿವಾದಿತವಾಗಿದ್ದ ಇಲ್ಲಿನ ಸೊಲ್ಜರ್ ಬಜಾರಿನಲ್ಲಿರುವ ಶ್ರೀರಾಮ ಪಿರ್ ಮಂದಿರ ನೆಲಕ್ಕುರುಳಿದೆ. ದೇಗುಲದ ಜೊತೆಗೆ ಅಕ್ಕ ಪಕ್ಕದ 40 ಹಿಂದೂ ಕುಟುಂಬಗಳ ಮನೆಗಳನ್ನು ಉರುಳಿಸಲಾಗಿದೆ.

ದೇಗುಲ ನೆಲಕ್ಕುರುಳಿದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ, ಪಾಕಿಸ್ತಾನ ಹಿಂದೂ ಕೌನ್ಸಿಲ್ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಭಾನುವಾರ ಬೆಳಗ್ಗಿನಿಂದಲೇ ಕರಾಚಿ ಪ್ರೆಸ್ ಕ್ಲಬ್ ಮುಂದೆ ಪ್ರತಿಭಟನೆ ನಡೆದಿದೆ.
ದೇಗುಲವನ್ನು ಮುಟ್ಟುವುದು ಬೇಡ ಎಂದು ಬಿಲ್ಡರ್ ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದರೂ ಲೆಕ್ಕಿಸದೆ, ದೇಗುಲ ಕೆಡವಿರುವ ಬಗ್ಗೆ ಸ್ಥಳೀಯರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕಾಶ್ ಎಂಬ ಯುವಕ, 'ನಮ್ಮ ದೇಗುಲ, ದೇವರನ್ನು ಬೀದಿಗೆ ಎಸೆದಿದ್ದಾರೆ. ಇದಕ್ಕಿಂತ ದೊಡ್ಡ ಅಪಮಾನ ಬೇರೊಂದಿಲ್ಲ. ಬಿಲ್ಡರ್ ಗೆ ತಕ್ಕಶಿಕ್ಷೆಯಾಗಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ದೇಗುಲ ಹಾಗೂ ಮನೆ ಕೆಡವಲು ಬುಲ್ಡೋಜರ್ ತಂದಿದ್ದರು. ಸ್ಥಳೀಯ ಪೊಲೀಸರು, ಪ್ಯಾರಮಿಲಿಟರಿ ಪಡೆ ಸಹಾಯ ಕೂಡಾ ಪಡೆಯಲಾಗಿತ್ತು. ಮನೆಯಲ್ಲಿನ ಮೌಲ್ಯಯುತ ಅಗತ್ಯ ವಸ್ತುಗಳನ್ನು ಹೊರಕ್ಕೆ ತೆಗೆದುಕೊಳ್ಳಲು ಬಿಡಲಿಲ್ಲ ಎಂದು ಮನೆ ಕಳೆದುಕೊಂಡ ಬಂವಾರಿ ದೇವಿ ಗೋಳಾಡುತ್ತಿದ್ದಾರೆ.
ಆತಂಕದಲ್ಲಿ ದೇಗುಲಗಳು : ಕರಾಚಿ ನಗರದ ನೆಟ್ಟಿವ್ ಜೆಟ್ಟಿ ಎಂಬ ಸೇತುವೆ ಬಳಿಯಿರುವ ಶ್ರೀಲಕ್ಷ್ಮಿ ನಾರಾಯಣ ಮಂದಿರವನ್ನು ಕೆಡವದಂತೆ ಕೈಲಾಸ್ ವಿಶ್ರಮ್ ಎಂಬ ಸ್ಥಳೀಯ ನಿವಾಸಿ ಸಿಂಧ್ ಹೈಕೋರ್ಟ್ನಲ್ಲಿ ದೂರು ಸಲ್ಲಿಸಲಾಗಿತ್ತು.
ದೂರನ್ನು ಪುರಸ್ಕರಿಸಿದ ಮುಖ್ಯನ್ಯಾಯಮೂರ್ತಿ ಮುಷಿರ್ ಆಲಂ ಅವರ ಅಧ್ಯಕ್ಷತೆಯ ವಿಭಾಗೀಯ ಪೀಠ, ದೇವಾಲಯ ನಿರ್ನಾಮ ಕಾರ್ಯಕ್ಕೆ ತಡೆಯೊಡ್ಡಿ ಆದೇಶ ಹೊರಡಿಸಿದ್ದರು.
ಇತಿಹಾಸ ಪ್ರಸಿದ್ಧ ನೆಟ್ಟಿವ್ ಜೆಟ್ಟಿ ಸೇತುವೆ ಅಡಿಯಲ್ಲಿ ನಿರ್ಮಿಸಲಾಗಿರುವ ಪ್ರಖ್ಯಾತ ಆಹಾರ ಸಾಮಗ್ರಿ ದೊರೆಯುವ ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿ ಲಕ್ಷ್ಮಿನಾರಾಯಣ ದೇವಾಲಯವನ್ನು ಧ್ವಂಸ ಮಾಡಬೇಕೆಂದು ಕರಾಚಿ ಪೋರ್ಟ್ ಟ್ರಸ್ಟ್(KPT) ಮತ್ತು ಇತರೆ ಸ್ಥಳೀಯರು ತೀರ್ಮಾನ ಕೈಗೊಂಡಿದ್ದರು.
ಅಂತ್ಯಕ್ರಿಯೆ, ಸಾವಿನ ನಂತರದ ಕ್ರಿಯಾವಿಧಿಗಳು ಮತ್ತು ಇತರೆ ಧಾರ್ಮಿಕ ಕಾರ್ಯಗಳನ್ನು ನಡೆಸಲು ಇದೊಂದು ಪವಿತ್ರ ಸ್ಥಳವಾಗಿದೆ. ಪೋರ್ಟ್ ಗ್ರ್ಯಾಂಡ್ ಎಂಬ ಹೆಸರಿನಲ್ಲಿ ಆಹಾರ ಸಾಮಗ್ರಿಗಳ ಮಾರುಕಟ್ಟೆ ತೆರೆದಿರುವ ಖಾಸಗಿ ಕಂಪನಿ, ಕೆಪಿಟಿ ಎಂಬ ಮತ್ತೊಂದು ಕಂಪನಿ ಜತೆ ಕೈ ಜೋಡಿಸಿದ್ದು ನಿರ್ಮಾಣ ಕಾರ್ಯ ಕೈಗೊಂಡಿದೆ. ಈ ಮೂಲಕ, ದೇವಾಲಯಕ್ಕೆ ದೊರೆಯುತ್ತಿದ್ದ ಸಮುದ್ರ ನೀರಿನ ಮಾರ್ಗವನ್ನೇ ಸ್ಥಗಿತಗೊಳಿಸಿದೆ.
ಕೆಪಿಟಿ ಉಗ್ರಾಣ ನಿರ್ಮಾಣ ಕಾರ್ಯದಿಂದ ಧಾರ್ಮಿಕ ಸ್ಥಳಕ್ಕೆ ಅವಸಾನ ಭೀತಿ ಮತ್ತು ಅಲ್ಪಸಂಖ್ಯಾತ ವರ್ಗದ ಹಕ್ಕಿಗೂ ಚ್ಯುತಿ ಬಂದಿದೆ ಎಂದು ಅರ್ಜಿದಾರರು ಅಳಲು ತೋಡಿಕೊಂಡಿದ್ದರು. ಅಸಂಖ್ಯಾತ ಹಿಂದೂ ಧಾರ್ಮಿಕ ಸ್ಥಳಗಳಿಗೆ ಸಂಚಕಾರದ ಜೊತೆಗೆ ಹಿಂದೂಗಳು ಪಾಕಿಸ್ತಾನದಲ್ಲಿ ವಾಸಿಸಲು ಭೀತಿ ಪಡುವ ಕಾಲ ಬಂದಿದೆ.












Click it and Unblock the Notifications