ಸೊರಬದಲ್ಲಿ ಕುಮಾರ್ vs ಬಂಗಾರಪ್ಪ ಸ್ಪರ್ಧೆ?

ಎಲ್ಲಾ ಪಕ್ಷಗಳಿಗಿಂತ ಜೆಡಿಎಸ್ ಪಕ್ಷ ಈ ವಿಷಯದಲ್ಲಿ ಮುಂದಿದ್ದು, ಸಮಾವೇಶಗಳ ಹೆಸರಿನಲ್ಲಿ ಊರೂರು ಸುತ್ತುತ್ತಾ ಯಾವ ಅಭ್ಯರ್ಥಿ ಪರ ಜನರ ಒಲವಿದೆ ಎಂಬ ಲೆಕ್ಕಾಚಾರ ಪಕ್ಕಾ ಮಾಡಿಕೊಳ್ಳುತ್ತಿದೆ.
ಈಗ ಇದೇ ಕೆಲಸವನ್ನು ಕಾಂಗ್ರೆಸ್ ಮುಂದುವರೆಸಿದ್ದು, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಸೊರಬ ಕ್ಷೇತ್ರ ಯಾರು ಸ್ಪರ್ಧಿಸಬೇಕು ಎಂಬುದರ ಬಗ್ಗೆ ಚರ್ಚೆ, ಅಭಿಪ್ರಾಯ ಸಂಗ್ರಹ ಆರಂಭಗೊಂಡಿದೆ.
ಬಿಜೆಪಿ ಮಾತ್ರ ಇನ್ನೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹಾಲಿ ಶಾಸಕರಿಗೆ ಟಿಕೆಟ್ ನೀಡುತ್ತೇವೆ ಎಂದು ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಸಲೀಸಾಗಿ ಹೇಳಿದ್ದಾರೆ. ಆದರೆ, ಬೇರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯಲ್ಲಿ ಟಿಕೆಟ್ ನೀಡುವುದು ಅಷ್ಟು ಸುಲಭದ ಮಾತಲ್ಲ.
ಈಗ ಸೊರಬ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಕಾಂಗ್ರೆಸ್ ವೀಕ್ಷಕರಿಗೆ ಅಭಿಪ್ರಾಯ ಸಂಗ್ರಹಣಾ ವರದಿಯನ್ನು ಸಲ್ಲಿಸಲಾಗಿದೆ.
ಕೆಪಿಸಿಸಿಯಿಂದ ನೇಮಕವಾದ ಜಿಲ್ಲಾ ಕಾಂಗ್ರೆಸ್ ವೀಕ್ಷಕ ಮಲ್ಲಿಕಾರ್ಜುನ ಸಮ್ಮುಖದಲ್ಲಿ ಸೊರಬ, ಆನವಟ್ಟಿ ಹಾಗೂ ತಾಳಗುಪ್ಪ ಹೋಬಳಿ ಕಾರ್ಯಕರ್ತರು, ಪದಾಧಿಕಾರಿಗಳು ಸಭೆ ಸೇರಿ ಈ ನಿರ್ಣಯ ಕೈಗೊಂಡಿದ್ದಾರೆ.
ಜೆಡಿಎಸ್ ತಂತ್ರ: ಕುಮಾರ್ ಬಂಗಾರಪ್ಪ ಪರ ಜನರ ಒಲವು ಮೂಡುತ್ತಿರುವ ಕಾರಣ ಹಾಗೂ ಬಿಜೆಪಿ ಅಭ್ಯರ್ಥಿ ಗೊಂದಲ ಇರುವುದರಿಂದ ಸೊರಬದಲ್ಲಿ ಕುಮಾರ್ ವಿರುದ್ಧ ಮಧು ಅವರನ್ನು ನಿಲ್ಲಿಸಿದರೆ ಹೇಗೆ ಎಂದು ಜೆಡಿಎಸ್ ಚಿಂತನೆ ನಡೆಸಿದೆ.
ಕುಟುಂಬದಲ್ಲಿ ಅಣ್ಣ ತಮ್ಮರ ಜಗಳ, ಎಸ್ ಬಂಗಾರಪ್ಪ ಅವರ ಅಂತ್ಯ ಸಂಸ್ಕಾರ ವೇಳೆ ರಾದ್ಧಾಂತ ಎಲ್ಲವೂ ಚುನಾವಣೆಯಲ್ಲಿ ಬಂಡವಾಳವಾಗುವ ನಿರೀಕ್ಷೆಯಿದೆ. ಆದರೆ, ಮಧು ಅವರ ಸ್ಪರ್ಧೆ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ.
ಬಿಜೆಪಿ ಹಾಲಿ ಶಾಸಕ ಹಾಲಪ್ಪ ಅವರು ಮತ್ತೊಮ್ಮೆ ಬಿಜೆಪಿ ಟಿಕೆಟ್ ಹಿಡಿದು ಜನರ ಮುಂದೆ ಹೋಗುವುದು ಸಾಧ್ಯವಿಲ್ಲದ ಮಾತು. ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಹೋಗಿ ನಿಂತರೂ ಈ ಬಾರಿ ಗೆಲ್ಲುವುದು ಖಾತ್ರಿಯಿಲ್ಲ ಎನ್ನಲಾಗಿದೆ. ಒಟ್ಟಾರೆ ಸೊರಬ ಅಭ್ಯರ್ಥಿ ಆಯ್ಕೆ ಕುತೂಹಲ ಕೆರಳಿಸಿದೆ. ಬಿಜೆಪಿ ಮಾತ್ರ ನಿಧಾನಗತಿಯಲ್ಲಿ ರಣತಂತ್ರ ರೂಪಿಸುತ್ತಿದೆ.












Click it and Unblock the Notifications