ಬಿಜೆಪಿ vs ಕೆಜೆಪಿ ಕದನ, ಲಾಭ ಪಡೆಯಲು ಕೈ ಹವಣಿಕೆ

ಹಾಗೆ ನೋಡಿದರೆ, ವಿ ಸೋಮಣ್ಣ ಅವರ ಹೆಸರಿಗೂ ಮುಂಚೆ ಕಾಂಗ್ರೆಸ್ ಸೇರಲು ಸಚಿವ ಬಿ.ಎನ್. ಬಚ್ಚೇಗೌಡ ಮತ್ತು ಸಿ.ಪಿ. ಯೋಗೇಶ್ವರ್ ತುದಿಗಾಲಲ್ಲಿ ನಿಂತಿದ್ದಾರೆ ಎಂಬ ಸುದ್ದಿ ಇತ್ತು. ವಿ. ಸೋಮಣ್ಣ, ಆನಂದ ಅಸ್ನೋಟಿಕರ್ ಹಾಗೂ ಸಚಿವ ರಾಜೂಗೌಡ ಕಾಂಗ್ರೆಸ್ ಸೇರುವ ವದಂತಿ ನಂತರ ಹಬ್ಬಿತ್ತು.
ಆದರೆ, ಬಚ್ಚೇಗೌಡ, ಯೋಗೇಶ್ವರ್ ಸೇರ್ಪಡೆಗೆ ಡಿಕೆ ಶಿವಕುಮಾರ್ ಬಣ ನಿರೀಕ್ಷೆಯಂತೆ ಪ್ರತಿರೋಧ ಒಡ್ಡಿದೆ. ಎಸ್ ಎಂ ಕೃಷ್ಣ ಅವರು ಕೂಡಾ ವಲಸೆ ಹಕ್ಕಿಗಳಿಗೆ ಸದ್ಯಕ್ಕೆ ಮಣೆ ಹಾಕುವುದು ಬೇಡ ಎಂಬಂತೆ ಸೂಚಿಸಿದ್ದಾರೆ.
ಆದರೆ, ಕೆಜೆಪಿ ಆರಂಭೋತ್ಸವದ ನಂತರ ಬಿಜೆಪಿ ತೊರೆಯಲು ಸಜ್ಜಾದ ಶಾಸಕರ ದೊಡ್ಡ ಪಟ್ಟಿಯೇ ಕೆಪಿಸಿಸಿ ಕೈಲಿದೆ ಎನ್ನಲಾಗಿದೆ. ತುಮಕೂರು ಗ್ರಾಮಾಂತರದ ಸುರೇಶ್ಗೌಡ, ಯಲಹಂಕದ ಎಸ್. ಆರ್. ವಿಶ್ವನಾಥ್, ಜೆಡಿಎಸ್ನ ಸಿ.ಎಸ್. ಪುಟ್ಟೇಗೌಡ (ಶ್ರವಣಬೆಳಗೊಳ), ಮಾಜಿ ಸಚಿವ ಎಂ. ಶಿವಣ್ಣ, ಮುನಿಸಿಕೊಂಡು ಜೆಡಿಎಸ್ನಿಂದ ಹೊರಬಿದ್ದಿರುವ ಅಬ್ದುಲ್ ಅಜೀಂ ಹಾಗೂ ಪಕ್ಷೇತರರಾದ ಪಿ.ಎಂ. ನರೇಂದ್ರ ಸ್ವಾಮಿ, ಡಿ. ಸುಧಾಕರ್, ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ ಹಾಗೂ ಶಿವರಾಜ್ ತಂಗಡಗಿ ಅವರ ಹೆಸರಿದೆ.
ಈ ಪೈಕಿ ಪಕ್ಷೇತರರು ಈಗಾಗಲೇ ಎಸ್ ಎಂ ಕೃಷ್ಣ ಅವರ ಜೊತೆ ಒಂದು ರೌಂಡ್ ಟೀ ಕುಡಿದು ಮಾತುಕತೆ ಮುಗಿಸಿದ್ದಾರೆ. ವರ್ತೂರು ಪ್ರಕಾಶ್ ಬಿಟ್ಟು ಉಳಿದವರು ಕಾಂಗ್ರೆಸ್ ಪರ ವಾಲುವುದು ಬಹುತೇಕ ಖಚಿತವಾಗಿದೆ.
ಉಳಿದಂತೆ, ಯಡಿಯೂರಪ್ಪ ಅವರ ಸಂಬಂಧಿ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ ಬಿದರಿ, ಕಳೆದ ಬಾರಿ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸೋಲು ಕಂಡ ಜೆಡಿಎಸ್ ಅಭ್ಯರ್ಥಿ ಸುರಾನಾ ಕಾಲೇಜ್ ಪ್ರೊ ಕೆಇ ರಾಧಾಕೃಷ್ಣ ಅವರ ಮೇಲೂ ಕಾಂಗ್ರೆಸ್ ಕಣ್ಣು ಬಿದ್ದಿದೆ.
ಜೆಡಿಎಸ್ನ ಸಿ.ಎಸ್. ಪುಟ್ಟೇಗೌಡ ಅವರಿಗೆ ಸಿದ್ದ ರಾಮಯ್ಯ ಅವರ ಕೃಪಾಕಟಾಕ್ಷ ಸಿಕ್ಕಿದೆ. ಗೂಳಿ ಹಟ್ಟಿ ಶೇಖರ್ ಹಾಗೂ ಶಿವರಾಜ್ ತಂಗಡಗಿಗೆ ಟಿಕೆಟ್ ಸಿಗುವುದು ಕಷ್ಟ. ಸುಧಾಕರ್ ಟಿಕೆ ಸಿಗದಂತೆ ಮಾಡಲು ಎಚ್ ಕೆ ರಂಗನಾಥ್ ಅವರ ಪುತ್ರ ಮಂಜುನಾಥ್ ಪೈಪೋಟಿ ನೀಡುತ್ತಿದ್ದರೂ ಪಕ್ಷತರರರಿಗೆ ಕೃಷ್ಣ ಅವರ ಅಭಯವಿದೆ.
ಒಟ್ಟಾರೆ ಕನಿಷ್ಠವೆಂದರೂ ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರು ಸೇರಿ ಸುಮಾರು 15 ಜನ ಶಾಸಕರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವತ್ತ ಕೈ ಪಡೆ ಹೆಜ್ಜೆ ಹಾಕಿದೆ. ಆದರೆ, ಎಷ್ಟರಮಟ್ಟಿಗೆ ಸಾಧ್ಯವಾಗುತ್ತದೆ ಕಾದು ನೋಡೋಣ...












Click it and Unblock the Notifications