ಎಫ್ ಡಿಐ: ಯುಪಿಎಗೆ ಸಿಕ್ತು ಕರುಣಾ ಬೆಂಬಲ

ಜೀವ ವಿಮೆ ಪಿಂಚಣಿ, ಷೇರು ಮಾರುಕಟ್ಟೆಯಲ್ಲಿ ಎಫ್ ಡಿಐ ಕರಿನೆರಳು ಬೀಳುವ ಸೂಚನೆ ಸಿಕ್ಕಿದ್ದೇ ತಡ ವಿಪಕ್ಷಗಳು ಯುಪಿಎ ವಿರುದ್ಧ ಕೆಂಡಕಾರಿದ್ದವು. ಎನ್ ಡಿಎ ಮಿತ್ರ ಪಕ್ಷಗಳು, ಎಡಪಕ್ಷಗಳ ಕಿರಿಕಿರಿಯಿಂದ ಯುಪಿಎ ಹಿನ್ನೆಡೆ ಅನುಭವಿಸಿತ್ತು. ಡಿಎಂಕೆ ಈ ಬಗ್ಗೆ ತನ್ನ ನಿರ್ಧಾರ ಪ್ರಕಟಿಸಿರಲಿಲ್ಲ. ಕರುಣಾನಿಧಿ 'ಸಸ್ಪೆನ್ಸ್' ಎಂದು ಸಿನೀಮಿಯವಾಗಿ ಪ್ರತಿಕ್ರಿಯಿಸಿದ್ದರು.
ಆದರೆ, ಮಂಗಳವಾರ(ನ.27) ಡಿಎಂಕೆ ಜೊತೆ ಕಾಂಗ್ರೆಸ್ ನಾಯಕರು ನಡೆಸಿದ ಮಾತುಕತೆ ಫಲಪ್ರದವಾಗಿದೆ. ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಪ್ರದಹಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಡಿಎಂಕೆ ನಾಯಕ ಟಿಆರ್ ಬಾಲು ಸೇರಿದಂತೆ ಯುಪಿಎ ಮಿತ್ರಪಕ್ಷದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು
ಡಿಎಂಕೆ ಬೆಂಬಲ ಸಿಗುತ್ತಿದ್ದಂತೆ ಹುರುಪು ಹೆಚ್ಚಿಸಿಕೊಂಡ ಯುಪಿಎ, ಸಂಸತ್ತಿನಲ್ಲಿ ಮತದಾನ ನಡೆಯಲಿ ಎಂದು ಸ್ಪೀಕರ್ ಮೀರಾ ಕುಮಾರ್ ಅವರಲ್ಲಿ ಕೇಳಿಕೊಂಡಿದೆ. ಸಚಿವ ಕಮಲ್ ನಾಥ್ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸ್ಪೀಕರ್ ಮೀರಾ ಕುಮಾರ್ ಅವರು ಅಂತಿಮ ತೀರ್ಪು ಕೈಗೊಳ್ಳಲಿದ್ದಾರೆ
ವಿಪಕ್ಷಗಳಿಗೆ ಶಾಕ್: ಇದ್ದಕ್ಕಿದ್ದಂತೆ ಆನೆಬಲ ಸಿಕ್ಕಿದ್ದಂತೆ ವರ್ತಿಸಿದ ಯುಪಿಎ ನಾಯಕರು ಮತದಾನಕ್ಕೆ ಮುಂದಾಗಿದ್ದನ್ನು ಕಂಡು ವಿಪಕ್ಷ ಪೆಚ್ಚಾದವು. ಈ ವರೆಗೂ ಮತದಾನ ನಡೆಯಲಿ ಎಂದು ಕೇಳುತ್ತಾ ಬಂದಿದ್ದ ಬಿಜೆಪಿ, ಎಡಪಕ್ಷಗಳು ಯುಪಿಎ ನಡೆಗೆ ಮಂಕಾದವು.
ಎಫ್ ಡಿಐ ವಿಷಯದಲ್ಲಿ ಯುಪಿಎಗೆ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷಗಳು ಬೆಂಬಲ ನೀಡದೆ ಸಾತಾಯಿಸುತ್ತಿವೆ. ಈ ಎರಡು ಪಕ್ಷಗಳನ್ನು ಸಮಾಧಾನ ಪಡಿಸಿದರೆ ಯುಪಿಎ ಮತ್ತೊಮ್ಮೆ ಸಂಸತ್ತಿನಲ್ಲಿ ಜಯಭೇರಿ ಬಾರಿಸಲಿದೆ.
ಅಕಾಲಿ ದಳ ಬಿಟ್ಟು ಎನ್ ಡಿಎ ಮೈತ್ರಿಕೂಟ ಸಂಪೂರ್ಣವಾಗಿ ಎಫ್ ಡಿಐಗೆ ವಿರೋಧ ವ್ಯಕ್ತಪಡಿಸಿದೆ. ಟಿಎಂಸಿ, ಎಐಎಡಿಎಂಕೆ ಹಾಗೂ ಬಿಜೆಡಿ ಪಕ್ಷಗಳು ಬಂದ್ ನಡೆಸಿ ಭಾರಿ ಪ್ರತಿರೋಧ ಒಡ್ಡಿದೆ.
ಪಶ್ಚಿಮ ಬಂಗಾಳದಂತೆ ತಮಿಳುನಾಡಿನ ಸಣ್ಣ ಮತ್ತು ಮಧ್ಯಮ ಗಾತ್ರ ಉದ್ದಿಮೆ ನಡೆಸುತ್ತಿರುವ ವ್ಯಾಪಾರಿಗಳು ಎಫ್ ಡಿಐಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕರುಣಾನಿಧಿ ಅವರು ಯುಪಿಎಗೆ ಬೆಂಬಲ ನೀಡಲು ಹಿಂದು ಮುಂದು ನೀಡಿದ್ದರು. ಆದರೆ, ಡಿಎಂಕೆ ಮುಖಂಡರ ಮನ ಓಲೈಕೆ ಮಾಡುವಲ್ಲಿ ಯುಪಿಎ ಯಶಸ್ವಿಯಾಗಿದೆ.
ತಾಂತ್ರಿಕವಾಗಿ ನೋಡಿದರೆ, ಎಫ್ ಡಿಐ ಸರ್ಕಾರದ ಕಾರ್ಯಕಾರಿ ನಿರ್ಣಯವಾಗಿದ್ದು, ಆರ್ಥಿಕ ಸುಧಾರಣೆಗಾಗಿ ಅನಿವಾರ್ಯ ಎಂದು ಸರ್ಕಾರ ವಾದಿಸಬಹುದಾಗಿದೆ. ಇದಕ್ಕೆ ಸಂಸತ್ತಿನ ಅನುಮತಿ, ಒಪ್ಪಿಗೆ ಅಗತ್ಯವಿರುವುದಿಲ್ಲ.












Click it and Unblock the Notifications