ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ದಾಳಿಕೋರನಿಗೆ ಗಲ್ಲು: ಅಜ್ಮಲ್ ಕಸಬ್ ಸತ್ತ

By Srinath
|
Google Oneindia Kannada News

india-death-to-let-terrorist-ajmal-kasab-mumbai
ಮುಂಬೈ, ನ. 21: ಅತ್ಯಾಶ್ಚರ್ಯದ ಬೆಳವಣಿಗೆಯೊಂದರಲ್ಲಿ ಮುಂಬೈ ದಾಳಿ ಕೋರ ಅಜ್ಮಲ್ ಕಸಬ್ ನನ್ನು ಇಂದು ಬೆಳಗ್ಗೆ 7.30ಕ್ಕೆ ಗಲ್ಲಿಗೆ ಹಾಕಲಾಗಿದೆ. ವೈದ್ಯರು ಕಸಬ್ ಸತ್ತಿರುವುದನ್ನು ದೃಢಪಡಿಸಿದ್ದಾರೆ.

ಅತ್ಯಂತ ಗೌಪ್ಯ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಮೊಹಮದ್ ಅಜ್ಮಲ್ ಅಮೀರ್ ಕಸಬ್ ನನ್ನು ಪೂನಾದ ಅತಿ ಭದ್ರತೆಯ ಯರವಾಡ ಜೈಲಿನಲ್ಲಿ ಬುಧವಾರ ಬೆಳಗ್ಗೆ ಗಲ್ಲಿಗೆ ಹಾಕಲಾಗಿದೆ. ಮುಂಬೈನ ಆರ್ಥರ್ ಜೈಲಿನಲ್ಲಿದ್ದ ಕಸಬ್ ನನ್ನು ಭಾನುವಾರ ರಾತ್ರಿ ಪುಣೆ ಜೈಲಿಗೆ ಸಾಗಿಸಲಾಗಿತ್ತು.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕಸಬ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಅಕ್ಟೋಬರ್ 6ರಂದು ತಿರಸ್ಕರಿಸಿದ್ದರು. ಅದಾಗುತ್ತಿದ್ದಂತೆ ಹೆಚ್ಚು ಕಾಲಾವಕಾಶ ನೀಡದೆ ಕಸಬ್ ನನ್ನು ಗಲ್ಲಿಗೆ ಹಾಕಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಕಸಬ್ ನನ್ನು ಗಲ್ಲಿಗೆ ಹಾಕುವುದನ್ನು ಗೌಪ್ಯವಾಗಿಡಲಾಗಿತ್ತು.

ಕಸಬ್ ಸತ್ತಿರುವುದನ್ನು ದೃಢಪಡಿಸಿದ ಗೃಹ ಸಚಿವರು: ಮಹಾರಾಷ್ಟ್ರದ ಗೃಹ ಸಚಿವ ಆರ್ ಆರ್ ಪಾಟೀಲ್ ಅವರು ಕಸಬ್ ನನ್ನು ಕಾನೂನಿನ ಪ್ರಕಾರ ಯರವಾಡ ಜೈಲಿನಲ್ಲಿ ಬುಧವಾರ ಬೆಳಗ್ಗೆ (ನ.21) ಗಲ್ಲಿಗೇರಿಸಿರುವುದನ್ನು ದೃಢಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶೀಂಧೆ ಸಹ ಕಸಬ್ ಗೆ ಗಲ್ಲು ವಿಧಿಸಿರುವುದನ್ನು ಸುದ್ದಿಗೋಷ್ಠಿಯಲ್ಲಿ ಇದೀಗ ದೃಢಪಡಿಸಿದ್ದಾರೆ.

ಕಸಬ್ ನನ್ನು ಗಲ್ಲಿಗೆ ಹಾಕಿರುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಜನ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಉಗ್ರ ಕಸಬ್ ಗೆ ಕೊನೆಗೂ ನೇಣು ಬಿಗಿರುವುದು ಅತ್ಯಂತ ಸಂತಸ ತಂದಿದೆ ಎಂದು ಜನ ಹರ್ಷ ವ್ಯಕ್ತಪಡಿಸಿದ್ದಾರೆ.

2008ರ ನವೆಂಬರ್‌ 26ರಂದು ನಡೆದ ಮುಂಬೈ ದಾಳಿ ಹಾಗೂ ತದನಂತರದ ಬೆಳವಣಿಗೆಗಳ ವಿಹಂಗಮ ನೋಟ ಇಲ್ಲಿದೆ.
ನ. 26, 2008: ಕಸಬ್‌ ಮತ್ತು 9 ಉಗ್ರರಿಂದ ಮುಂಬೈ ಮೇಲೆ ದಾಳಿ.
ನ. 27, 2008: ಮಧ್ಯಾಹ್ನ 1.30ರ ಸುಮಾರಿಗೆ ಉಗ್ರ ಕಸಬ್‌ನ ಬಂಧನ ಹಾಗೂ ನಾಯರ್‌ ಆಸ್ಪತ್ರೆಗೆ ದಾಖಲು.
ನ. 29, 2008: ಉಗ್ರರ ವಶದಲ್ಲಿದ್ದ ಎಲ್ಲ ಕಟ್ಟಡಗಳ ಮರುವಶ, 9 ಉಗ್ರರ ಹತ್ಯೆ.
ನ. 30, 2008: ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಉಗ್ರ ಕಸಬ್‌.
ಡಿ. 27-28, 2008: ಗುರುತು ಪತ್ತೆಗಾಗಿ ಪರೇಡ್‌ ನಡೆಸಿದ ಪೊಲೀಸರು.
ಜ. 13, 2009: ಮುಂಬೈ ದಾಳಿಯ ವಿಚಾರಣೆಯ ನ್ಯಾಯಾಧೀಶರಾಗಿ ಎಂಎಲ್‌ ತಹಲ್ಯಾನಿ ನೇಮಕ.
ಜ. 16, 2009: ಕಸಬ್‌ನ ವಿಚಾರಣೆಗಾಗಿ ಆರ್ಥರ್‌ ರೋಡ್‌ ಜೈಲಿನ ಆಯ್ಕೆ.
ಫೆ. 5, 2009: ಕುಬೇರ್‌ ಹಡಗಿನಲ್ಲಿ ಪತ್ತೆಯಾದ ವಸ್ತುಗಳಿಗೂ ಕಸಬ್‌ನ ಡಿಎನ್‌ಎ ಮಾದರಿಗೂ ಹೋಲಿಕೆ.
ಫೆ. 20/21, 2009: ಮ್ಯಾಜಿಸ್ಟ್ರೇಟ್‌ ಮುಂದೆ ತಪ್ಪೊಪ್ಪಿಕೊಂಡ ಕಸಬ್‌.
ಫೆ. 22, 2009: ವಿಶೇಷ ಸರಕಾರಿ ಅಭಿಯೋಜಕರಾಗಿ ಉಜ್ವಲ್‌ ನಿಕ್ಕಂ ನೇಮಕ.
ಫೆ. 25, 2009: ಕಸಬ್‌ ಹಾಗೂ ಇತರೆ ಇಬ್ಬರ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ.
ಎ. 1, 2009: ಕಸಬ್‌ ಪರ ವಕೀಲರಾಗಿ ಅಂಜಲಿ ವಾಗ್ಮೋರೆ ನೇಮಕ.
ಎ. 15, 2009: ಕಸಬ್‌ ಪರ ವಾದದಿಂದ ಹಿಂದೆ ಸರಿದ ಅಂಜಲಿ.
ಎ. 16, 2009: ಕಸಬ್‌ ಪರ ವಕೀಲರಾಗಿ ಅಬ್ಟಾಸ್‌ ಖಾಜ್ಮಿ ನೇಮಕ.
ಎ. 17, 2009: ಕಸಬ್‌ನ ತಪ್ಪೊಪ್ಪಿಗೆ ಹೇಳಿಕೆಯನ್ನು ನ್ಯಾಯಾಧೀಶರ ಮುಂದಿಟ್ಟ ಪೊಲೀಸರು. ಕಸಬ್‌ನಿಂದ ನಿರಾಕರಣೆ.
ಎ. 20, 2009: ಕಸಬ್‌ ವಿರುದ್ಧ 312 ಎಣಿಕೆಗಳಲ್ಲಿ ಅಪರಾಧ ಸಾಬೀತುಪಡಿಸಿದ ಸರಕಾರಿ ಅಭಿಯೋಜಕರು.
ಎ. 29, 2009: ಕಸಬ್‌ ವಯಸ್ಕ, ತಜ್ಞರ ಅಭಿಪ್ರಾಯ.
ಮೇ 6, 2009: ಕಸಬ್‌ ವಿರುದ್ಧ ದೋಷಾರೋಪಗಳನ್ನು ಹೊರಿಸಿದ ಪೊಲೀಸರು, ಆದರೆ ಆರೋಪಗಳನ್ನು ನಿರಾಕರಿಸಿದ ಕಸಬ್‌.
ಮೇ 8, 2009: ಕಸಬ್‌ನನ್ನು ಗುರುತಿಸಿದ ಮೊದಲ ಪ್ರತ್ಯಕ್ಷದರ್ಶಿ.
ಜೂ. 23, 2009: ಹಫೀಜ್‌ ಸಯೀದ್‌, ಝಾಕಿ ಉರ್‌ ರೆಹಮಾನ್‌ ಲಖ್ವಿ ಸೇರಿದಂತೆ 22 ಮಂದಿ ಉಗ್ರರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿ.
ನ. 30, 2009: ಹಿಂದೆ ಸರಿದ ಕಸಬ್‌ ಪರ ವಕೀಲ ಅಬ್ಟಾಸ್‌ ಖಾಜ್ಮಿ.
ಡಿ. 1, 2009 : ಖಾಜ್ಮಿ ಸ್ಥಾನದಲ್ಲಿ ಕೆ.ಪಿ. ಪವಾರ್‌ ನೇಮಕ.
ಡಿ. 16, 2009: 26/11 ದಾಳಿ ಪ್ರಕರಣದ ವಿಚಾರಣೆ ಪೂರ್ಣ.
ಡಿ. 18, 2009: ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ ಕಸಬ್‌.
ಮಾ. 31, 2010: ಪ್ರತಿವಾದ ಪೂರ್ಣ, ತೀರ್ಪನ್ನು 2010ರ ಮೇ 3ಕ್ಕೆ ಕಾದಿರಿಸಿದ ವಿಶೇಷ ನ್ಯಾಯಾಧೀಶ ಎಂ.ಎಲ್‌. ತಹಲ್ಯಾನಿ.
ಮೇ 3, 2010: ಕಸಬ್‌ ವಿರುದ್ಧ ಆರೋಪ ಸಾಬೀತು. ಸಬಾವುದ್ದೀನ್‌ ಮತ್ತು ಫ‌ಹೀಮ್‌ ಅನ್ಸಾರಿ ಖುಲಾಸೆ.
ಮೇ 6, 2010: ಕಸಬ್‌ಗ ಮರಣದಂಡನೆ ವಿಧಿಸಿ, ತೀರ್ಪಿತ್ತ ನ್ಯಾಯಾಲಯ.
ಫೆ. 21, 2011: ಕಸಬ್‌ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್‌.
ಮಾರ್ಚ್‌, 2011: ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ಕಸಬ್‌ನಿಂದ ಸುಪ್ರೀಂ ಕೋರ್ಟ್‌ಗೆ ಪತ್ರ.
ಅ. 10, 2011: ಪಾಕಿಸ್ತಾನಿ ಉಗ್ರ ಕಸಬ್‌ನ ಗಲ್ಲು ಶಿಕ್ಷೆಗೆ ಸುಪ್ರೀಂ ಕೋರ್ಟ್‌ನಿಂದ ತಡೆ.
ಅ. 10, 2011: ರೋಬೋಟ್‌ ಮಾದರಿಯಲ್ಲಿ ನನ್ನ ಬ್ರೈನ್‌ವಾಶ್‌ ಮಾಡಲಾಗಿದೆ- ಕಸಬ್‌ನಿಂದ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ, ಮರಣದಂಡನೆ ಶಿಕ್ಷೆಯಿಂದ ವಿನಾಯಿತಿ ಕೋರಿಕೆ.
ಅ. 18, 2011: ಬಾಂಬೆ ಹೈಕೋರ್ಟ್‌ನಿಂದ ನಿರಪರಾಧಿಗಳೆಂದು ಸಾಬೀತಾಗಿದ್ದ ಈರ್ವರು ಭಾರತೀಯ ಉಗ್ರರ ವಿರುದ್ಧ ಮಹಾರಾಷ್ಟ್ರ ಸರಕಾರದ ಮೇಲ್ಮನವಿಯನ್ನು ವಿಚಾರಣೆಗೆ ಸ್ವೀಕರಿಸಿದ ಸುಪ್ರೀಂ ಕೋರ್ಟ್‌. ಇಬ್ಬರು ಭಾರತೀಯ ಆರೋಪಿಗಳಿಗೆ ದೋಷಮುಕ್ತಿ.
ಜ. 31, 2012: ಪ್ರಕರಣದ ವಿಚಾರಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲಾಗಿಲ್ಲ - ಸುಪ್ರೀಂಗೆ ಕಸಬ್‌ ದೂರು.
ಫೆ. 23, 2012: ಮುಂಬೈ ದಾಳಿ ಕುರಿತಾಗಿನ ಎಲ್ಲ ಸಾಕ್ಷ್ಯಾಧಾರಗಳನ್ನು ವೀಕ್ಷಿಸಿದ ಸುಪ್ರೀಂ ಕೋರ್ಟ್‌.
ಎ. 25, 2012: ಎರಡೂವರೆ ತಿಂಗಳ ವಿಚಾರಣೆಯ ಬಳಿಕ ತೀರ್ಪನ್ನು ಕಾದಿರಿಸಿದ ಸುಪ್ರೀಂ ಕೋರ್ಟ್‌..
ಆ. 29, 2012: ಉಗ್ರ ಕಸಬ್‌ಗ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌...

English summary
Laskar-e-Taiba terrorist Ajmal Kasab was hanged at Yerwada Jail in Pune at 7.30 am on Wednesday. Union Home Minister Sushilkumar Shinde and Maharashtra Home Minister R R Patil confirmed the news on Tuesday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X