ಮೆಟ್ರೋಗಾಗಿ 5 ಸಾವಿರ ಕೋಟಿ ರು ಬೇಡಿಕೆ
ಬೆಂಗಳೂರು, ನ.21: ದಕ್ಷಿಣ ಭಾರತದ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದ ಕೇಂದ್ರ ವಿತ್ತ ಸಚಿವ ಚಿದಂಬರಂ ಮುಂದೆ ಕರ್ನಾಟಕ ಸರ್ಕಾರ ಹೊಸ ಸಾಲಕ್ಕಾಗಿ ಬೇಡಿಕೆ ಇಟ್ಟಿದೆ.
ಬೆಂಗಳೂರಿನ ಪ್ರಮುಖ ಉದ್ಯಮಿಗಳು ಹಾಗೂ ಸರ್ಕಾರಿ ಕಾರ್ಯದರ್ಶಿಗಳ ಜೊತೆ ಕೇಂದ್ರ ಆರ್ಥಿಕ ಸಚಿವ ಪಿ ಚಿದಂಬರಂ ಅವರು ಚರ್ಚೆ ನಡೆಸಿದ ಸಂದರ್ಭದಲ್ಲಿ ಮೆಟ್ರೋ ರೈಲಿನ ಮುಂದಿನ ಹಂತಕ್ಕಾಗಿ 5,000 ಕೋಟಿ ರು ಅಗತ್ಯವಿದೆ ಎಂಬ ವಿಷಯ ಹೊರಬಿತ್ತು.
ಕೇಂದ್ರ ಸರ್ಕಾರ ಮೆಟ್ರೋ ಯೋಜನೆಯಲ್ಲಿ ಶೇ 25 ರಷ್ಟು ಪಾಲು ಹೊಂದಿದೆ. ಇನ್ಫೋಸಿಸ್ ಕಾರ್ಯಕಾರಿ ಉಪಾಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಬಯೋಕಾನ್ ಚೇರ್ಮನ್ ಕಿರಣ್ ಮಜುಂದಾರ್ ಶಾ, ಮಣಿಪಾಲ್ ಗ್ಲೋಬಲ್ ಎಜುಕೇಷನ್ ನ ಚೇರ್ಮನ್ ಟಿವಿ ಮೋಹನ್ ದಾಸ್ ಪೈ ಸೇರಿದಂತೆ ಹಲವು ಉದ್ಯಮಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರಿನ ಮೂಲ ಸೌಕರ್ಯ, ಸಾರಿಗೆ, ಉದ್ಯಮದ ಭವಿಷ್ಯದ ಬಗ್ಗೆ ಚುಟುಕಾಗಿ ಚರ್ಚಿಸಲಾಯಿತು. ಮೆಟ್ರೋ ರೈಲು ಎರಡನೇ ಹಂತ ಪೂರ್ಣಗೊಂಡರೆ ಉದ್ಯಮ ಕ್ಷೇತ್ರಕ್ಕೂ ಹೆಚ್ಚಿನ ಬಲ ಬರುತ್ತದೆ. ಬಂಡವಾಳ ಹೂಡಿಕೆದಾರರು ಮೂಲ ಸೌಕರ್ಯ ಇದ್ದರೆ ಮಾತ್ರ ಈ ಕಡೆ ನೋಡುತ್ತಾರೆ ಎಂದು ಟಿವಿ ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಮಾತನಾಡಿ ಕರ್ನಾಟಕ ಸರ್ಕಾರ ಮೆಟ್ರೋ ಯೋಜನೆಯ ಮುಂದಿನ ಹಂತಕ್ಕೆ 8000 ಕೋಟಿ ರು ನೀಡುತ್ತಿದೆ. ಉಳಿದಂತೆ ಆದಷ್ಟು ಬೇಗ ಕೇಂದ್ರದ ಅನುದಾನದ ಮೊತ್ತ ಸಿಕ್ಕರೆ ಕಾಮಗಾರಿ ಮುಂದುವರೆಯಲಿದೆ ಎಂದರು.
76 ಕಿ.ಮೀ ವ್ಯಾಪ್ತಿಯ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಎರಡನೇ ಹಂತದ ಯೋಜನಾ ವೆಚ್ಚ 27,000 ಕೋಟಿ ರು ಎಂದು ಅಂದಾಜಿಸಲಾಗಿದೆ. ಮೊದಲ ಹಂತಕ್ಕೆ ಸುಮಾರು 11,000 ಕೋಟಿ ರು ಖರ್ಚಾಗಿದೆ. ಆದರೂ ಎಂಜಿ ರಸ್ತೆ-ಭೈಯಪ್ಪನಹಳ್ಳಿ ಮಾರ್ಗ ಬಿಟ್ಟರೆ ಉಳಿದ ಮಾರ್ಗಗಳು ಇನ್ನೂ ಕಾಮಗಾರಿ ಹಂತದಲ್ಲಿದೆ.
ಮೆಟ್ರೋ ಯೋಜನೆಗೆ ಜಪಾನಿನ ಅಂತಾರಾಷ್ಟ್ರೀಯ ಸಹಕಾರಿ ಏಜೆನ್ಸಿ ಹಾಗೂ ನಗರಾಅಭಿವೃದ್ಧಿ ನಿಗಮ ಕೂಡಾ ಒಂದಷ್ಟು ಹಣ ತೊಡಗಿಸಿದೆ.
ಎರಡನೇ ಹಂತಕ್ಕಾಗಿ ಬಿಎಂಆರ್ ಸಿಎಲ್ ಸಂಸ್ಥೆ ಗೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನಿಂದ ಸುಮಾರು 250 ಮಿಲಿಯನ್ ಡಾಲರ್ (1.250 ಡಾಲರ್ ಅನುದಾನ ) ಸಿಕ್ಕಿದೆ
2021ರ ಹೊತ್ತಿಗೆ ಮೆಟ್ರೋದಲ್ಲಿ ಸುಮಾರು 19 ಲಕ್ಷ ಜನ ಪ್ರಯಣಿಸುವ ನಿರೀಕ್ಷೆಯಿದೆ. ದೆಹಲಿ ಮೆಟ್ರೋ ಈಗಾಗಲೇ 20 ಲಕ್ಷ ಜನರನ್ನು ಪ್ರತಿದಿನ ಕರೆದೊಯ್ಯುತ್ತಿದೆ. ಗುರ್ ಗಾಂವ್ ಹಾಗೂ ನೋಯ್ಡಾ ಕಡೆಗೂ ಮೆಟ್ರೋ ಹಬ್ಬಿದೆ.