ಹೋಂಸ್ಟೇ ದಾಳಿ: ಪತ್ರಕರ್ತ ನವೀನ್ ತನಿಖೆಗೆ ತಡೆ
ಪಡೀಲ್ನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ದಾಳಿ ಸಂಬಂಧ ವರದಿಗಾರ ನವೀನ್ ಸೂರಿಂಜೆ ವಿರುದ್ಧ ಸದ್ಯಕ್ಕೆ ಯಾವುದೇ ಕಾನೂನು ಕ್ರಮ ಜರುಗಿಸದಂತೆ ಹೈಕೋರ್ಟ್ ನಿನ್ನೆ ಆದೇಶಿಸಿದೆ. ಹೈಕೋರ್ಟಿನ ಈ ತೀರ್ಪಿನ ಹಿನ್ನೆಲೆಯಲ್ಲಿ ಮಂಗಳವಾರ ನವೀನ್ ಬಿಡುಗಡೆಯ ಬಗ್ಗೆ ಜಿಲ್ಲಾ ನ್ಯಾಯಾಲಕ್ಕೆ ಜಾಮೀನು ಅರ್ಜಿ ಸಲ್ಲಿಸಲಾಗುವುದು ಎಂದು ನ್ಯಾಯವಾದಿ ಸತೀಶ್ ಬಂಟ್ವಾಳ್ ತಿಳಿಸಿದ್ದಾರೆ. ನವೀನ್ ಸೂರಿಂಜೆ ಇಂದು ಮಂಗಳವಾರ ಬಿಡುಗಡೆಯಾಗುವ ಸಾಧ್ಯತೆಯಿದೆ.
ತಮ್ಮ ವಿರುದ್ಧ ಪ್ರಕರಣ ರದ್ದು ಕೋರಿ ಪತ್ರಕರ್ತ ನವೀನ್ ಸೂರಂಜೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ ಎಚ್ಎನ್ ನಾಗಮೋಹನ ದಾಸ್ ಅವರು ಈ ಆದೇಶ ನೀಡಿ ವಿಚಾರಣೆ ಮುಂದೂಡಿದರು.
'ನವೀನ್ ಸೂರಿಂಜೆ ಹೋಂ ಸ್ಟೇ ದಾಳಿ ಪ್ರಕರಣದಲ್ಲಿ ಭಾಗಿಯಾರುವ ಅಕ್ರಮ ಕೂಟದ ಸದಸ್ಯನಲ್ಲ. ಹಿಂದೂ ಜಾಗರಣ ವೇದಿಕೆಗೂ ಆತನಿಗೂ ಸಂಬಂಧವೇ ಇಲ್ಲ. ನವೀನ್ ಓರ್ವ ಪತ್ರಕರ್ತನಾಗಿ ಅಲ್ಲಿಗೆ ಮಾಹಿತಿ ಸಂಗ್ರಹಿಸಲು ಹೋಗಿದ್ದ. ಆತ ಸಂಗ್ರಹಿಸಿದ ಮಾಹಿತಿಯನ್ನು ಸಾಕ್ಷವಾಗಿ ಪರಿಗಣಿಸಬೇಕೆ ಹೊರತು ಆತನನ್ನೇ ಆರೋಪಿಯಾಗಿ ಪರಿಣಿಗಸುವುದು ಸರಿಯಲ್ಲ' ಎಂದು ಹೈಕೋರ್ಟ್ನ ಹಿರಿಯ ವಕೀಲ ಎಸ್. ಬಾಲನ್ ಮಂಡಿಸಿದ ವಾದವನ್ನು ನ್ಯಾಯಾಧೀಶರು ಗಣನೆಗೆ ತೆಗೆದುಕೊಂಡರು.
ಆದ್ದರಿಂದ ನವೀನ್ ಸೂರಿಂಜೆಯ ಮೇಲಿನ ಆರೋಪಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸುವಂತೆ ಆದೇಶಿಸಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ. ತನ್ನನ್ನು ಪಡೀಲ್ ಹೋಂ ಸ್ಟೇ ಪ್ರಕರಣದ ಆರೋಪಿಯಾಗಿ ಪರಿಗಣಿಸಬಾರದು ಎಂದು ಕೋರಿ ನವೀನ್ ಸೂರಿಂಜೆ ಅ.17ರಂದು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಹೋಂ ಸ್ಟೇ ದಾಳಿಯ ವರದಿ ಮಾಡಲು ಹೋಗಿದ್ದ ಪತ್ರಕರ್ತರನ್ನೇ ಆರೋಪಿಗಳನ್ನು ಗುರುತಿಸಿದ ಪೊಲೀಸರು, ಸುದ್ದಿವಾಹಿನಿಯೊಂದರ ಕ್ಯಾಮರಾಮನ್ ಶರಣ್ ಮತ್ತು ವರದಿಗಾರ ನವೀನ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪ್ರಕರಣದಲ್ಲಿ 44ನೇ ಆರೋಪಿಯಾಗಿ ಪತ್ರಕರ್ತ ನವೀನ್ ಸೂರಂಜೆ ಅವರನ್ನು ಬಂಧಿಸಲು ಸಕಾರಣಗಳೇನು ತಿಳಿಸಿ ಎಂದು ಪೊಲೀಸರಿಗೆ ಕೇಳಿರುವ ಹೈಕೋರ್ಟ್ ಆತನ ವಿರುದ್ಧ ದಾಖಲಾಗಿರುವ FIR ಕೃತ್ರಿಮದಿಂದ ಕೂಡಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.