ಕೋಡಿಮಠ ಉತ್ತರಾಧಿಕಾರಿ ಚೇತನಾಗೆ ಶಿವದೀಕ್ಷೆ ಪ್ರಾಪ್ತಿ
ಹಾಸನ, ನ.23: ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಕೋಡಿಮಠ ಶ್ರೀ ಕ್ಷೇತ್ರದಲ್ಲಿ ಮಠದ ಪೀಠಾಧ್ಯಕ್ಷರಾದ ಶಿವಾನಂದ ಶಿವಯೋಗಿ ಸ್ವಾಮಿಜಿ ಇವರ ಸಾನಿಧ್ಯದ ಮೂಲಕ ಮಠದ ಉತ್ತರಾಧಿಕಾರಿ ಶ್ರೀ ಚೇತನಾ ಮರಿದೇವರು ಸೇರಿದಂತೆ 13 ವಟುಗಳಿಗೆ ಇಂದು (ಶುಕ್ರವಾರ) ಬೆಳಿಗ್ಗೆ 9.30 ಶುದ್ದ ದಶಮಿ ಶುಭ ಘಳಿಗೆಯಲ್ಲಿ ಶಿವದೀಕ್ಷೆ ಸಂಸ್ಕಾರ ನೀಡಲಾಯಿತು.
ನ. 19ರ ಸುದ್ದಿ:
'ಭವಿಷ್ಯ ಹೇಳೊಲ್ಲ; ಬದಲಿಗೆ ಭವಿಷ್ಯ ರೂಪಿಸುತ್ತೇನೆ' ಎಂದು ಹೇಳುತ್ತಾ ಭಯಂಕರ ಭವಿಷ್ಯಗಳನ್ನು ಹೇಳುವ ಕೋಡಿಮಠದ ಶ್ರೀಗಳು ತಮ್ಮ ಉತ್ತರಾಧಿಕಾರಿಯನ್ನು ನೇಮಿಸಿದ್ದಾರೆ.
ಹೌದು, ಕಾಲಜ್ಞಾನ ಭವಿಷ್ಯದಿಂದ ಹೆಸರುವಾಸಿಯಾಗಿರುವ ತಾಲೂಕಿನ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿಯಾಗಿ ಚೇತನ್ ಮರಿದೇವರು ಈಗಾಗಲೇ ನಿಯೋಜನೆಗೊಂಡಿದ್ದಾರೆ.

ಪರಂಪರಾಗತ ಸಂಪ್ರದಾಯದಂತೆ: ಕೋಡಿಮಠದ ಶ್ರೀಗಳಾದವರು ಹೇಳುವ ಕಾಲಜ್ಞಾನ ಭವಿಷ್ಯ ಸುಳ್ಳಾಗಿಲ್ಲದಿರುವುದರಿಂದ ಮಠವು ದೇಶಾದ್ಯಂತ ಸಹಸ್ರಾರು ಭಕ್ತರ ಸಮೂಹವನ್ನು ಹೊಂದಿದೆ. ಇಂತಹ ಮಠದ ಉತ್ತರಾಧಿಯಾಗಿ ಆಯ್ಕೆಯಾಗಿರುವ ಚೇತನ್ ಮರಿದೇವರಿಗೆ ನ. 23ರಂದು ಬೆಳಗಾವಿಯ ನಿಡಸೂಸಿ ಸಿದ್ದ ಸಂಸ್ಥಾನದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಶಿವದೀಕ್ಷೆ ಸಂಸ್ಕಾರ ನಡೆಯಲಿದೆ ಎಂದು ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗೀ ರಾಜೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.
ಈ ಧಾರ್ಮಿಕ ಕಾರ್ಯಕ್ರಮವನ್ನು ನ. 23ರಂದು ಶುಕ್ರವಾರ ಬೆಳಗ್ಗೆ ಪ್ರಾತಃಕಾಲ 9.30 ಗಂಟೆಗೆ ಕೆ ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಹೊನ್ನಪ್ಪ ಅವರ ಪೌರೋಹಿತ್ಯದಲ್ಲಿ ಶಿವದೀಕ್ಷೆ ಸಂಸ್ಕಾರ ನಡೆಸಲಾಗುವುದು ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.
ಇದೇ ವೇಳೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶಿವದೀಕ್ಷೆ ಸಂಸ್ಕಾರ ಪಡೆಯಲಿಚ್ಛಿಸುವ ವಟುಗಳಿಗೆ ಉಚಿತವಾಗಿ ದೀಕ್ಷೆ ಸಂಬಂಧಿತ ಪರಿಕರಗಳನ್ನು ನೀಡಲಾಗುವುದು. ಆದ್ದರಿಂದ ಶಿವದೀಕ್ಷೆ ಪಡೆಯುವ ಆಸಕ್ತ ವಟುಗಳು ಮಠದಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ನ. 22ರಂದು ರಾತ್ರಿ ಮಠದಲ್ಲಿಯೇ ತಂಗುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು.












Click it and Unblock the Notifications