ಬಿಎಸ್ ವೈಗೆ ಸೆಡ್ಡು, ಬಿಜೆಪಿಗೆ ಪ್ರಧಾನ್ ಸೂತ್ರ

ಅರುಣ್ ಜೇಟ್ಲಿ ನಂತರ ಧರ್ಮೇಂದ್ರ ಪ್ರಧಾನ್ ಶನಿವಾರ(ನ.17) ಬೆಂಗಳೂರಿಗೆ ಆಗಮಿಸಲಿದ್ದು, ಸರಣಿ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಎಸ್ ವೈ ಬೆಂಬಲಿಗರ ವಿರುದ್ಧ ಕ್ರಮ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದು, ಎಫ್ ಡಿಐ ವಿರುದ್ಧ ಹೋರಾಟ ಇದು ಸಭೆಯಲ್ಲಿ ಚರ್ಚಿತವಾಗುವ ವಿಷಯಗಳು ಎಂದು ತಿಳಿದು ಬಂದಿದೆ.
ಕೆಜೆಪಿ ಹಾಗೂ ಬಿಜೆಪಿ ಸಮರದಲ್ಲಿ ಪಕ್ಷಕ್ಕೆ ನಿಷ್ಠರಾದವರನ್ನು ಉಳಿಸಿಕೊಳ್ಳುವುದು. ಆಪರೇಷನ್ ಕಮಲ ಹಾಗೂ ಇತರೆ ಪಕ್ಷಗಳಿಂದ ಬಂದವರನ್ನು ಕೈ ಬಿಡುವ ಬಗ್ಗೆ ಆಲೋಚನೆ ನಡೆದಿದೆ.
ಕೆಜೆಪಿ ಸಮಾವೇಶಕ್ಕೆ ಹೋಗುವ ಶಾಸಕರು ಮುಂದಿನ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ಪರವಾಗಿ ಮತ ಚಲಾಯಿಸಬೇಕು. ತಪ್ಪಿದ್ದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಯೋಜಿಸಲಾಗಿದೆ.
ಧರ್ಮೇಂದ್ರ ಪ್ರಧಾನ್ ಅವರು ಶಾಸಕರು, ಸಂಸದರು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿ ಇದೆ ಆದರೆ, ಯಡಿಯೂರಪ್ಪ ಅವರ ಭೇಟಿ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಯಡಿಯೂರಪ್ಪ ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಪುರುಸೊತ್ತಿಲ್ಲ. ಗಡ್ಕರಿ ಅವರು ತಮ್ಮ ಸ್ಥಾನ ಉಳಿಸಿಕೊಂಡು, ಭ್ರಷ್ಟಾಚಾರ ಆರೋಪಗಳಿಂದ ಮುಕ್ತರಾಗಲು ಯತ್ನಿಸುತ್ತಿದ್ದಾರೆ.
ನ.21 ರಂದು ನಡೆಯಲಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ನ.22ರಿಂದ ಆರಂಭಗೊಳ್ಳವ ಚಳಿಗಾಲದ ಅಧಿವೇಶನದಲ್ಲಿ ಎಫ್ ಡಿಐ ವಿರುದ್ಧ ಮತ ಚಲಾಯಿಸಲು ಹಾಗೂ ದೇಶದಾದ್ಯಂತ ಎನ್ ಡಿಎ ಯೋಜಿಸಿರುವ ಪ್ರತಿಭಟನೆಯ ರೂಪು ರೇಷೆ ಬಗ್ಗೆ ಪ್ರಧಾನ್ ಸೂಕ್ತ ಸೂಚನೆ ನೀಡುವ ಸಾಧ್ಯತೆಯಿದೆ.
ಸಾಮೂಹಿಕ ನಾಯಕತ್ವ: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಇವರ ನೇತೃತ್ವದಲ್ಲಿ ಬಿಜೆಪಿ ಮುಂದಿನ ಚುನಾವಣೆ ಎದುರಿಸುವುದು ಖಾತ್ರಿಯಾಗಿದೆ.
ಇದಲ್ಲದೆ ಡಿಸೆಂಬರ್ ನ ಗುಜರಾತ್ ಚುನಾವಣೆ ಫಲಿತಾಂಶ ಹಾಗೂ ನರೇಂದ್ರ ಮೋದಿ ಭವಿಷ್ಯ ಪರೋಕ್ಷವಾಗಿ ಕರ್ನಾಟಕದ ರಾಜಕೀಯ ಚಿತ್ರಣ ಬದಲಿಸಲಿದೆ. ಮೋದಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾದರೆ, ಯಡಿಯೂರಪ್ಪ ಬಿಜೆಪಿಯಲ್ಲೇ ಮುಂದುವರೆಯುವ ಸಾಧ್ಯತೆ ಹೆಚ್ಚು ಎಂದು ಶಾಸಕರೊಬ್ಬರು ಹೇಳಿದ್ದಾರೆ.












Click it and Unblock the Notifications