ವಿದ್ಯುತ್ ಹಂಚಿಕೆ ಅನ್ಯಾಯ: ಶೋಭಾ ಕರಂದ್ಲಾಜೆ ಎಚ್ಚರಿಕೆ

ತಮಿಳುನಾಡಿನ ಕೂಡಂಕುಳಂ ವಿದ್ಯುತ್ ಯೋಜನೆಯಡಿ ಒಕ್ಕೂಟ ವ್ಯವಸ್ಥೆಯ ನಿಯಮದಂತೆ ರಾಜ್ಯಕ್ಕೆ ಸಿಗಬೇಕಾದ 220 ಮೆಗಾವ್ಯಾಟ್ ವಿದ್ಯುತ್ತನ್ನು ನೀಡದಿದ್ದಲ್ಲಿ ಕೈಗಾ ವಿದ್ಯುತ್ ಸ್ಥಾವರದ ಸಂಪೂರ್ಣ ವಿದ್ಯುತ್ತನ್ನು ರಾಜ್ಯಕ್ಕೆ ನೀಡುವಂತೆ ಕೇಂದ್ರವನ್ನು ಒತ್ತಾಯಿಸಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಂಗಳೂರು ಸಮೀಪದ ಬಿಜೈನಲ್ಲಿ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಆಡಳಿತ ಕಚೇರಿ ನೂತನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸವನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕಾವೇರಿ ನದಿ ನೀರಿನಲ್ಲೂ ರಾಜ್ಯಕ್ಕೆ ಅನ್ಯಾಯವಾಗಿದೆ. ಇದೀಗ ವಿದ್ಯುತ್ ವಿಷಯದಲ್ಲೂ ಅನ್ಯಾಯವಾಗುತ್ತಿದೆ. ಕೂಡಂಕುಳಂ ಯೋಜನೆಯಡಿ ಉತ್ಪಾ ದಿಸಲಾಗುವ 1300 ಮೆಗಾವ್ಯಾಟ್ ವಿದ್ಯುತ್ ಕೂಡಾ ತಮಿಳುನಾಡಿಗೆ ನೀಡಲಾಗುವುದು ಎಂದು ಕೇಂದ್ರದ ವಿದ್ಯುತ್ ಸಚಿವ ನಾರಾಯಣ ಸ್ವಾಮಿ ಅವರು ಇತ್ತೀಚೆಗೆ ಹೇಳಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಯ ನಿಯಮವನ್ನು ಹಾಳು ಮಾಡುವಂಥ ಹೇಳಿಕೆ ಎಂದು ಶೋಭಾ ಖಂಡಿಸಿದ್ದಾರೆ.
ನಿಯಮದ ಪ್ರಕಾರ ವಿದ್ಯುತ್ ಸ್ಥಾವರ ಇರುವ ರಾಜ್ಯಕ್ಕೆ ಉತ್ಪಾದನೆಯ ಶೇ 50 ರಷ್ಟು ಉತ್ಪನ್ನ ಸೇರಲಿದ್ದು, ಉಳಿದದ್ದು ಬೇಡಿಕೆ ಆಧಾರದ ಮೇಲೆ ಕೇಂದ್ರ ಸರ್ಕಾರ ಹಂಚಿಕೆ ಮಾಡಲಿದೆ. ಕೂಡಂಕುಳಂ ವಿದ್ಯುತ್ ಸ್ಥಾವರದಿಂದ 1,300ಮೆ.ವ್ಯಾ ಉತ್ಪಾದನೆಯಾಗುತ್ತಿದ್ದು, ಕರ್ನಾಟಕ 220 ಮೆ.ವ್ಯಾ ಹಾಗೂ ಕೇರಳ 133 ಮೆ.ವ್ಯಾ ವಿದ್ಯುತ್ ಬೇಡಿಕೆ ಇಟ್ಟಿದೆ.
ವಿದ್ಯುತ್ ಸ್ವಾವಲಂಬಿ: 2014ರ ವೇಳೆಗೆ ದೇಶದಲ್ಲಿ ಗುಜರಾತ್ ನಂತೆ ಕರ್ನಾಟಕ ಕೂಡಾ ವಿದ್ಯುತ್ನಲ್ಲಿ ಸ್ವಾವಲಂಬಿ ರಾಜ್ಯವಾಗಲಿದೆ ಎಂದು ಶೋಭಾ ಹೇಳಿದ್ದಾರೆ. ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ 880 ಮೆ.ವ್ಯಾ ವಿದ್ಯುತ್ (220 ಮೆ.ವ್ಯಾ X4). ದಕ್ಷಿಣ ವಲಯದ ಗ್ರಿಡ್ ಗೆ 2011ರಲ್ಲಿ ಜೋಡಣೆ ಮಾಡಲಾಗಿದೆ.
ಕೇಂದ್ರ ಸರಕಾರ ಕಾರಿಡಾರ್ ಯೋಜನೆಯನ್ನು ವಿಳಂಬಗೊಳಿಸಿದ ಪರಿಣಾಮವಾಗಿ ಕರ್ನಾಟಕ ಮಾತ್ರ ವಲ್ಲದೆ ಇತರ ರಾಜ್ಯಗಳಿಗೂ ವಿದ್ಯುತ್ ಖರೀದಿಗೆ ಸಮಸ್ಯೆ ಯಾಗಿದೆ. 2014ರ ಡಿಸೆಂಬರ್ ಅಂತ್ಯದೊಳಗೆ ಕಾರಿಡಾರ್ ಕೆಲಸ ಪೂರ್ಣವಾಗಲಿದೆ ಎಂದು ಹೇಳಿದರು.
ಜುಲೈ 2011 ರಿಂದ ಜೂನ್ 2012ಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಶೇ 24 ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಇದೇ ರಾಷ್ಟ್ರದ ಇತರೆಡೆ ಶೇ 12 ರಿಂದ 13ರಷ್ಟಿದೆ. ಅನಗತ್ಯವಾಗಿ ವಿದ್ಯುತ್ ಪೊಲಾಗುವುದನ್ನು ಕಡಿಮೆ ಮಾಡಿ, ಪರ್ಯಾಯ ಇಂಧನ ಬಳಕೆಯತ್ತ ಕೂಡಾ ಗಮನಹರಿಸಬೇಕಾದ ಅನಿವಾರ್ಯತೆ ರಾಜ್ಯಕ್ಕಿದೆ ಎಂದು ಶೋಭಾ ಇದೇ ಸಂದರ್ಭದಲ್ಲಿ ಹೇಳಿದರು.












Click it and Unblock the Notifications