ಸಚಿವ ಅರವಿಂದ ಲಿಂಬಾವಳಿ ವಿರುದ್ಧ ಲೋಕಾಯುಕ್ತ ತನಿಖೆ

ನಾಗರಾಜ್ ಎಂಬುವರು ನೀಡಿದ್ದ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾ. ಎನ್ ಕೆ ಸುಧೀಂದ್ರರಾವ್ ಅವರು ಮೇಲ್ಕಂಡ ಆರೋಪಿಗಳ ತನಿಖೆ ನಡೆಸಿ ಡಿ.15 ರೊಳಗೆ ವರದಿ ನೀಡುವಂತೆ ಆದೇಶ ನೀಡಿದರು.
ಕಾನೂನು ಬಾಹಿರವಾಗಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದ ಡಿಎಲ್ ಎಫ್ ಕಂಪನಿಗೆ ಸಚಿವ ಅರವಿಂದ ಲಿಂಬಾವಳಿ ಅವರು ಸಹಕರಿಸಿದ್ದರು ಎಂದು ಆರೋಪಿಸಲಾಗಿದೆ.
ಇದಕ್ಕೂ ಮುನ್ನ ನಾಗರಾಜ್ ಅವರ ದೂರಿನ ಮೇರೆಗೆ ಪ್ರಾಥಮಿಕ ತನಿಖೆ ನಡೆಸಿದ್ದ ಬಿಎಂಟಿಎಫ್ ಪೊಲೀಸರು, ಡಿಎಲ್ ಎಫ್ ಕಂಪನಿ ವಿರುದ್ಧ ಎಫ್ ಐಆರ್ ದಾಖಲಿಸಿತ್ತು.
ಸಚಿವ ಅರವಿಂದ ಲಿಂಬಾವಳಿ ಉನ್ನತ ಶಿಕ್ಷಣ ಸಚಿವರಾಗಿದ್ದ ವೇಳೆ ಬಿಬಿಎಂಪಿಗೆ ಪತ್ರ ಬರೆದು ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಯುಕ್ತರಿಗೆ ಕೋರಿದ್ದರು.
ಇಲ್ಲಿ ರಸ್ತೆ ಅಗಲೀಕರಣ ಕಾನೂನು ಬಾಹಿರ ಎಂದು ಬೇಗೂರು ನಿವಾಸಿ ನಾಗರಾಜ್ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದ್ದರು.
2009ರಲ್ಲಿ ಶಿಕ್ಷಣ ಸಚಿವರಾಗಿದ್ದ ಲಿಂಬಾವಳಿ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೀಡಿದ ನಿರ್ದೇಶನದಿಂದ 2015ರ ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್ ತಿರುಚಲಾಗಿದೆ.
ಅಕ್ಟೋಬರ್ 21, 2009ರಲ್ಲಿ ಈ ಪತ್ರ ಬರೆಯಲಾಗಿದೆ. ಕರ್ನಾಟಕ ನಗರ ಯೋಜನಾ ಕಾಯಿದೆ ಹಾಗೂ ಕರ್ನಾಟಕ ಮುನ್ಸಿಪಲ್ ಕಾಯಿದೆಯನ್ನು ಕೂಡಾ ಉಲ್ಲಂಘಿಸಲಾಗಿದೆ ಎಂದು ನಾಗರಾಜ್ ಆರೋಪಿಸಿದ್ದಾರೆ.
ಸದರಿ ವಿವಾದಿತ ಡಿಎಲ್ಎಫ್ ಜಾಗಕ್ಕೆ ಹೊಂದಿಕೊಂಡಂತೆ ನಾಗರಾಜ್ ಅವರು ಸಣ್ಣ ಪ್ರಮಾಣದ ಭೂಮಿಯನ್ನು ಹೊಂದಿದ್ದಾರೆ. ನಾಗರಾಜ್ ಹಾಗೂ ದಿವಂಗತ ಕಿರಣ್ ಎಂಬುವರ ಹೆಸರಿನಲ್ಲಿೀ ಜಾಗ ಇದೆ. ಆರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ನಾಗರಾಜ್ ಸಜ್ಜಾಗಿದ್ದರು ಎಂದು ತಿಳಿದು ಬಂದಿದೆ.
ಆದರೆ, ಈ ಜಾಗದ ಪವರ್ ಆಫ್ ಅಟರ್ನಿ ಹೊಂದಿದ್ದ ಪ್ರಕರಣದ 8 ನೇ ಆರೋಪಿ ಕಸ್ತೂರಿ ಎಂಬ ಮಹಿಳೆ(ಕಿರಣ್ ಸಂಬಂಧಿ) ಡಿಎಲ್ಎಫ್ ಗೆ ಅನುಕೂಲವಾಗುವಂತೆ ಜಾಗದ ಪತ್ರವನ್ನು ತಿರುಚಿದ್ದಾರೆ. ನಂತರ ಸಚಿವರು 18 ಮೀ ನಿಂದ 24 ಮೀ ಗೆ ರಸ್ತೆ ಅಗಲೀಕರಣಕ್ಕೆ ಸೂಚಿಸಿದ್ದಾರೆ ಎಂದು ನಾಗರಾಜ್ ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಮಾಜಿ ಆಯುಕ್ತ ಐಎಎಸ್ ಅಧಿಕಾರಿ ಭರತ್ ಲಾಲ್ ಮೀನಾ, ಮಾಜಿ ಬಿಬಿಎಂಪಿ ಅಧಿಕಾರಿ ಕೆಎಂ ಶಿವಕುಮಾರ್, ಬಿಬಿಎಂಪಿ ಕಾರ್ಯಕಾರಿ ಇಂಜಿನಿಯರ್ ಲೋಕಮೀಶ್ ಹಾಗೂ ಡಿಎಲ್ ಎಫ್ ಕಂಪನಿ ಚೇರ್ಮನ್ ಕೆಪಿ ಸಿಂಗ್ ಅವರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.












Click it and Unblock the Notifications