ಯಸ್! ಯಡಿಯೂರಪ್ಪ ಸದ್ಯಕ್ಕೆ ರಾಜೀನಾಮೆ ನೀಡೋಲ್ಲ

ಆದರೆ ಯಡಿಯೂರಪ್ಪನವರನ್ನು ಹೇಗಾದರೂ ಮಾಡಿ ಪಕ್ಷದಲ್ಲೇ ಉಳಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುವ ಬಿಜೆಪಿ ವರಿಷ್ಠರಿಗೆ ಇದರಿಂದ ಸಂತಸವಾಗಿದೆ. ಸದ್ಯ! ಯಡಿಯೂರಪ್ಪ ರಾಜೀನಾಮೆ ನೀಡೋದಿಲ್ಲ ಎಂದು ಉದ್ಘರಿಸಿದ್ದಾರೆ.
ಏನು ಟೆಕ್ನಿಕಲ್ ಪ್ರಾಬ್ಲಂ!?: ನವೆಂಬರ್ 30ರವರೆಗೂ ಯಡಿಯೂರಪ್ಪ ಬಿಜೆಪಿ/ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋದಿಲ್ಲ. ಏನು ಜ್ಯೋತಿಷಿಗಳ ಸಲಹೆಯಾ? ಯಜಮಾನರು ಎಂದಿನಂತೆ ರಾಹುಕಾಲ/ ಗುಳಿಕಾಲಗಳ ಲೆಕ್ಕಾಚಾರ ನಡೆಸುತ್ತಿದ್ದಾರೆ ಎಂದೇನೂ ಇಲ್ಲ. ಆದ್ರೆ... ನವೆಂಬರ್ 30ರೊಳಗಾಗಿ ಯಡಿಯೂರಪ್ಪ ರಾಜೀನಾಮೆ ನೀಡಿದ್ದೇ ಆದಲ್ಲಿ ಇನ್ನಾರು ತಿಂಗಳಲ್ಲಿ ಅವರ ಸ್ಥಾನಕ್ಕೆ ಉಪಚುನಾವಣೆ ನಡೆಯಬೇಕು.
ಅದು ಸಮಸ್ಯೆಯಾಗಿರುವುದು. ಯಡಿಯೂರಪ್ಪ ಸೇರಿದಂತೆ ಯಾರಿಗೂ ಸದ್ಯಕ್ಕೆ ಉಪಚುನಾವಣೆ ಬೇಕಾಗಿಲ್ಲ. ಹಾಗಾಗಿ ಸದ್ಯಕ್ಕೆ ರಾಜೀನಾಮೆ ಉಸಾಬರಿ ಬೇಡವೆಂದು ಯಡಿಯೂರಪ್ಪ ಸುಮ್ಮನಾಗಿದ್ದಾರೆ.
2013ರ ಜೂನ್ ವೇಳೆಗೆ ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರಬೇಕು. ಅಂದರೆ 2013ರ ಮೇ 30ರೊಳಗಾಗಿ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮುಗಿಯಬೇಕು. ಈ ಲೆಕ್ಕಾಚಾರದಲ್ಲಿ ನವೆಂಬರ್ 30ರ ನಂತರ 6 ತಿಂಗಳಿಗೂ ಕಡಿಮೆ ಕಾಲ ಉಳಿಯುತ್ತದೆ. ಆಗ ಉಪಚುನಾವಣೆ ನಡೆಸುವುದು ಅಸಾಧ್ಯದ ಮಾತು.
ಒಂದು ವೇಳೆ ನವೆಂಬರ್ 30ರ ನಂತರ ಯಡಿಯೂರಪ್ಪ ರಾಜೀನಾಮೆ ನೀಡಿದರೆ ಅವರು ಪ್ರತಿನಿಧಿಸುವ ಕ್ಷೇತ್ರ (ಶಿಕಾರಿಪುರ) ಮುಂದಿನ ಚುನಾವಣೆಯವರೆಗೂ ನಾಯಕನಿಲ್ಲದೆ ಅನಾಥ! ಆದರೆ ಸದ್ಯ ಮತ್ತೊಂದು ಚುನಾವಣೆ ನಡೆದು ಹಣ ಪೋಲಾಗುವುದು ತಪ್ಪುತ್ತದೆ ಎಂದು ಯಡಿಯೂರಪ್ಪಗೆ ಬೆನ್ನುತಟ್ಟುವ ಮಂದಿಯೂ ಇದ್ದಾರೆ.
ಬಿಜೆಪಿಯ ಆಡಳಿತದಲ್ಲಿ ಆಪರೇಶನ್ ಕಮಲದ ಫಲವಾಗಿ ರಾಜ್ಯದಲ್ಲಿ 21 ಉಪಚುನಾವಣೆಗಳು ನಡೆದಿವೆ. ಒಂದು ಉಪಚುನಾವಣೆಗೆ ಚುನಾವಣೆ ಆಯೋಗ ಅಂದಾಜು 2 ಕೋಟಿ ರೂ. ವೆಚ್ಚ ಮಾಡುತ್ತದೆ.












Click it and Unblock the Notifications