ಕೆಜೆಪಿಗೆ ಪದಾಧಿಕಾರಿಗಳ ಆಯ್ಕೆ, ಧನಂಜಯ್ ಅಧ್ಯಕ್ಷ
ಶುಕ್ರವಾರ ಕರ್ನಾಟಕ ಜನತಾ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ತೆರೆಮರೆಯಲ್ಲಿ ಯಡಿಯೂರಪ್ಪ ಅವರನ್ನು ಮನವೊಲಿಸಲು ನಡೆಸುತ್ತಿರುವ ಎಲ್ಲ ಪ್ರಯತ್ನಕ್ಕೆ ಇದು ಎಳ್ಳುನೀರು ಬಿಟ್ಟಂತಾಗಿದೆ. ಯಡಿಯೂರಪ್ಪನವರನ್ನು ಮನವೊಲಿಸಲು ಕೈಬಿಡದೆ ಬಿಜೆಪಿ ನಾಯಕರಿಗೆ ಬೇರೆ ದಾರಿಯೇ ಇಲ್ಲದಂತಾಗಿದೆ.
ಭಾರತೀಯ ಜನತಾ ಪಕ್ಷದಲ್ಲಿ ದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿಯಾಗಿ, ತಮ್ಮ ಸ್ಥಾನ ಕಳೆದುಕೊಂಡಿದ್ದ ಮಾಜಿ ಸಂಸದ ಧನಂಜಯ್ ಕುಮಾರ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಡಿ.7ರಂದು ಶಾಸಕ ಸ್ಥಾನ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುವವರೆಗೆ ಧನಂಜಯ್ ಕುಮಾರ್ ಅವರು ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಶಿವಮೊಗ್ಗದ ಹಿರಿಯ ರಾಜಕಾರಣಿ ಮತ್ತು ಪ್ರತಿಪಕ್ಷದ ಮಾಜಿ ನಾಯಕ ಕೆ.ಎಚ್. ಶ್ರೀನಿವಾಸ್ ಅವರನ್ನು ಹಿರಿಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಹಾಗೆಯೆ, ಉಪಾಧ್ಯಕ್ಷರಾಗಿ ಪದ್ಮನಾಭ ಪ್ರಸನ್ನ, ಮಂಜುನಾಥ ಗೌಡ ಮತ್ತು ಶಶಿಕಲಾ ಅವರನ್ನು ಕೂಡ ನೇಮಿಸಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ನೇಕಾರರ ನಾಯಕ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಲಕ್ಷ್ಮಿನಾರಾಯಣ ಅವರನ್ನು ಆಯ್ಕೆ ಮಾಡಲಾಗಿದೆ.