ಆರೆಸ್ಸೆಸ್ ನಂಟು ಕೂಡಾ ಕಳೆದುಕೊಂಡ ಯಡಿಯೂರಪ್ಪ
ಭ್ರಷ್ಟಾಚಾರದ ಆರೋಪ ಕೇಳಿ ಬಂದ ಕೂಡಲೆ ಅಪರಾಧಿಯನ್ನು ಕಾಣುವಂತೆ ಪಕ್ಷದ ಹಿರಿಯ ಮುಖಂಡರು ನನ್ನನ್ನು ಕಂಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆರೆಸ್ಸೆಸ್ ಮುಖಂಡರು ಒತ್ತಡ ಹೇರಿದ್ದರು.
ಅವರ ಮಾತಿಗೆ ಮನ್ನಣೆ ನೀಡಿ ನಾನು ಸಿಎಂ ಪಟ್ಟದಿಂದ ಕೆಳಗಿಳಿದೆ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಪ್ರಕರಣದಲ್ಲಿ ಆರೆಸ್ಸೆಸ್ ಮಾತ್ರ ವೌನ ವಹಿಸಿರುವುದು ಬೇಸರ ತರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.
ಭ್ರಷ್ಟಾಚಾರ ವಿರುದ್ಧದ ಬಿಜೆಪಿ ಮಾತ್ರವಲ್ಲ ಸಂಘ ಪರಿವಾರದ ನಾಯಕರ ಕೂಡಾ ಇಬ್ಬಗೆ ನೀತಿ ಅನುಸರಿಸುತ್ತಿರುವುದು ಯಡಿಯೂರಪ್ಪ ಅವರನ್ನು ಕೆರಳಿಸಿದೆ, ನೂತನ ಪ್ರಾದೇಶಿಕ ಪಕ್ಷವನ್ನು ಜಾತ್ಯತೀತ ನಿಲುವಿನ ಆಧಾರದ ಮೇಲೆ ಸ್ಥಾಪನೆ ಮಾಡುವ ಉದ್ದೇಶ ಇದೆ ಹಾಗಾಗಿ ಆರೆಸ್ಸೆಸ್ಸ್ನೊಂದಿಗಿನ ಯಡಿಯೂರಪ್ಪ ಅವರ ಸಂಬಂಧಕ್ಕೆ ಇತಿಶ್ರೀ ಹಾಡಲಾಗುತ್ತೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಬಿಜೆಪಿ ಹಾಗೂ ಆರೆಸ್ಸೆಸ್ ಜೊತೆಗಿನ ಬಹುಕಾಲದ ಸಂಬಂಧವನ್ನು ಕಡಿದುಕೊಳ್ಳಲು ಯಡಿಯೂರಪ್ಪ ಮುಂದಾಗಿರುವುದು ಹೊಸ ಪಕ್ಷ ಲಾಭದಾಯಕವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಮುಖಂಡರು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಹುಬ್ಬಳ್ಳಿಯ ಪ್ರಮುಖ ಮುಸ್ಲಿಂ ನಾಯಕ ಜಬ್ಬಾರ್ಖಾನ್ ಹೊನ್ನಳಿ ಅವರು ಯಡಿಯೂರಪ್ಪ ನೇತೃತ್ವದ ಪಕ್ಷಕ್ಕೆ ಸೇರಲು ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಧಾನಪರಿಷತ್ ಮಾಜಿ ಸದಸ್ಯ ಅಬ್ದುಲ್ ಅಝೀಮ್ ಸೇರಿದಂತೆ ಇನ್ನಿತರ ಪ್ರಮುಖ ನಾಯಕರು ಇದೇ ಹಾದಿ ಹಿಡಿಯುವ ಸಾಧ್ಯತೆ ಹೆಚ್ಚಿದೆ. ಬಿಜೆಪಿಯಿಂದ ಅಧಿಕಾರ ವಂಚಿತರಾಗಿರುವ ಮಾಜಿ ಸಚಿವ ಮಮ್ತಾಜ್ ಅಲಿಖಾನ್ ಕೂಡಾ ಯಡಿಯೂರಪ್ಪ ಅವರ ಪರ ಒಲವು ತೋರಿಸಿದ್ದಾರೆ.
ಯಡಿಯೂರಪ್ಪ ಸಿಟ್ಟಾಗಲು ಕಾರಣ?: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೆರಳಲ್ಲೆ ಬೆಳೆದ ಯಡಿಯೂರಪ್ಪ ಆರೆಸ್ಸೆಸ್ ಮುಖಂಡರು ಹಾಕಿದ ಲಕ್ಷ್ಮಣ ರೇಖೆ ದಾಟಿದ್ದಿಲ್ಲ. ಆದರೆ, ಈಗ ಯಡಿಯೂರಪ್ಪ ಬದಲಾಗಿದ್ದಾರೆ.
ಆರೆಸ್ಸೆಸ್ ನ ಜಂಟಿ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಯಡಿಯೂರಪ್ಪ ಹಾಗೂ ನಿತಿನ್ ಗಡ್ಕರಿ ಪ್ರಕರಣದಲ್ಲಿನ ವ್ಯತ್ಯಾಸವನ್ನು ವಿವರಿಸುತ್ತಾ,
'ಯಡಿಯೂರಪ್ಪ ಕೆಳಗಿಳಿದಿದ್ದು ಲೋಕಾಯುಕ್ತ ವರದಿಯಲ್ಲಿ ಹೆಸರು ಕಾಣಿಸಿಕೊಂಡ ನಂತರ, ಗಡ್ಕರಿ ವಿಷಯದಲ್ಲಿ ಹಾಗೆ ಆಗಿಲ್ಲ. ಮಾಧ್ಯಮಗಳ ವರದಿ ಹಾಗೂ ಆರೋಪ ಮಾತ್ರ ಕೇಳಿ ಬಂದಿದೆ. ತನಿಖೆಯಾಗಿಲ್ಲ, ಯಾವುದೇ ಬಂದಿಲ್ಲ, ಹೀಗಾಗಿ ಗಡ್ಕರಿ ಮುಂದುವರೆಯುವುದರಲ್ಲಿ ಯಾವುದೇ ತಪ್ಪಿಲ್ಲ' ಎಂದಿದ್ದಾರೆ.
ಯಡಿಯೂರಪ್ಪ ಅವರಂತೆ ಗಡ್ಕರಿ ಕೂಡಾ ಸ್ವಯಂಸೇವಕರಾಗಿದ್ದಾರೆ. ಈ ಪ್ರಕರಣದ ಬಗ್ಗೆ ಆಂತರಿಕ ಚರ್ಚೆ ನಡೆಸಲಾಗಿದೆ. ನಿರ್ಣಯಗಳನ್ನು ಬಿಜೆಪಿ ತೆಗೆದುಕೊಳ್ಳಲಿದೆ. ಆರೆಸ್ಸೆಸ್ ಇದರಲ್ಲಿ ತಲೆ ಹಾಕುವುದಿಲ್ಲ ಎಂದು ಹೊಸಬಾಳೆ ಹೇಳಿದ್ದಾರೆ. ಆರೆಸ್ಸೆಸ್ ಮುಖಂಡರ ಮಾತುಗಳಿಂದ ಯಡಿಯೂರಪ್ಪ ಸಹಜವಾಗೇ ನೊಂದಿದ್ದಾರೆ. ಈ ಬಿಜೆಪಿ, ಆರೆಸ್ಸೆಸ್ ಮರೆತು ಕೆಜೆಪಿಯತ್ತ ಮಾತ್ರ ಗಮನಹರಿಸಲು ನಿರ್ಧರಿಸಿದ್ದಾರೆ.