ಕೇಜ್ರಿವಾಲಾ ರಾಜಕೀಯಕ್ಕೆ ಹಣ ಕೊಟ್ಟಿಲ್ಲ: ಇನ್ಫಿ ಮೂರ್ತಿ

ಇಂಡಿಯಾ ಎಗೆನೆಸ್ಟ್ ಕರಪ್ಷನ್ ಸಂಘಟನೆಯ Public Cause Research Foundation ಲೆಕ್ಕಕ್ಕೆ ಇನ್ಫಿ ಮೂರ್ತಿ ಅವರು ಲಕ್ಷಾಂತರ ರೂ ದೇಣಿಗೆ ನೀಡಿದ್ದಾರೆ ಎಂದು ನಿನ್ನೆ ವರದಿಯಾಗಿತ್ತು.
'ಅರವಿಂದ ಕೇಜ್ರಿವಾಲಾ ಅವರ ರಾಜಕೀಯ ಚಟುವಟಿಕೆಗಳಿಗಾಗಿ ನಾನು ಎಂದಿಗೂ ಆರ್ಥಿಕ ನೆರವು ನೀಡಿಲ್ಲ. 2 ತಿಂಗಳ ಹಿಂದೆ ಅರವಿಂದ ಕೇಜ್ರಿವಾಲಾ ಅವರು ಆರ್ಥಿಕ ನೆರವು ನೀಡುವಂತೆ ಕೋರಿದ್ದರು. ಆದರೆ ನಾನು ಅವರಿಗೆ ಯಾವುದೇ ಹಣ ನೀಡಲಿಲ್ಲ' ಎಂದು ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿದ್ದಾರೆ.
ಆದರೆ RTI ಕ್ಷೇತ್ರದಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು/ಸರಕಾರೇತರ ಸಂಸ್ಥೆಗಳು/ಸಾರ್ವಜನಿಕರು ಸಲ್ಲಿಸಿದ ಗಣನೀಯ ಕೊಡುಗೆಯನ್ನು ಗಮನಿಸಿ, ಪ್ರಶಸ್ತಿಗಳನ್ನು ಕೊಡಬೇಕಾಗಿದೆ. ಹಾಗಾಗಿ ಅದಕ್ಕೆ ಹಣಕಾಸು ನೆರತವು ನೀಡಿ ಎಂದು ಕೇಜ್ರಿವಾಲಾ ತಮ್ಮನ್ನು ಭೇಟಿಯಾಗಿ ಕೇಳಿದ್ದರು. ಅದಕ್ಕೆ ಮಾತ್ರ ತಾವು ಸಮ್ಮತಿಸಿದ್ದಾಗಿ ನಾರಾಯಣ ಮೂರ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಹಾಗಾಗಿ, 2008ರಲ್ಲಿ Public Cause Research Foundationಗೆ ಪ್ರತಿ ವರ್ಷ 25 ಲಕ್ಷ ರೂ. ನಂತೆ 5 ವರ್ಷ ಕಾಲ ದೇಣಿಗೆ ನೀಡಲು ಸಮ್ಮತಿಸಿದ್ದೆ. ಅಷ್ಟೇ ಅಲ್ಲ, RTI ಜಾಗೃತಿ ಮಂಡಳಿಗೆ ಟಾಟಾ ಸಾಮಾಜಿಕ ಕ್ಷೇಮಾಭ್ಯುದಯ ಟ್ರಸ್ಟ್ ಅನ್ನೂ ಸೇರಿಸಿಕೊಳ್ಳುವಂತೆ ಸೂಚಿಸಿದ್ದೆ. ಜತೆಗೆ ಟಾಟಾ ಟ್ರಸ್ಟಿನಿಂದಲೂ ಪ್ರತಿ ವರ್ಷ 25 ಲಕ್ಷ ರೂ. ನಂತೆ 5 ವರ್ಷ ಕಾಲ ದೇಣಿಗೆ ಪಡೆಯುವಂತೆಯೂ ಸಲಹೆ ನೀಡಿದ್ದೆ ಎಂದು ಮೂರ್ತಿ ಸ್ಪಷ್ಟಪಡಿಸಿದ್ದಾರೆ.
2008 ಮತ್ತು 2009ರಲ್ಲಿ 25 ಲಕ್ಷ ರೂ, 2010ರಲ್ಲಿ 37 ಲಕ್ಷ ರೂ, 2010ರಲ್ಲೇ ಮತ್ತೆ 12 ಲಕ್ಷ ರೂ ಮತ್ತು 2011ರಲ್ಲಿ 25 ಲಕ್ಷ ರೂ. ಹಣ ನೀಡಿರುವುದಾಗಿ ಮೂರ್ತಿ ಹೇಳಿದ್ದಾರೆ.
ಆದರೆ ಇದರ ಹೊರತಗಾಗಿ 2 ತಿಂಗಳ ಹಿಂದೆ ರಾಜಕೀಯ ಮಾಡಬೇಕಾಗಿದೆ. ಅದಕ್ಕೆ ಹಣ ದೇಣಿಗೆ ನೀಡಿ ಎಂದು ಅರವಿಂದ ಅಲವತ್ತುಕೊಂಡಾಗ ಸುತರಾಂ ಒಪ್ಪಲಿಲ್ಲ ಎನ್ನುವ ಮೂಲಕ ನಾರಾಯಣ ಮೂರ್ತಿ ವಿವಾದಕ್ಕೆ ತೆರೆ ಎಳೆದಿದ್ದಾರೆ.












Click it and Unblock the Notifications