ಗೋಡೆಗೆ ವಿದ್ಯಾರ್ಥಿನಿ ತಲೆ ಘಟ್ಟಿಸಿದ ಕ್ರೂರ ಶಿಕ್ಷಕ

ಅರಳಿದ ಪುಷ್ಪದಂತೆ ಚಟುವಟಿಕೆಯಿಂದ ಇದ್ದ ಪುಷ್ಪಾ ಈಗ ಬಾಡಿದ ಹೂವಿನಂತಾಗಿದ್ದಾಳೆ. ತನ್ನ ಹೆಸರು ಹೇಳುವುದನ್ನು ಬಿಟ್ಟರೆ ಯಾರನ್ನೂ ಗುರುತಿಸುತ್ತಿಲ್ಲ, ಸರಿಯಾಗಿ ಊಟ ಮಾಡುತ್ತಿಲ್ಲ, ಯಾರೊಂದಿಗೂ ಮಾತನಾಡುತ್ತಿಲ್ಲ. ಕೆಲ ತಿಂಗಳುಗಳಿಂದ ಮಿದುಳಿನ ರೋಗದಿಂದ ಬಳಲುತ್ತಿರುವ ಪುಷ್ಪಾ ಶಿಕ್ಷಕ ಕೊಟ್ಟ ಅಮಾನವೀಯವಾಗಿ ಶಿಕ್ಷೆಯಿಂದಾಗಿ ಮತ್ತಷ್ಟು ಆಘಾತಕ್ಕೊಳಗಾಗಿದ್ದಾಳೆ.
ಕೆಲ ತಿಂಗಳುಗಳಿಂದ ಶಿಕ್ಷಕ ತನ್ನ ಮಗಳನ್ನು ಅಮಾನವೀಯವಾಗಿ ಶಿಕ್ಷಿಸುತ್ತಿದ್ದರಿಂದಲೇ, ಮೊದಲೇ ಅಶಕ್ತಳಾಗಿದ್ದ ಮಗಳು ಇನ್ನಷ್ಟು ನಿಶ್ಶಕ್ತಳಾಗಿದ್ದಾಳೆ. ಆಕೆಗೆ ಒಂದು ಕಾಫಿ ಕಪ್ಪನ್ನು ಕೂಡ ಎತ್ತುವುದ ಆಗುತ್ತಿಲ್ಲ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಪುಷ್ಪಾಳ ತಂದೆ ದೇವರಾಜ್ ಅವರು ಗೋಳಾಡುತ್ತಿದ್ದಾರೆ.
ಶಾಲೆ ಅಭಿವೃದ್ಧಿ ಮತ್ತು ಪರಿವೀಕ್ಷಣಾ ಸಮಿತಿಯ ಮುಖ್ಯಸ್ಥರಾಗಿರುವ ಪುಷ್ಪಾಳ ತಂದೆ ದೇವರಾಜ್ ಅವರು, ಮಗಳ ಕ್ಲಾಸ್ ಟೀಚರ್ ಜೊತೆ ಹಿಂದಿನಿಂದ ಜಗಳ ಕಾಯ್ದುಕೊಂಡು ಬಂದಿದ್ದರಿಂದ, ಮಗಳನ್ನು ಶಿಕ್ಷಿಸುವ ಮುಖಾಂತರ ತನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾನೆ. ಶಿಕ್ಷಕ ನಿರಂತರವಾಗಿ ಶಿಕ್ಷಿಸುತ್ತಿದ್ದರಿಂದಲೇ ಮಗಳಿಗೆ ಮಿದುಳಿಗೆ ಘಾಸಿಯಾಗಿದೆ ಎಂದು ಆರೋಪಿಸಿದ್ದಾರೆ.
ಆದರೆ, ತಲೆ ಘಟ್ಟಿಸಿದ್ದರಿಂದ ಮಿದುಳಿಗೆ ಘಾಸಿಯಾಗಿದೆ ಎಂಬ ಸಂಗತಿಯನ್ನು ಆಕೆಯನ್ನು ಪರೀಕ್ಷಿಸುತ್ತಿರುವ ವೈದ್ಯರು ಅಲ್ಲಗಳೆದಿದ್ದಾರೆ. ಶಿಕ್ಷಕ ಶಿಕ್ಷಿಸಿರುವ ರೀತಿ ಅಮಾನವೀಯವೇ ಆಗಿರಬಹುದು. ಇದರಿಂದ ನಮಗೂ ತುಂಬಾ ನೋವಾಗಿದೆ. ಆದರೆ, ತಲೆಯನ್ನು ಗೋಡೆಗೆ ಬಡಿಸಿದ್ದರಿಂದ ಮಿದುಳಿಗೆ ಹಾನಿಯಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಅಲ್ಲದೆ, ಇಂಥ ರೋಗ ಬಂದಿರುವ ವ್ಯಕ್ತಿ ಜಾಸ್ತಿ ದಿನ ಬದುಕುವುದಿಲ್ಲ ಎಂಬ ಆಘಾತಕಾರಿ ಸಂಗತಿಯನ್ನೂ ಅವರು ಬಹಿರಂಗಪಡಿಸಿದ್ದಾರೆ.
ವಿದ್ಯಾರ್ಥಿನಿಯನ್ನು ಶಿಕ್ಷಿಸಿದ್ದನ್ನು ಶಾಲಾ ಶಿಕ್ಷಕ ಮೊದಲು ನಿರಾಕರಿಸಿದ್ದಾರೆ. ಆದರೆ, ಪುಷ್ಪಾಳ ಸಹಪಾಠಿಗಳು ಸತ್ಯಸಂಗತಿಯನ್ನು ಬಹಿರಂಗಪಡಿಸಿದ್ದರಿಂದ, ತಾನು ಪುಷ್ಪಾಳನ್ನು ಶಿಕ್ಷಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಮಾನತುಗೊಳಿಸಿದ ಮಾತ್ರಕ್ಕೆ ಪುಷ್ಪಾ ಮತ್ತು ಆಕೆಯ ಪಾಲಕರಿಗೆ ಸಿಗಬೇಕಾದ ನ್ಯಾಯ ಸಿಗುವುದೆ?












Click it and Unblock the Notifications