ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಗೆ ಹೀಗಾಗಬಾರದಿತ್ತು

ಗಡ್ಕರಿ ಕಟ್ಟಾ ಅನುಯಾಯಿಗಳು ಮತ್ತು ಸಂಘಪರಿವಾರದ ಕೆಲವರು ಗಡ್ಕರಿಗೆ ಹೀಗಾಗಬಾರದಾಗಿತ್ತು ಎಂದು ನೊಂದುಕೊಳ್ಳುತ್ತಿದ್ದರೆ ಗಡ್ಕರಿ ಅವರೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಇಚ್ಛೆ ವ್ಯಕ್ತ ಪಡಿಸದ ಕಾರಣ ಅವರನ್ನು ಪ್ರಚಾರದಿಂದ ದೂರವಿಡಲಾಗಿದೆ ಎಂದು ಹಿಮಾಚಲ ಪ್ರದೇಶ ರಾಜ್ಯ ಬಿಜೆಪಿ ಘಟಕ ಸಮಜಾಯಿಷಿ ನೀಡಿದೆ.
ನಿತಿನ್ ಗಡ್ಕರಿಯವರ ವ್ಯವಹಾರದಲ್ಲಿನ ಅಕ್ರಮ ವಿಷಯವು ರಾಜ್ಯದಲ್ಲಿ ಪಕ್ಷದ ನಿರೀಕ್ಷೆಗೆ ಭಾರೀ ಪೆಟ್ಟು ನೀಡಬಹುದು ಎನ್ನುವ ಮುನ್ಸೂಚನೆ ದೊರೆತ ಹಿನ್ನಲೆಯಲ್ಲಿ ಗಡ್ಕರಿ ಹಿಮಾಚಲ ಪ್ರದೇಶದ ತನ್ನ ಪ್ರವಾಸವನ್ನು ರದ್ದು ಗೊಳಿಸಿದ್ದಾರೆ.
ಕೆಲ ಬಿಜೆಪಿ ನಾಯಕರ ಸಲಹೆಯ ಮೇರೆಗೆ ಹಿಮಾಚಲ ಪ್ರದೇಶದ ಸೊಲಾನ್ ಮತ್ತು ಬಿಲಾಸ್ ಪುರದಲ್ಲಿ ಗಡ್ಕರಿ ತಾನು ನಡೆಸಲು ಇಚ್ಚಿಸಿದ್ದ ಬಹಿರಂಗ ಸಭೆಯನ್ನು ಕೊನೆ ಕ್ಷಣದಲ್ಲಿ ರದ್ದು ಪಡಿಸಿದ್ದಾರೆ.
ಗಡ್ಕರಿ ವಿರುದ್ದ ಅವ್ಯವಹಾರದ ವಿಷಯ ಗಂಭೀರ ಗೊಳ್ಳುತ್ತಿದ್ದಂತೆ ಗುಜರಾತ್ ಬಿಜೆಪಿ ಘಟಕವೂ ಅವರನ್ನು ದೂರವಿಟ್ಟಿತ್ತು. ಈಗ ಹಿಮಾಚಲ ಪ್ರದೇಶದ ಸರದಿ. ಈ ಮಧ್ಯೆ ತನ್ನ ವಿರುದ್ದದ ಭ್ರಷ್ಟಾಚಾರದ ಆರೋಪ ವಿರುದ್ದ ಕಾನೂನು ಹೋರಾಟ ನಡೆಸಲು ಗಡ್ಕರಿ ಮುಂದಾಗಿದ್ದು ವಾರಾಂತ್ಯದಲ್ಲಿ ನಾಗಪುರದಲ್ಲಿ ಶಕ್ತಿ ಪ್ರದರ್ಶನ ನಡೆಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.
ಹಿಮಾಚಲ ಪ್ರದೇಶದಲ್ಲಿ ಇದೇ ಭಾನುವಾರದಂದು (ನ 4) ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ಡಿಸೆಂಬರ್ 20ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. 68 ಸದಸ್ಯರ ಬಲದ ಅಸೆಂಬ್ಲಿಯಲ್ಲಿ ಕಳೆದ ಚುನಾವಣೆಯಲ್ಲಿ ಅಂದರೆ 2007 ರಲ್ಲಿ ಬಿಜೆಪಿ 41 , ಕಾಂಗ್ರೆಸ್ 19 , ಇತರರು 8 ಸ್ಥಾನ ಗೆದ್ದಿದ್ದರು.
ಹಿಮಾಚಲ ಪ್ರದೇಶದ ಇತಿಹಾಸದಲ್ಲೇ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು, ಮತದಾರರ ಚಿತ್ತ ಯಾರ ಪರವಾಗಿ ಬೇಕಾದರೂ ವಾಲಬಹುದೆಂದು ಚುನಾವಣಾಪೂರ್ವ ಸಮೀಕ್ಷೆ ತಿಳಿಸಿದೆ.












Click it and Unblock the Notifications