ಪಾಪದ ಹಣ ತಿಂದ್ರೆ ರೆಡ್ಡಿಗಾದ ಗತಿ ಬರುತ್ತೆ : ಸಿಎಂ ಇಬ್ರಾಹಿಂ

ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿಕೊಂಡರು. ಈ ಭ್ರಷ್ಟಾಚಾರವೇ ಅವರ ಹೆಗಲಿಗೆ ಉರುಳಾಗಿದೆ. ಬಿ.ಜೆ.ಪಿ. ರಾಷ್ಟ್ರಾಧ್ಯಕ್ಷ ಗಡ್ಕರಿ ಕೂಡ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಪಾಪದ ಹಣವನ್ನು ತಿನ್ನಬಾರದು. ಪಾಪದ ಹಣ ತಿಂದಿದ್ದೇ ಆದರೆ ಜನಾರ್ದನ ರೆಡ್ಡಿಗೆ ಆದ ಗತಿಯೇ ಆಗುತ್ತದೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಹಾಸನ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸುವ ವೇಳೆ ಇಬ್ರಾಹಿಂ ಅವರು ಮೇಲ್ಕಂಡ ಹೇಳಿಕೆ ನೀಡಿದ್ದಾರೆ.
ಪರಿವರ್ತನೆ ಕೂಗಿದವರಿಗೆ ನೆತ್ತಿಯ ಮೇಲೆ ಕತ್ತಿ ಅಲುಗಾಡುತ್ತಿರುತ್ತದೆ. ನನ್ನನ್ನು ತೋರಿಸಿ ಸೀಟು ಪಡೆದವರು ಬೇಕಾದಷ್ಟು ಜನರಿದ್ದಾರೆ. ಅಧಿಕಾರವನ್ನೂ ಅನುಭವಿಸಿದ್ದಾರೆ. ಆದರೆ ಇವೊತ್ತಲ್ಲ ನಾಳೆ ನಮಗೂ ಅಧಿಕಾರ ಸಿಗುತ್ತದೆ ಎಂದು ಇಬ್ರಾಹಿಂ ಹೇಳಿದರು.
ಮೀಸಲಾತಿ ಬೇಕೆ?: ಮೀಸಲಾತಿ ಇವತ್ತಿನದೇನಲ್ಲ. ಇದು ಹಳೆಯ ವಿಷಯ. ಮೀಸಲಾತಿ ಜಾರಿಗೆ ತಂದಿದ್ದೇ ಕಾಂಗ್ರೆಸ್ ಪಕ್ಷ. ಸತ್ಯಾಂಶ ಮರೆ ಮಾಚಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಥಿಕ ಹಾಗೂ ಸಾಮಾಜಿಕ ನೀತಿಗಳು ಜಾರಿಗೆ ಬರುತ್ತವೆ ಎಂದರು.
ಎಸ್ ಎಂ ಕೃಷ್ಣ ಅವರ ಅನುಭವ ಕೆಪಿಸಿಸಿಗೆ ಅಗತ್ಯವಾಗಿದೆ. ಕೇಂದ್ರದ ನಾಯಕರು ತೆಗೆದುಕೊಂಡ ಕ್ರಮ ಸರಿಯಾಗೇ ಇದೆ ಎಂದು ಕೃಷ್ಣ ಬರುವಿಕೆಯನ್ನು ಸಮರ್ಥಿಸಿಕೊಂಡರು.
ನಾನು ಬೇರೆ ಪಕ್ಷವನ್ನು ಸೇರುತ್ತೇನೆ ಎಂಬುದು ವದಂತಿ ಅಷ್ಟೇ. ಯಡಿಯೂರಪ್ಪನವರನ್ನು ಭೇಟಿಯಾಗಿದ್ದು ನಿಜ. ಅವರಿಗೆ ಬುದ್ಧಿವಾದ ಹೇಳಲು ಹೋಗಿದ್ದೆ. ಕಾಂಗ್ರೆಸ್ ಗೆ ಬನ್ನಿ ಎಂದು ಕರೆಯಲಿಲ್ಲ. ಅವರ ಪಕ್ಷಕ್ಕೆ ಸೇರಲು ಅಪ್ಲಿಕೇಷನೂ ಹಾಕಿಲ್ಲ ಎಂದರು.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಭೇಟಿಯಾಗುತ್ತೇನೆ. ಭೇಟಿಯಾದ ಸಂದರ್ಭದಲ್ಲಿ ಬರೀ ನಿಮ್ಮ ಮಕ್ಕಳಿಗೆ ಸ್ಥಾನಮಾನ ಕಲ್ಪಿಸಬೇಡಿ. ಇತರ
ರಿಗೂ ಕಲ್ಪಿಸಿ ಎಂದು ತಿಳಿ ಹೇಳುತ್ತೇನೆ. ಆದರೆ ನಾನು ಬೇರೆ ಪಕ್ಷಕ್ಕೆ ತೆರಳುತ್ತೇನೆಂದು ಪತ್ರಿಕೆಗಳು, ಮಾಧ್ಯಮಗಳು ಏಕೆ ಪ್ರಚಾರ ನಡೆಸುತ್ತವೆ ಗೊತ್ತಿಲ್ಲಪ್ಪ ಎಂದು ನಗೆಯಾಡಿದರು.












Click it and Unblock the Notifications