ಚುನಾವಣೆ ನಿಮಿತ್ತ ಅಂಗವಿಕಲರ ಕೈಹಿಡಿದ ಎಚ್ಡಿಕೆ

ಅರಮನೆ ಮೈದಾನದಲ್ಲಿ ನಿನ್ನೆ ಜೆಡಿಎಸ್ ರಾಜ್ಯ ಘಟಕ ಹಮ್ಮಿಕೊಂಡಿದ್ದ ಅಂಗವಿಕಲರ 'ಮಾನವತೆಯ ಮಹಾ ಮೇಳ' ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ರಾಜ್ಯದಲ್ಲಿ ''ಸ್ವತಂತ್ರವಾಗಿ ಸರಕಾರ ರಚನೆ ಮಾಡಿದರೆ'' ಕುಮಾರಸ್ವಾಮಿ ಹೇಳಿದಂತೆ ಅಂಗವಿಕಲರ ಭಾಗ್ಯ ಖುಲಾಯಿಸಲಿದೆ.
'ರಾಜ್ಯ ಸರ್ಕಾರದ ದಾಖಲೆಗಳ ಪ್ರಕಾರ 9 ಲಕ್ಷ ಅಂಗವಿಕಲರಿದ್ದಾರೆ. ಆದರೆ, ಖಾಸಗಿ ಸಂಸ್ಥೆಗಳ ಸಮೀಕ್ಷೆ ಪ್ರಕಾರ ಈ ಸಂಖ್ಯೆ 19 ಲಕ್ಷಕ್ಕೂ ಹೆಚ್ಚು. ಅಂಗವಿಕಲರು ಮತ್ತು ಅವರ ಕುಟುಂಬದ ಎಲ್ಲ ಸದಸ್ಯರನ್ನೂ ಸೇರಿಸಿದರೆ 30 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಈ ಮತಗಳು ಪೂರ್ಣವಾಗಿ ಜೆಡಿಎಸ್ನತ್ತ ಬಂದರೆ ಪಕ್ಷದ ಶಕ್ತಿ ಮತ್ತಷ್ಟು ಹೆಚ್ಚುತ್ತದೆ' ಎಂಬ ಲೆಕ್ಕಾಚಾರ ಈ ಸಮಾವೇಶದುದ್ದಕ್ಕೂ ಕೇಳಿಬಂತು.
ಇದನ್ನು ಆಲಿಸಿದ ಕುಮಾರಸ್ವಾಮಿ 'ಜೆಡಿಎಸ್ ಪಕ್ಷ ಅಂಗವಿಕಲರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ತಪ್ಪುಕಲ್ಪನೆ ಯಾರಿಗೂ ಬೇಡ. ಜೆಡಿಎಸ್ ಅಧಿಕಾರಕ್ಕೆ ಬಂದರೆ 90 ದಿನಗಳಲ್ಲೇ ನಿಮಗಾಗಿ ಈ ಎಲ್ಲ ಕಾರ್ಯಕ್ರಮಗಳು ಜಾರಿಗೆ ಬರುತ್ತವೆ' ಎಂದು ಭರವಸೆ ನೀಡಿದ್ದಾರೆ:
ಅಂಗವಿಕಲರಿಗಾಗಿ ಕುಮಾರಸ್ವಾಮಿ ಕಂಡ ಕನಸು ಹೀಗಿದೆ:
* ಅಂಗವಿಕಲ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುವ ಸಲುವಾಗಿ ಬೆಂಗಳೂರು ಹೊರ ವಲಯದಲ್ಲಿ 100 ಎಕರೆ ಪ್ರದೇಶದಲ್ಲಿ ಅಂಗವಿಕಲ ವಿವಿ ಸ್ಥಾಪಿಸಲಾಗುವುದು.
* ಬೆಂಗಳೂರಲ್ಲಿ ಅಂಗವಿಕಲ ಕಲ್ಯಾಣ ಭವನ ನಿರ್ಮಾಣ.
* ಕೇಂದ್ರ ನಿಗಧಿಪಡಿಸಿರುವ 6 ಎಲ್ಪಿಜಿ ಸಿಲಿಂಡರ್ ಜೊತೆಗೆ ಮತ್ತೆ 2 ಸಿಲಿಂಡರ್ಗಳಿಗೆ ಅಂಗವಿಕಲರ ಕುಟಂಬಗಳಿಗೆ ರಾಜ್ಯ ಸರಕಾರದ ಸಬ್ಸಿಡಿ.
* ಈಗಿನ ಭಾಗ್ಯಲಕ್ಷ್ಮಿ ಬಾಂಡ್ ಮಾದರಿಯಲ್ಲಿ ಅಂಗವಿಕಲ ಮಗು ಹುಟ್ಟಿದರೆ ಜೀವನಪೂರ್ತಿ ಉಚಿತ ಆರೋಗ್ಯ ಸೇವೆ ಒದಗಿಸುವ ವಿಶೇಷ ವಿಮಾ ಸೌಲಭ್ಯ ಜಾರಿಗೆ ತರಲಾಗುತ್ತದೆ.
* ಅಂಗವಿಕಲರನ್ನು ವಿವಾಹವಾದವರಿಗೆ ಪ್ರೋತ್ಸಾಹ ಧನ, ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಯಲ್ಲಿ ಶೇ. 10ರಷ್ಟು ಮೀಸಲು, ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹಧನ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ರಾಜ್ಯಾದ್ಯಂತ ಉಚಿತ ಸಂಚಾರ, ಅಂಗವಿಕಲರಿಗಾಗಿ ವಿಶೇಷ ಆಸ್ಪತ್ರೆಗಳ ಸ್ಥಾಪನೆ, ರಾಜಕೀಯ ರಂಗದಲ್ಲೂ ಅಂಗವಿಕಲರಿಗೆ ಮೀಸಲು ಸೌಲಭ್ಯ ಒದಗಿಸುವ ಬಗ್ಗೆ ನಿರ್ಧರಿಸಲು ವಿಶೇಷ ಸಮಿತಿ ರಚನೆ ಸೇರಿದಂತೆ 35 ಕಾರ್ಯಕ್ರಮಗಳು.












Click it and Unblock the Notifications