ಟೆರರ್ ಆದ ಟೆಕ್ಕಿ ದೆಹಲಿಯಲ್ಲಿ ಬಿದ್ದ ಬಲೆಗೆ
ಸೌದಿ ಅರೇಬಿಯಾದಿಂದ ದೆಹಲಿಗೆ ಸೋಮವಾರ ಬೆಳಗ್ಗೆ ಬಂದಿಳಿದ ಫಾಸಿಹ್ ನನ್ನು ದೆಹಲಿ ವಿಶೇಷ ಘಟಕದ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ರಿಯಾದ್ ಅಧಿಕಾರಿಗಳೊಡನೆ ದೆಹಲಿ ಪೊಲೀಸರು ನಿರಂತರವಾಗಿ ಸಂಪರ್ಕ ಇಟ್ಟುಕೊಂಡು ಬಲೆ ಬೀಸಲಾಯಿತು.
28 ವರ್ಷದ ಫಾಸಿಹ್ ಬಿಹಾರ ಮೂಲದವನಾಗಿದ್ದು, ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾನೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಸರಣಿ ಸ್ಫೋಟದ ಪ್ರಮುಖ ರುವಾರಿ ಎಂಬ ಆರೋಪ ಈತನ ಮೇಲಿದೆ.
ಇದಲ್ಲದೆ 2010ರ ಜಾಮಾ ಮಸೀದ್ (ದೆಹಲಿ) ಬಳಿ ಶೂಟಿಂಗ್ ಪ್ರಕರಣದಲ್ಲೂ ಈತನ ಕೈವಾಡದ ಶಂಕೆ ವ್ಯಕ್ತವಾಗಿತ್ತು. ದೆಹಲಿ ಹಾಗೂ ಕರ್ನಾಟಕ ಪೊಲೀಸರು ಫಾಸಿಹ್ ಬೇಟೆ ನಡೆಸಿದ್ದರು.
ಕರ್ನಾಟಕ ಹಾಗೂ ದೆಹಲಿ ಪೊಲೀಸರ ಮನವಿ ಮೇರೆಗೆ ಸಿಬಿಐ ತಂಡ ಇಂಟರ್ ಪೋಲ್ ಸಂಪರ್ಕಿಸಿತ್ತು. ಫಾಸಿಹ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ನಂತರ ದೆಹಲಿ ಪೊಲೀಸರಿಗೆ ಸೌದಿ ಆಡಳಿತ ನೆರವಿ ನೀಡಿತ್ತು.
ತನ್ನ ಗಂಡ ಫಾಸಿಹ್(ಫೈಶ್) ನಾಪತ್ತೆಯಾಗಿದ್ದಾನೆ. ಆತನಿಗೆ ಜೀವ ಬೆದರಿಕೆ ಇದೆ ನನಗೆ ನೆರವಾಗಿ ಎಂದು ಫಾಸಿಹ್ ಪತ್ನಿ ನಿಖಾತ್ ಪರ್ವೀನ್ ಅವರು ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದರು.
ಜೊತೆಗೆ ಸೌದಿ ಹಾಗೂ ಭಾರತ ಪೊಲೀಸ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ತನ್ನ ಗಂಡನನ್ನು ಮೇ 13 ರಂದೇ ಬಂಧಿಸಿ ಭೂಗತಗೊಳಿಸಿ ವಿಚಾರಣೆ ನಡೆಸುತ್ತಿದ್ದಾರೆ. ನನಗೆ ಆತನ ಬಗ್ಗೆ ಮಾಹಿತಿ ಸಿಗುತ್ತಿಲ್ಲ ಎಂದು ಸುಪ್ರೀಂಕೋರ್ಟ್ ನಲ್ಲಿ ನಿಖಾತ್ ಕೇಳಿಕೊಂಡಿದ್ದರು.
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್ ಇ ತೋಯ್ಬಾ(LeT) ಹಾಗೂ ಇಂಡಿಯನ್ ಮುಜಾಹಿದ್ದೀನ್(IM) ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಮಂಗಳವಾರ(ಮೇ.8,2012) ಬಿಹಾರದಲ್ಲಿ ಬಂಧಿಸಲಾಗಿತ್ತು. ಬಂಧಿತ ಉಗ್ರರನ್ನು ಕಾಫಿಲ್ ಅಖ್ತರ್ ಹಾಗೂ ಸೈಯದ್ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿತ್ತು..
ಏ.17ರಂದು ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯ ನಡೆಯುವ 1 ಗಂಟೆ ಮುಂಚೆ ಲಘು ಸಾಮರ್ಥ್ಯದ ಸ್ಫೋಟಕಗಳು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಪತ್ತೆಯಾಗಿತ್ತು. ಸ್ಫೋಟದಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿತ್ತು.
ಅಕ್ಟೋಬರ್ 11 ರಂದು ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ (IM) ಭಯೋತ್ಪಾದಕ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಕರ್ನಾಟಕದ ಯಾಸಿನ್ ಭಟ್ಕಳ ಮಾರ್ಗದರ್ಶನದಲ್ಲಿ ದೆಹಲಿಯಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಈ ತಂಡ ಹೊಂಚು ಹಾಕುತ್ತಿದ್ದರು ಎಂದು ತಿಳಿದು ಬಂದಿತ್ತು.