ಹೋರಾಟ ಯಾರ ವಿರುದ್ಧ, ಕಾಂಗ್ರೆಸ್ಸೊ? ಭ್ರಷ್ಟಾಚಾರವೊ?

ಹಿಮಾಚಲಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ಸೋನಿಯಾ, ಪ್ರಸಕ್ತ ಹಣದುಬ್ಬರ ಯುಪಿಎ ಸರಕಾರವನ್ನು ಚಿಂತೆಗೀಡು ಮಾಡಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಮೌಲ್ಯವರ್ಧಿತ ತೆರಿಗೆಯಲ್ಲಿ (VAT) ರಿಯಾಯತಿ ನೀಡಿದೆ. ಕಾಂಗ್ರೆಸ್ ವಿರುದ್ದ ಟೀಕೆ ಮಾಡುವ ಬಿಜೆಪಿ ತಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯದಲ್ಲಿ ಯಾಕೆ ಇದನ್ನು ಇಳಿಸುತ್ತಿಲ್ಲ ಎಂದು ಬಿಜೆಪಿಗೆ ಮರು ಸವಾಲು ಹಾಕಿದರು.
ವಿದೇಶಿ ನೇರ ಬಂಡವಾಳ ವಿಚಾರದಲ್ಲೂ ಬಿಜೆಪಿ ರಂಪ ರಾಮಾಯಣ ಮಾಡುತ್ತಿದೆ. ಆಯಾಯ ರಾಜ್ಯಗಳಿಗೆ ಇದನ್ನು ಸ್ವೀಕರಿಸುವ ಅಥವಾ ಬಿಡುವ ಅಧಿಕಾರವಿದೆ. ಕೇಂದ್ರದ ಯುಪಿಎ ಸರಕಾರ ಈ ವಿಷಯದಲ್ಲಿ ಏನೂ ತಲೆ ಹಾಕುವಂತಿಲ್ಲ. ಇದು ತಿಳಿದಿದ್ದರೂ ಬಿಜೆಪಿ ಈ ವಿಷಯವನ್ನು ದೊಡ್ಡದಾಗಿ ಮಾಡುತ್ತಿದೆ ಎಂದು ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಿಗೆ ಕೇಂದ್ರ ನಿಗದಿ ಪಡಿಸಿದ್ದಕ್ಕಿಂತ ಜಾಸ್ತಿ ಹಣ ಬಿಡುಗಡೆ ಮಾಡಿದೆ. ಆದರೂ ಕೇಂದ್ರ ಸರಕಾರ ತಾರತಮ್ಯ ತೋರಿಸುತ್ತಿದೆ ಎಂದು ಸುಳ್ಳು ಆಪಾದನೆ ಮಾಡುತ್ತಿದೆ. ಜನರಿಗೆ ಕೊಟ್ಟ ಆಶ್ವಾಸನೆ ಬರೀ ಆಶ್ವಾಸನೆಯಾಗಿ ಅವರ ಅಧಿಕಾರದ ರಾಜ್ಯದಲ್ಲಿ ಉಳಿದಿದೆ ಎಂದು ಸೋನಿಯಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಜನರ ಕಣ್ಣಿಗೆ ಮಣ್ಣೆರೆಚಲು ಭ್ರಷ್ಟಾಚಾರದ ವಿರುದ್ದ ಹೋರಾಟ ಎನ್ನುವ ನಾಟಕವಾಡುತ್ತಿದೆ. ಅವರ ಹೋರಾಟ ಕಾಂಗ್ರೆಸ್ ವಿರುದ್ದವೋ ಅಥವಾ ಭ್ರಷ್ಟಾಚಾರದ ವಿರುದ್ದವೋ ಎನ್ನುವ ಸಂಶಯ ನನಗೆ ಕಾಡುತ್ತಿದೆ ಎಂದು ಸೋನಿಯಾ ಗಾಂಧಿ ಸಾರ್ವಜನಿಕ ಸಭೆಯಲ್ಲಿ ನುಡಿದರು.












Click it and Unblock the Notifications