ಬಿಎಸ್ ವೈ ಸಿಎಂ ಆದ್ರೆ ರಾಜ್ಯ ನಂ.1: ರೆಡ್ಡಿ

ಯಡಿಯೂರಪ್ಪ ಅವರು ಸ್ಥಾಪಿಸಲಿರುವ ಹೊಸ ಪಕ್ಷದ ಹೆಸರು ಕರ್ನಾಟಕ ಜನತಾ ಪಕ್ಷ ಎಂದು ಎಲ್ಲರೂ ಹೆಸರು ನೆನಪಲ್ಲಿಟ್ಟುಕೊಳ್ಳುವ ಹೊತ್ತಿಗೆ ಯಡಿಯೂರಪ್ಪ ಹೊಸ ಬಾಂಬ್ ಹಾಕಿದ್ದಾರೆ. ಹೊಸ ಪಕ್ಷದ ಹೆಸರು ಇನ್ನೂ ನಿರ್ಧಾರವಾಗಿಲ್ಲ. ಪಕ್ಷದ ಕಾರ್ಯಕರ್ತರ ನಡುವೆ ಚರ್ಚೆ ನಡೆಸಿ ಈ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.
'ಹೊಸ ಪಕ್ಷದ ಉದ್ಘಾಟನೆ ಡಿಸೆಂಬರ್ ನಲ್ಲೇ ಆಗಲಿದೆ. ಪಕ್ಷಕ್ಕೆ ಸೇರಲು ಬಯಸುವವರಿಗೆ ಸ್ವಾಗತ. ಬಿಜೆಪಿ ಹಾಗೂ ನನ್ನ ಸಂಬಂಧ ಮುಗಿದ ಅಧ್ಯಾಯ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸಿ ಮುಂದಿನ ಚುನಾವಣೆ ಎದುರಿಸಲಾಗುವುದು. ಎಲ್ಲಾ 224 ವಿಧಾನಸಭಾ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ' ಎಂದು ಯಡಿಯೂರಪ್ಪ ಹೇಳಿದರು.
ಇಲ್ಲಿನ ಬೂದಗುಂಬ ಕ್ರಾಸ್ ನಲ್ಲಿ ಸುಮಾರು 19 ಕೋಟಿ ರು ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಹಾಲಿನ ಡೇರಿಯನ್ನು ಮಂಗಳವಾರ (ಅ.16) ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹಾಗೂ ಶಾಸಕ ಬಿಜೆ ಪುಟ್ಟಸ್ವಾಮಿ ಅವರು ಉಪಸ್ಥಿತರಿದ್ದರು.
ಬಿಎಸ್ ವೈ ಸಿಎಂ ಆದ್ರೆ ರಾಜ್ಯ ನಂ.1 : ಹಿಂದುಳಿದಿರುವ ಬರ ಪ್ರದೇಶಗಳಿಗೆ ಯಡಿಯೂರಪ್ಪ ಅವರ ಕೊಡುಗೆ ಅಪಾರ. ಬಳ್ಳಾರಿ ಹಾಗೂ ಕೆಎಂಎಫ್ ಅಭಿವೃದ್ಧಿಗೂ ಅವರು ಶ್ರಮಿಸಿದ್ದಾರೆ.
ದೀನ ದಲಿತರ ಕಷ್ಟ ನೋವುಗಳು ಅವರಿಗೆ ಅರ್ಥವಾಗುತ್ತದೆ. ರಾಜ್ಯ ಪ್ರಗತಿ ಪಥ ಸಾಗಬೇಕಿದ್ದರೆ. ಯಡಿಯೂರಪ್ಪ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ, ಕರ್ನಾಟಕ ರಾಜ್ಯ ನಂ.1 ಸ್ಥಾನಕ್ಕೇರುವುದು ಗ್ಯಾರಂಟಿ ಎಂದು ಸೋಮಶೇಖರ ರೆಡ್ಡಿ ಅವರು ಯಡಿಯೂರಪ್ಪ ಅವರನ್ನು ಹಾಡಿಹೊಗಳಿದ್ದಾರೆ.
ಅ.16 ಹಾಗೂ ಅ,17 ರಂದು ಕೊಪ್ಪಳ ಜಿಲ್ಲೆಯಲ್ಲಿ ಯಡಿಯೂರಪ್ಪ ಅವರು ಸಂಚರಿಸಲಿದ್ದಾರೆ. ಹೊಸ ಪಕ್ಷದ ಸಂಘಟನೆಯನ್ನು ಉತ್ತರ ಕರ್ನಾಟಕದ ಭಾಗದಿಂದ ಆರಂಭಿಸಿ ನಂತರ ಮೈಸೂರು ಪ್ರಾಂತ್ಯಕ್ಕೆ ಆಗಮಿಸುವ ಯೋಜನೆ ಯಡಿಯೂರಪ್ಪ ಅವರಲ್ಲಿದೆ.
ಕೆಎಂಎಫ್ ನೂತನ ಹಾಲಿನ ಡೇರಿ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪಟ್ಟಿಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹೆಸರೂ ಕಾಣಿಸಿದೆ. ಅದರೆ, ಮೈಸೂರು ದಸರಾ ಉದ್ಘಾಟನೆ ಮಹೋತ್ಸವದಲ್ಲಿ ಸಿಎಂ ಶೆಟ್ಟರ್ ಪಾಲ್ಗೊಂಡಿರುವುದ್ದರಿಂದ ಈ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಹೇಳಿದೆ.












Click it and Unblock the Notifications