ರಾಜ್ಯಾಧ್ಯಕ್ಷರ ಬದಲಿಲ್ಲ; ಪಕ್ಷ ಸಂಘಟನೆಗೆ ಹೆಚ್ಚು ಒತ್ತು

ವಿದೇಶ ಪ್ರವಾಸದಲ್ಲಿರುವ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಅವರ ಅನುಪಸ್ಥಿತಿಯಲ್ಲಿ ರಾಷ್ಟ್ರಾಧ್ಯಕ್ಷ ಗಡ್ಕರಿ ಅವರ ನಿವಾಸದಲ್ಲಿ ನಿನ್ನೆ ತಡರಾತ್ರಿ ಸಭೆ ಸೇರಿದ್ದ ಕೆಲ ವರಿಷ್ಠರು ಈ ತೀರ್ಮಾನಕ್ಕೆ ಬಂದಿದ್ದಾರೆ.
ಆದಾಗ್ಯೂ ಅಧ್ಯಕ್ಷ ಸ್ಥಾನಕ್ಕೆ ಸಂಸದ ಪ್ರಹ್ಲಾದ್ ಜೋಷಿ ಹಾಗೂ ನಳಿನ್ ಕುಮಾರ್ ಕಟೀಲ್ ಅವರ್ನು ನೇಮಿಸುವ ಇರಾದೆಯೂ ವರಿಷ್ಠರಿಗೆ ಇದೆ. ಅಡ್ವಾಣಿಯ ಒಪ್ಪಿಗೆ ಪಡೆದು ಜತೆಗೆ ಆ ವೇಳೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಬಿಟ್ಟು ಹೊಸ ಪಕ್ಷ ಸ್ಥಾಪಿಸುವ ಬೆಳವಣಿಗೆಯನ್ನು ಪರಿಗಣಿಸಿ ಮುಂದಿನ ಹೆಜ್ಜೆಯಿಡಲು ಪಕ್ಷ ತೀರ್ಮಾನಿಸಿದೆ ಎಂದು ದೆಹಲಿ ಮೂಲಗಳು ತಿಳಿಸಿವೆ.
ಚುನಾವಣೆ ಎದುರಿಗೆ ಇದೆ. ಮೊದಲು ಪಕ್ಷವನ್ನು ಸಂಘಟಿಸೋಣ. ಎಲ್ಲರೂ ಒಟ್ಟಾಗಿ ದುಡಿಯೋಣ ಎಂದು ಈಶ್ವರಪ್ಪ ಮತ್ತು ಪಟಾಲಂಗೆ ಗಡ್ಕರಿ ಕಿವಿಮಾತು ಹೇಳಿದ್ದಾರೆ. ಯಡಿಯೂರಪ್ಪನವರಿಂದ ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಆಗಬಹುದಾದ ನಷ್ಟವನ್ನು ತುಂಬಿಕೊಳ್ಳುವ ಕಾರ್ಯತಂತ್ರ ರೂಪಿಸುವ ಕುರಿತೂ ಮಾತುಕತೆ ನಡೆಸಿದ್ದಾರೆಂದು ಹೇಳಲಾಗಿದೆ.
ಯಡಿಯೂರಪ್ಪ ನೂತನ ಪಕ್ಷ ಸ್ಥಾಪಿಸಿದರೆ ಅವರೊಂದಿಗೆ ಯಾರೆಲ್ಲ ತೆರಳಬಹುದು ಹಾಗೂ ಅದರಿಂದ ಪಕ್ಷಕ್ಕೆ ಆಗಬಹುದಾದ ನಷ್ಟವನ್ನು ಬೇರೆ ಪಕ್ಷದ ಮುಖಂಡರನ್ನು ಕರೆತರುವ ಮೂಲಕ ತುಂಬಿಕೊಳ್ಳವ ಕುರಿತು ಗಡ್ಕರಿಯವರೊಂದಿಗೆ ಮುಖಂಡರು ಚರ್ಚಿಸಿದ್ದಾರೆ.
ಯಡಿಯೂರಪ್ಪನವರ ಕೆಜೆಪಿ ಪಕ್ಷದ ಅಧಿಕೃತ ಆರಂಭಕ್ಕೆ ಮುನ್ನವೇ ರಾಜ್ಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಯಡಿಯೂರಪ್ಪ ಇಲ್ಲದೆ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವ ಸಂಬಂಧ ಮುಂದಿನ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications