ಯಡಿಯೂರಪ್ಪ ಪಕ್ಷ, ಸೈಕಲ್ ಚಿಹ್ನೆ ಆಗಲೇ ನೋಂದಣಿ
ಬೆಂಗಳೂರು, ಅ. 13: ಬಿಜೆಪಿಗೆ ಗುಡ್ ಬೈ ಹೇಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದೂವರೆ ವರ್ಷದ ಹಿಂದೆಯೇ ತಯಾರಿ ನಡೆಸಿದ್ದಾರೆಯೇ? ಬಿಜೆಪಿಯನ್ನು ತೊರೆಯಲು ಅವರು ಎಷ್ಟು ಕರಾರುವಕ್ಕಾಗಿ ಚಿಂತನೆ ನಡೆಸಿದ್ದಾರೆಂದರೆ ಒಂದೂವರೆ ವರ್ಷದ ಹಿಂದೆಯೇ ತಮ್ಮ ಹೊಸ ಪಕ್ಷ ಮತ್ತು ಅದರ ಚಿಹ್ನೆಯನ್ನೂ ನೋಂದಣಿ ಮಾಡಿಸಿ, ಬಿಜೆಪಿ ಹೈಕಮಾಂಡು ಮತ್ತು ತಮ್ಮ ವಿರೋಧಿಗಳ ಆಟಗಳನ್ನೆಲ್ಲ ಮಗುಮ್ಮಾಗಿ ಗಮನಿಸುತ್ತಿದ್ದರು.
2011ರ ಏಪ್ರಿಲ್ 28ರಂದು ಪದ್ಮನಾಭ್ ಪ್ರಸನ್ನಕುಮಾರ್ ಎಂಬುವವರು ಕರ್ನಾಟಕ ಜನತಾ ಪಕ್ಷ (KJP) ಎಂಬ ಹೊಸ ಪಕ್ಷವನ್ನು ನೋಂದಾಯಿಸಿಕೊಂಡಿದ್ದರು. ತಮ್ಮ ಪಕ್ಷಕ್ಕೆ ಚಿಹ್ನೆಯಾಗಿ ಸೈಕಲ್ ಗುರುತನ್ನೂ ಪಡೆದಿದ್ದರು. ಇದನ್ನೇ ಯಡಿಯೂರಪ್ಪ ಅವರು ಈಗ ಅಧಿಕೃತವಾಗಿ ತಮ್ಮ ಪಕ್ಷವನ್ನಾಗಿ ಘೋಷಿಸಲು ನಿರ್ಧರಿಸಿದ್ದಾರೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮೀಣ ಭಾಗದಲ್ಲಿ ಶಾಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸೈಕಲ್ ನೀಡಿದ್ದರಿಂದ ಜನಮಾನಸದಲ್ಲಿ 'ಯಡಿಯೂರಪ್ಪ ಸೈಕಲ್ ಇನ್ನೂ ಭದ್ರವಾಗಿ ಕುಳಿತಿದೆ. ಹಾಗಾಗಿ ಯಡಿಯೂರಪ್ಪನವರು ಸೈಕಲ್ ಗುರುತನ್ನೇ ಪಡೆಯಲು ಮುಂದಾಗಿದ್ದಾರೆ ಎಂಬ ಮಾತುಗಳು ಡಾಲರ್ಸ್ ಕಾಲನಿಯಿಂದ ಇಂದು ಕೇಳಿಬಂದಿದೆ.
ಯಡಿಯೂರಪ್ಪ ಅಧಿಕಾರಕ್ಕೆ ಬರಲೇಬೇಕು-ವಿಶ್ವನಾಥ್: ಈ ಹಿನ್ನೆಲೆಯಲ್ಲಿಯೇ ಯಡಿಯೂರಪ್ಪನವರು ನವೆಂಬರ್- ಡಿಸೆಂಬರ್ ವೇಳೆಗೆ ಹೊಸ ಪ್ರಾದೇಶಿಕ ಪಕ್ಷ ಕಟ್ಟುವುದಾಗಿ ಕಡಕ್ಕಾಗಿ ಹೇಳುತ್ತಿರುವುದು. ಇದೇ ವೇಳೆ, ತಮ್ಮ ಬೆಂಬಲಿಗರ ತಂಟೆಗೆ ಬಂದರೆ ಶೆಟ್ಟರ್ ಸರಕಾರ ಉಳಿಯೋಲ್ಲ ಎಂದು ಯಡಿಯೂರಪ್ಪ ಗುಡುಗಿದ್ದಾರೆ. ಇನ್ನು ಮೈಸೂರು ಸಂಸದ ಕಾಂಗ್ರೆಸ್ಸಿನ ಎಚ್ ವಿಶ್ವನಾಥ್ ಅವರಿಂದ ಯಡಿಯೂರಪ್ಪಗೆ ಆಯಾಚಿತವಾಗಿ ಬೆಂಬಲ ಸಿಕ್ಕಿದೆ.
ಅಪ್ಪ-ಮಕ್ಕಳು (ಜೆಡಿಎಸ್ ಗೌಡರ ಕುಟುಂಬ) ಅಧಿಕಾರಕ್ಕೆ ಬರಬಾರದು. ಹಾಗಾಬಾರದು ಅಂದರೆ ಯಡಿಯೂರಪ್ಪನವರು ಅಧಿಕಾರಕ್ಕೆ ಬರಬೇಕು. ಈ ಹಿಂದೆಯೂ ಪ್ರಾದೇಶಿಕ ಪಕ್ಷಗಳು ಚುನಾವನಾ ಯುದ್ಧಗಳನ್ನು ಗೆದ್ದಿಲ್ಲವೇ? ಹಾಗೇ ಯಡಿಯೂರಪ್ಪಾಜೀ ಅಹ ಏಕೆ ಯಶಸ್ವಿಯಾಗಬಾದರು ಎಂದು ಪ್ರಶ್ನಿಸಿರುವ ಎಚ್ ವಿಶ್ವನಾಥ್ ಅವರು ಯಾಕೋ ಅವರದೇ ಪಕ್ಷದ ಬಗ್ಗೆ ಕಮಕ್ ಕಿಮಕ್ ಅಂದಿಲ್ಲ.
ಸಿಟಿ ರವಿ ಷರಾ : ಇದೇ ವೇಳೆ ದೂರದ ಚಿಕ್ಕಮಗಳೂರಿನಿಂದ ಒಂದು ಕಾಲದಲ್ಲಿ ಯಡಿಯೂರಪ್ಪಾಜೀ ಆಪ್ತ ಶಿಷ್ಯ ಎನಿಸಿಕೊಂಡಿದ್ದ ಸಿಟಿ ರವಿ ಎಂಬ ಸಚಿವ, ಯಡಿಯೂರಪ್ಪ ಪಕ್ಷ ಬಿಟ್ಟು ಹೋದರೆ ಹೋಗಲಿ, ಬಿಜೆಪಿಗಿಂತ ಯಾರೂ ದೊಡ್ಡವರಿಲ್ಲ. ಪಕ್ಷದ ಕಾರ್ಯಕರ್ತರು ಯಡಿಯೂರಪ್ಪನವರನ್ನು ನಾಯಕರನ್ನಾಗಿಸಿದ್ದು. ಅದನ್ನು ಅವರು ಮರೆಯಬಾರದು. ಯಡಿಯೂರಪ್ಪ ಅವರು ಹೋದರೆ ಹೋಗಲಿ ಬಿಡಿ ಎಂದು ಷರಾ ಬರೆದಿದ್ದಾರೆ.












Click it and Unblock the Notifications