ಮೈಸೂರು ಜಿಪಂ ಅನ್ನೂ ಸ್ವಾಹಾ ಅಂದ ಯಡಿಯೂರಪ್ಪ
ಯಡಿಯೂರಪ್ಪ ಮೈಸೂರು ದರಬಾರು ಆರಂಭ: ನಾಲ್ಕು ದಿನಗಳ ಹಿಂದೆ ಮೊದಲ ಬಾರಿಗೆ ಮೈಸೂರು ಜಿಲ್ಲಾ ಪಂಚಾಯಿತಿ ಬಿಜೆಪಿ ಪಾಲಾಗಿದೆ. ಅಂದರೆ ಅಲ್ಲಿಯೂ ಬಿ.ಎಸ್. ಯಡಿಯೂರಪ್ಪ ಅವರದೇ ಗೆಲುವಿನ ನಗೆಯಾಗಿದೆ. ಅಷ್ಟೇ ಅಲ್ಲ, ರಾಜಕೀಯವಾಗಿ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆಯಿರುವ ಈ ಮೈಸೂರು ಜಿ.ಪಂ. ಚುನಾವಣೆಯಲ್ಲಿ ಯಡಿಯೂರಪ್ಪ ನಿಶ್ಚಿತವಾಗಿಯೂ ಮೇಲುಗೈ ಸಾಧಿಸಿದ್ದಾರೆ ಎನ್ನಬಹುದು.
ಅಂದಹಾಗೆ ಮೈಸೂರು ಜಿ.ಪಂ. ಸ್ಥಾನ ಗೆದ್ದಿರುವುದು ಬೇರೆ ಯಾರೂ ಅಲ್ಲ- ಯಡಿಯೂರಪ್ಪನವರ ಎಡ-ಬಲ ಎಲ್ಲಾ ಆಗಿರುವ ಕೆಪಿ ಸಿದ್ದಲಿಂಗಸ್ವಾಮಿ (ಸಿದ್ಲಿಂಗು) ಅವರ ಸೋದರ ಸಿದ್ದವೀರಪ್ಪ.
ಇಲ್ಲೂ ರಾಜಕೀಯ ಚಾಲ್ ಚಲಾಯಿಸಿರುವ ಯಡಿಯೂರಪ್ಪ ಅವರು ತಮ್ಮ ಮೇಲೆ ಒಂದೇ ಸಮನೆ ಉರಿದುಬೀಳುತ್ತಿರುವ ಮತ್ತು ದೂರದ ಸಂಭಾವ್ಯತೆಯಾಗಿ ಮುಖ್ಯಮಂತ್ರಿ ಕನಸು ಕಾಣುತ್ತಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸೋಲುಣಿಸಿದ್ದಾರೆ.
ಮೈಸೂರು ಜಿ.ಪಂ ಹಾಲಿ ಅಧ್ಯಕ್ಷ ಸಿದ್ದವೀರಪ್ಪ ಅವರು ವರುಣಾ ವಿಧಾನಸಭೆ ಕ್ಷೇತ್ರದವರು. ಅದು ಸಿದ್ದರಾಮಯ್ಯನವರ ಸ್ವಕ್ಷೇತ್ರವೂ ಹೌದು. ಅಲ್ಲಿಗೆ ಸಿದ್ದರಾಮಯ್ಯಗೆ ಅವರದೇ ಕ್ಷೇತ್ರದಲ್ಲಿ ನಡುಕ ತಂದಿದ್ದಾರೆ. ಅಷ್ಟೇ ಅಲ್ಲ, ವರುಣಾ ವಿಧಾನಸಭೆ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಸಿದ್ಲಿಂಗು ಯಾನೆ ಕೆಪಿ ಸಿದ್ದಲಿಂಗಸ್ವಾಮಿ ಅವರ್ನು ಕಣಕ್ಕೆ ಇಳಿಸುವ ಇರಾದೆ ಯಡಿಯೂರಪ್ಪ ಅವರದಾಗಿದೆ.
ಕುತೂಹಲದ ಸಂಗತಿಯೆಂದರೆ ಶತ್ರುವಿನ ಶತ್ರು ಮಿತ್ರ ಎಂಬಂತೆ ಸಿದ್ದರಾಮಯ್ಯನವರು ಯಾವ ಪಕ್ಷವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವನ್ನು ಅಪ್ಪಿದ್ದರೋ ಅದೇ (ಜೆಡಿಎಸ್) ಪಕ್ಷದ ಸದಸ್ಯರು ಯಡಿಯೂರಪ್ಪ ಅವರನ್ನು ಮೈಸೂರಿನಲ್ಲಿ ಒಪ್ಪಿ, ಅಪ್ಪಿದ್ದಾರೆ.