ಬೆಂಗಳೂರಿಗರ ನಿದ್ದೆಗೆಡಿಸುತ್ತಿರುವ ಬುಡುಬುಡಿಕೆಯವರು

ಐಟಿ ಬಿಟಿ ಬಂದ ಮೇಲಂತೂ ರಾಜಧಾನಿಯ ಪ್ರಜೆಗಳು ರಾತ್ರಿಯೆಲ್ಲಾ ನಿದ್ದೆಗೆಡುತ್ತಿದ್ದಾರೆ. ಬೆಳಗಿನ ಜಾವ ಯಾವಾಗಲೋ ಮಂಪರು ಹತ್ತಿ ನಿದ್ದೆಗೆ ಜಾರುತ್ತಾರೆ. ಆದರೆ ಆ ರಸಗಳಿಗೆಯಲ್ಲೇ ಈ ಬುಡುಬುಡಿಕೆ ದಾಸಯ್ಯಗಳು ಬೊಂಬಡಾ ಹೊಡೆಯುತ್ತಾ ಬೀದಿಬೀದಿ ಸುತ್ತತೊಡಗಿದರೆ ಏನು ಗತಿ?
ಹೌದು ಒಂದು ವಾರದಿಂದ ಈ ಬುಡುಬುಡಿಕೆಯವರು, ಬಸವನ ಜೋಡಿ ಬರುವವರು (ಗಂಗೆದ್ದಲು) ಬೆಳಗ್ಗೆ ನಾಲ್ಕೈದು ಗಂಟೆಗೆಲ್ಲ ಕೈಯಲ್ಲಿನ ಡಮರುಗ ಬಡಿಯುತ್ತಾ ಬೆಂಗಳೂರಿಗರ ನಿದ್ದೆ/ನೆಮ್ಮದಿಗೆ ಕೊಳ್ಳಿಯಿಡುತ್ತಿದ್ದಾರೆ.
ಆ ವೇಳೆಗೆಲ್ಲ ಎದ್ದು ಯಾವ ಪುಣ್ಯಾತ್ಮ ಇವರಿಂದ ಭವಿಷ್ಯ, ಅದೂ ಇದೂ ಅಂತ ಕೇಳುತ್ತಾ ಆ ಭಗವಂತನೇ ಬಲ್ಲ. ಆದರೆ ಇಂತಹವರ ಬಗ್ಗೆ ಎಚ್ಚರವಿರಲಿ. ಇವರು ಬೆಂಗಳೂರಿನ ಹೊರವಲಯದಲ್ಲೇ ಅಂತಲ್ಲ, ಹೃದಯಭಾಗವಾದ ಬಸವನಗುಡಿ, ಜಯನಗರ, ಮಲ್ಲೇಶ್ವರಂ ಕಡೆಗಳಲ್ಲೆಲ್ಲಾ ಕಾಣಿಸಿಕೊಳ್ಳುತ್ತಿದ್ದಾರೆ, ಕೇಳಿಬರುತ್ತಿದ್ದಾರೆ.
ಬುಡುಬುಡಿಕೆ ವೇಷ ಧರಿಸಿ ಬರುವವರು 'ಹಾಲಕ್ಕಿ ನುಡಿತೈತೆ, ನಿಮ್ಮ ಮಗ ಮೆನಯಲ್ಲಿ ಅಶುಭ ನಡೆಯೋದಿದೆ. ನಿಮ್ಮ ಗಂಡ ಇನ್ನೊಂದು ವಾರದಲ್ಲಿ ಬೈಕ್ ಅಪಘಾತದಲ್ಲಿ ಸಾಯುತ್ತಾನೆ. ವಿಶೇಷ ಪೂಜೆ ಮಾಡಿಸಿದರೆ ಗಂಡಾಂತರ ತಪ್ಪುತ್ತದೆ' ಎಂದೆಲ್ಲ ವಕ್ರೋಕ್ತಿಗಳನ್ನು ಹೇಳಿ ಮುಗ್ಧ ಜನರನ್ನು ವಂಚಿಸುತ್ತಾರೆ.
ಬಂಧನ: ಇಂತಹ ವಂಚಕನೊಬ್ಬನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆಯೂ ನಡೆದಿದೆ. ಬುಡುಬುಡಿಕೆ ದಾಸಯ್ಯನ ಮಾತಿಗೆ ಮರುಳಾಗಿ, ಪೂಜೆಗೆ ಕುಳಿತ ದಂಪತಿಯಿಂದ 3 ಸಾವಿರ ರೂಪಾಯಿ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಭಿಕ್ಷಕರಂತೆ ಮನೆ ಮನೆಗೂ ತೆರಳುವ ಬುಡುಬುಡಿಕೆ ದಾಸಯ್ಯಗಳು ಮಹಿಳೆಯರು ಇರುವ ಮನೆಯ ಮೇಲೆ ನಿಗಾ ಇಡುತ್ತಾರೆ. ಇಂತಹವರು ತಮ್ಮ ಬಲೆಗೆ ಬೀಳುತ್ತಾರೆ ಎಂಬ ಸುಳಿವು ಸಿಕ್ಕಿದರೆ ಅವರಲ್ಲಿ ಅನಗತ್ಯವಾಗಿ ಗಂಡಾಂತರಗಳ ಬಗ್ಗೆ ದಿಗಿಲು ಹುಟ್ಟಿಸುತ್ತಾರೆ. ಪಝೆ ಮಾಡಿಸಿದರೆ ಕಂಟಕ ಪರಿಹಾರವಾಗುತ್ತದೆ ಎಂದು ಹೇಳಿ ಹಣ ಪೀಕುತ್ತಾರೆ.
ಇಂತಹವರ ಬಗ್ಗೆ ಜನ ಜಾಗೃತರಾಗಿರಬೇಕು. ವಂಚಕರ ಮಾತಿಗೆ ಮರುಳಾದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ನಗರದ ಪೊಲೀಸರು ಎಚ್ಚರಿಸಿದ್ದಾರೆ. ಯಾವುದಕ್ಕೇ ಆಗಲಿ, ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.












Click it and Unblock the Notifications